ಬೀದಿ ನಾಯಿ ಸಂರಕ್ಷಣಾ ದಿನಾಚರಣೆ: ಜನಜಾಗೃತಿಗಾಗಿ ಸ್ಟಿಕ್ಕರ್ ಬಿಡುಗಡೆ
Saturday, November 8, 2025
ಉಡುಪಿ: ಶ್ರೀ ಕ್ಷೇತ್ರ ಶಂಕರಪುರ ದ್ವಾರಕಾಮಾಯಿ ಮಠದ ಶ್ರೀಸಾಯಿ ಈಶ್ವರ್ ಗುರೂಜಿ ಅವರಿಂದ ಬೀದಿ ಶ್ವಾನ ಸಂರಕ್ಷಣಾ ದಿನದ ಜನ ಜಾಗೃತಿಯನ್ನು ಮೂಡಿಸುವ ಸ್ಟಿಕ್ಟರ್ನ್ನು ಶ್ರೀ ಸಾಯಿ ಮುಖ್ಯಪ್ರಾಣ ಕಾಲಭೈರವ ದೇವಸ್ಥಾನದಲ್ಲಿ ನ.7ರಂದು ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿ, ಶಿಷ್ಯ ವರ್ಗ, ಭಕ್ತವೃಂದದಿಂದ ನ.12ರಂದು ಬೀದಿ ಶ್ವಾನ ಸಂರಕ್ಷಣಾ ದಿನಾಚರಣೆ ಯನ್ನು ಆಚರಿಸಲಾಗುತ್ತಿದೆ. ಶ್ವಾನ ಸಂರಕ್ಷಣೆಯ ಮುಖ್ಯ ಉದ್ದೇಶಗಳಡಿ ಬೀದಿ ಶ್ವಾನಗಳ ಕಷ್ಟ ಮತ್ತು ಅವುಗಳ ರಕ್ಷಣೆಯ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಉದ್ದೇಶಿಸಲಾಗಿದೆ ಎಂದರು.
ಬೀದಿ ಶ್ವಾನಗಳಿಗೆ ಲಸಿಕೆ ಮತ್ತು ವೈದ್ಯಕೀಯ ಚಿಕಿತ್ಸೆ ನೀಡುವುದರ ಮಹತ್ವವನ್ನು ಎತ್ತಿ ತೋರಿಸುವುದು. ಬೀದಿ ಶ್ವಾನಗಳನ್ನು ದತ್ತು ತೆಗೆದುಕೊಳ್ಳಲು ಮತ್ತು ಅವುಗಳ ಆರೈಕೆ ಮಾಡಲು ಉತ್ತೇಜಿಸುವುದು. ಬೀದಿ ಶ್ವಾನಗಳ ಸಂರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಾಣಿ ದಯಾ ಸಂಘ ಸಂಸ್ಥೆಗಳಿಗೆ ದೇಣಿಗೆ ನೀಡಲು ಪ್ರೋತ್ಸಾಹಿಸುವುದು ಅವಶ್ಯಕವಾಗಿದೆ. ಆ ನಿಟ್ಟಿನಲ್ಲಿ ಈಗಾಗಲೇ ಬೀದಿ ಶ್ವಾನಗಳ ಆರೈಕೆಯ ನಿರತರನ್ನು ಗುರುತಿಸಿ ಬೆಂಬಲವಾಗಿ ಶ್ವಾನಗಳಿಗೆ ಬೇಕಾದ ಆಹಾರ ಪದಾರ್ಥಗಳನ್ನು ನೀಡಲಾಗುತ್ತಿದೆ ಎಂದರು.
ಈ ಸಂದರ್ಭ ಪ್ರಮುಖರಾದ ಅಜಯ್ ಉಡುಪಿ, ಮಂಜುಳಾ ಬಂಟಕಲ್, ಪ್ರಥ್ವಿ ಪೈ ಅಂಬಲಪಾಡಿ, ಸುಶ್ಮಿತಾ ಅಲೆವೂರು, ಜ್ಯೋತಿ ಚೇತನ್ ಉದ್ಯಾವರ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.



