ಡಿ.7 ರಂದು ಗೋಂದೋಳು ಪೂಜೆ, ಆಚಾರ ವಿಚಾರ ಕುರಿತ ಪುಸ್ತಕ ಬಿಡುಗಡೆ
ಸುಳ್ಯ: ಸುಳ್ಯ ತಾಲೂಕು ಮರಾಟಿ ಸಮಾಜ ಸೇವಾ ಸಂಘ, ಮರಾಟಿ ಧಾರ್ಮಿಕ ಚಿಂತನಾ ಸಮಿತಿ ಇದರ ವತಿಯಿಂದ ಮರಾಟಿಗರ ಗೋಂದೋಳು ಪೂಜೆ ಹಿನ್ನಲೆ ಆಚರಣೆಯ ವಿಧಿ ವಿಧಾನಗಳು ಇತರ ಪ್ರಮುಖ ಆಚರಣೆಗಳು ಎಂಬ ಪುಸ್ತಕ ಬಿಡುಗಡೆ ಸಮಾರಂಭ ಮತ್ತು ವಾರ್ಷಿಕೋತ್ಸವ ಡಿ.7 ರಂದು ಅಂಬೆಟಡ್ಕದ ಗಿರಿದರ್ಶನಿ ಸಭಾಭವನದಲ್ಲಿ ನಡೆಯಲಿದೆ ಎಂದು ಮರಾಟಿ ಧಾರ್ಮಿಕ ಚಿಂತನಾ ಸಮಿತಿ(ಸಂಪಾದಕ ಮಂಡಳಿ) ಹಾಗೂ ಮರಾಟಿ ಸಮಾಜ ಸೇವಾ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಪಾದಕ ಮಂಡಳಿಯ ಪ್ರಧಾನ ಸಂಪಾದಕ ಗೋಪಾಲ ನಾಯ್ಕ ದೊಡ್ಡೇರಿ ಹಾಗೂ ಸಂಘದ ಅಧ್ಯಕ್ಷ ಬಾಲಕೃಷ್ಣ ನಾಯ್ಕ್
ಮರಾಟಿ ಸಮುದಾಯದ ಕುಟುಂಬಗಳಲ್ಲಿ ನಡೆದುಕೊಂಡು ಬರುತ್ತಿರುವ ಪ್ರಮುಖ ಆರಾಧನೆಯಾಗಿರುವ ಶ್ರೀ ಮಹಮ್ಮಾಯಿ ದೇವಿಯ ಗೋಂದೋಳು ಪೂಜೆ ಸಹಿತ, ಮದುವೆ, ಇನ್ನಿತರ ಆಚಾರ ವಿಚಾರಗಳು ಏಕರೂಪದಲ್ಲಿರಬೇಕೆಂಬ ಕಾರಣಕ್ಕೆ ರಚಿತವಾಗಿರುವ ಗೋಂದೋಳು ಪೂಜೆಯ ಹಿನ್ನೆಲೆ, ಆಚರಣೆಯ ವಿಧಿವಿಧಾನಗಳು ಮತ್ತು ಇತರ ಪ್ರಮುಖ ಆಚರಣೆಗಳು ಪುಸ್ತಕ ದಲ್ಲಿರಲಿದೆ. ಕಾರ್ಯಕ್ರಮವನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಅಮೈ ಮಹಾಲಿಂಗ ನಾಯ್ಕ್ ಉದ್ಘಾಟಿಸಲಿದ್ದಾರೆ. ಪುಸ್ತಕ ಬಿಡುಗಡೆಯನ್ನು ಪುತ್ತೂರು ಶ್ರೀ ಮಹಮ್ಮಾಯಿ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಕೆ.ಶೀನ ನಾಯ್ಕ್ ಮಾಡಲಿದ್ದಾರೆ.
ಸಭಾ ಕಾರ್ಯಕ್ರಮದ ಬಳಿಕ ಇತ್ತೀಚೆಗೆ ನಡೆದ ಕ್ರೀಡಾಕೂಟದ ಬಹುಮಾನ ವಿತರಣೆ ಮತ್ತು ವಾರ್ಷಿಕೋತ್ಸವದ ಪ್ರಯುಕ್ತ ವಿವಿಧ ಸಾಂಸ್ಕೃತಿಕ ವೈವಿಧ್ಯ ನಡೆಯಲಿದೆ ಎಂದು ಬಾಲಕೃಷ್ಣ ನಾಯ್ಕ್ ಹಾಗೂ ಗೋಪಾಲ ನಾಯ್ಕ್ ದೊಡ್ಡೇರಿ ತಿಳಿಸಿದ್ದಾರೆ.
ಸುಳ್ಯ ಮರಾಟಿ ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷ ಸೀತಾನಂದ ಬೇರ್ಪಡ್ಕ, ಪ್ರಧಾನ ಕಾರ್ಯದರ್ಶಿ ರಮೇಶ್ ನೀರಬಿದಿರೆ, ಕಾರ್ಯಕಾರಿ ಸದಸ್ಯ ಜನಾರ್ದನ ನಾಯ್ಕ್ ಕೇರ್ಪಳ, ಪುಸ್ತಕದ ಉಪಸಂಪಾದಕ ಭವಾನಿಶಂಕರ ಕಲ್ಮಡ್ಕ, ಗಿರಿದರ್ಶಿನಿ ಸಭಾಭವನದ ಕಚೇರಿ ವ್ಯವಸ್ಥಾಪಕ ಪುನಿತ್ ಮುಂಡಕಜೆ ಉಪಸ್ಥಿತರಿದ್ದರು.