ಸಂತ ಫಿಲೋಮಿನಾ ಕಲೇಜಿನಲ್ಲಿ ರಾಷ್ಟ್ರೀಯ ಶಿಕ್ಷಣ ದಿನಾಚರಣೆ
Thursday, November 13, 2025
ಪುತ್ತೂರು: ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ ಭಾರತದ ಪ್ರಥಮ ಶಿಕ್ಷಣ ಮಂತ್ರಿ ಮೌಲನಾ ಅಬ್ದುಲ್ ಕಲಾಂ ಆಜಾದ್ರವರ ಜನ್ಮ ದಿನದ ನೆನಪಿಗಾಗಿ ರಾಷ್ಟ್ರೀಯ ಶಿಕ್ಷಣ ದಿನಾಚರಣೆಯನ್ನು ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಕಾಲೇಜಿನ ಸ್ನಾತ್ತಕೋತ್ತರ ಸೆಮಿನಾರ್ ಹಾಲ್ನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾಲೇಜಿನ ಕುಲಸಚಿವರಾದ (ಶೈಕ್ಷಣಿಕ) ಡಾ. ನೋರ್ಬಟ್ ಮಸ್ಕರೇನ್ಹಸ್ ಅವರು ಮಾತನಾಡಿ, ರಾಷ್ಟ್ರೀಯ ಶಿಕ್ಷಣ ದಿನವನ್ನು ಹನ್ನೊಂದು ವರ್ಷಗಳ ಕಾಲ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಅವರ ಸ್ಮರಣಾರ್ಥ ಆಚರಿಸಲ್ಪಡುತ್ತದೆ. ಶಿಕ್ಷಣದಲ್ಲಿ ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು ಎಂಬುದನ್ನು ಈ ದಿನವು ಸಾರುತ್ತದೆ. ನವಭಾರತ ನಿರ್ಮಾಣಕ್ಕೆ ಶಿಕ್ಷಣವೇ ಆಧಾರ ಸ್ತಂಭ ಎಂದು ನುಡಿದ ಕಲಾಂ ಅವರು ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಶಿಕ್ಷಣ ಕೇವಲ ಭೋದನೆ ಅಲ್ಲ, ಮೌಲ್ಯಗಳನ್ನು ಬಿತ್ತುವ ಪವಿತ್ರ ಸೇವೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಉಪಪ್ರಾಂಶುಪಾಲ ಡಾ. ವಿಜಯಕುಮಾರ್ ಮೊಳೆಯಾರ್ ಮಾತನಾಡಿ, ಶಿಕ್ಷಣ ದಿನಾಚರಣೆ ಕೇವಲ ತೋರಿಕೆಯ ಆಚರಣೆಯಾಗಿ ಮುಗಿಯದಿರಲಿ. ಇಂತಹ ಆಚರಣೆಗಳು ಮುಂದಿನ ಪೀಳಿಗೆಗೆ ಮಹಾತ್ಮಾರು ಮಾಡಿದ ಸಾಧನೆಯ ನೆನಪಿಸಲಿ. 150 ವರ್ಷಗಳ ಹಿಂದೆ ಜನಿಸಿದ ಕಲಾಂರವರು ಸಂಗೀತ, ಸಾಹಿತ್ಯ, ಸಂಸ್ಕೃತಿಗಳನ್ನು ಉದ್ದೀಪನಗೊಳಿಸುವ ಚಿಂತನೆಯಿಂದ ಸಂಗೀತ , ಸಾಹಿತ್ಯ ಹಾಗೂ ಲಲಿತಾಕಲಾ ಅಕಾಡೆಮಿಗಳನ್ನು ಪ್ರಾರಂಭಿಸಿದರು. ಜ್ಞಾನವನ್ನು ಸಮರ್ಥವಾಗಿ ಬಳಸದಿದ್ದರೆ ಅದು ವ್ಯರ್ಥ ಎಂದು ನಂಬಿದ ಮಹಾಚೇತನದ ಸ್ಮರಣೆ ಈ ರೀತಿಯ ಆಚರಣೆಗಳಿಂದ ಅರ್ಥಪೂರ್ಣಗೊಳ್ಳುತ್ತದೆ ಎಂದರು.
ಕಾಲೇಜಿನ ವಿದ್ಯಾರ್ಥಿ ಪರಿಷತ್ ನಾಯಕ ಮುಝಮಿಲ್ ಐ. ಸ್ವಾಗತಿಸಿ, ಕಾರ್ಯದರ್ಶಿ ಯೂಸುಫ್ ಅಲ್ಫಜ್ ವಂದಿಸಿದರು. ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಡಾ. ರಾಧಾ ಕೃಷ್ಣ ಗೌಡ, ಸ್ಪರ್ಲ್ ಫೆರೆರಾ ರೋಡ್ರಿಗಸ್, ಸಾರ್ವಜನಿಕ ಸಂಪರ್ಕಾಧಿಕಾರಿ ಭಾರತಿ ಎಸ್ ರೈ ಹಾಗೂ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಭಾಗವಹಿಸಿದರು.


