ಕಾರ್ಕಳ ಕ್ರಿಯೇಟಿವ್ ಕಾಲೇಜು ವಾರ್ಷಿಕೋತ್ಸವ

ಕಾರ್ಕಳ ಕ್ರಿಯೇಟಿವ್ ಕಾಲೇಜು ವಾರ್ಷಿಕೋತ್ಸವ

ಕಾರ್ಕಳ: ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ವಾರ್ಷಿಕೋತ್ಸವ ಆವಿರ್ಭವವು “ಸಿಂದೂರ ಸಂಭ್ರಮ” ಪರಿಕಲ್ಪನೆಯಲ್ಲಿ ಡಿಸೆಂಬರ್ 4,5,6ರಂದು ಜರುಗಿತು.

ಎಸ್. ಕೆ.ಎಫ್ ಎಲಿಕ್ಸರ್ ಇಂಡಿಯಾ ಮತ್ತು ಮುನಿಯಾಲು ಸಂಜೀವಿನಿ ಗೋಧಾಮ ಸ್ಥಾಪಕರಾದ ಡಾ. ಜಿ. ರಾಮಕೃಷ್ಣ ಆಚಾರ್ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿ ಕಾಲೇಜುಗಳು ಬರಿಯ ಪಠ್ಯದ ಅಭ್ಯಾಸ ನೀಡುವ ಸ್ಥಳವಲ್ಲ. ವಿದ್ಯಾರ್ಥಿಗಳ ಸಾಮರ್ಥ್ಯವನ್ನೆತ್ತಿ ಹಿಡಿಯುವ ವೇದಿಕೆಗಳಾಗಬೇಕು. ಅಂತಹ ವೇದಿಕೆಗಳನ್ನು ವಿದ್ಯಾರ್ಥಿಗಳಿಗೆ ಕಲ್ಪಿಸಿ ಕೊಡುತ್ತಿರುವ ಕ್ರಿಯೇಟಿವ್ ಕಾಲೇಜಿನ ಬಗ್ಗೆ ಶ್ಲಾಘನೆಯನ್ನು ವ್ಯಕ್ತಪಡಿಸಿದರು.

ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾದ ವಿ. ಸುನಿಲ್ ಕುಮಾರ್, ವಿಶ್ರಾಂತ ಪ್ರಾಚಾರ್ಯರಾದ ಕೆ. ಗುಣಪಾಲ್ ಕಡಂಬ, ಖ್ಯಾತ ನಟ ಶನಿಲ್ ಗೌತಮ್ ಇವರು ತಮ್ಮ ಮಾತುಗಳಲ್ಲಿ ಪ್ರತಿಭೆಗಳನ್ನು ಗುರುತಿಸಿ ಬೆಳೆಸುವಂತಹ ಕಾರ್ಯಕ್ರಮಗಳನ್ನು ಕಾಲೇಜು ಕೈಗೊಂಡಿರುವ ಬಗ್ಗೆ ಶ್ಲಾಘಿಸಿದರು.

ರಾತ್ರಿ ಅಂತಾರಾಷ್ಟ್ರೀಯ ಜಾದೂಗಾರ ಕುದ್ರೋಳಿ ಗಣೇಶ್ ರವರಿಂದ ಮ್ಯಾಜಿಕ್ ಶೋ ಕಾರ್ಯಕ್ರಮ ನಡೆಯಿತು. ಡಿ.06 ರಂದು ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನೆರವೇರಿತು. ಈ ಸಂದರ್ಭದಲ್ಲಿ 180 ವಿದ್ಯಾರ್ಥಿಗಳಿಗೆ ಸನ್ಮಾನದೊಂದಿಗೆ ಪ್ರೋತ್ಸಾಹ ಧನವನ್ನೂ ನೀಡಲಾಯಿತು.

ಮುಖ್ಯ ಅತಿಥಿ ವಿರೂಪಾಕ್ಷ ದೇವರಮನೆ ಇವರು 'ವಿದ್ಯಾರ್ಥಿಗಳ ಸಾಧನೆ ಎಂದರೆ ಕೇವಲ ಅಂಕಗಳಲ್ಲ. ವ್ಯಕ್ತಿತ್ವ ನಿರ್ಮಾಣವೂ ಅದೇ ಮಟ್ಟಿಗೆ ಮಹತ್ವದ್ದು. ವಿದ್ಯಾರ್ಥಿಗಳು ಸತತ ಅಭ್ಯಾಸದೊಂದಿಗೆ ತಮ್ಮ ಧ್ವನಿಯನ್ನು ಸ್ವಸ್ಥ ಸಮಾಜ ನಿರ್ಮಾಣದತ್ತ ರವಾನಿಸಬೇಕು’ ಎಂಬ ಸಂದೇಶವನ್ನು ನೀಡಿದರು.

ಈ ಸಂದರ್ಭದಲ್ಲಿ ವಂದೇ ಮಾತರಂ ಗೀತೆಯ 150ನೇ ವರ್ಷಾಚರಣೆಯನ್ನು ವೇದಿಕೆಯಲ್ಲಿ 150 ವಿದ್ಯಾರ್ಥಿಗಳ ಸಮ್ಮುಖದಲ್ಲಿ ಗೀತ ಗಾಯನದೊಂದಿಗೆ ನೆರವೇರಿಸಲಾಯಿತು.

ಅಪರಾಹ್ನ ಚುಟುಕು ಚಕ್ರವರ್ತಿ ಎಚ್. ದುಂಡಿರಾಜ್ ರವರ ಉಪಸ್ಥಿತಿಯಲ್ಲಿ ’ಕ್ರಿಯೇಟಿವ್ ಸಾಹಿತ್ಯ ಸಾಂಗತ್ಯ ’ಕಾರ್ಯಕ್ರಮ ಜರುಗಿತು. ದುಂಡಿರಾಜ್ ರವರು ’ ಯುವ ಮನಸ್ಸುಗಳ ಓದಿನ ಅಭ್ಯಾಸವೇ ಅವರ ಬದುಕಿನ ಶಕ್ತಿ ಕೇಂದ್ರ. ಪುಸ್ತಕವು ವ್ಯಕ್ತಿಯ ಚಿಂತನೆಗೆ ದಿಕ್ಕು ತೋರಿಸುವ ಗುರು’ ಎಂದು ಹೇಳಿದರು.

ಸಂಜೆ ಸಮಾರೋಪ ಸಮಾರಂಭ ಜರುಗಿತು. ಪ್ರಾಚಾರ್ಯ ವಿದ್ವಾನ್ ಗಣಪತಿ ಭಟ್ ರವರು ವಾರ್ಷಿಕ ವರದಿ ವಾಚಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಕರ್ನಾಟಕ ಸರ್ಕಾರದ ಮಾಜಿ ಮುಖ್ಯಮಂತ್ರಿಗಳಾದ ವೀರಪ್ಪ ಮೊಯ್ಲಿ ರವರು ’ ಶಿಕ್ಷಣ ಎಂದರೆ ಉದ್ಯೋಗ ಸಿಗುವ ಮಾರ್ಗ ಮಾತ್ರವಲ್ಲ. ಅದು ವ್ಯಕ್ತಿತ್ವ ನಿರ್ಮಾಣದ ಮೂಲನೆಲೆ. ಯುವಜನಾಂಗ ಮಾನವೀಯತೆಯೊಂದಿಗೆ ಕೈಜೋಡಿಸಿದಾಗ ಸಮಾಜದಲ್ಲಿ ನಿಜವಾದ ಬದಲಾವಣೆ ನಡೆಯುತ್ತದೆ ಎನ್ನುತ್ತಾ ಕ್ರಿಯೇಟಿವ್ ಕಾಲೇಜು ನಡೆಸುತ್ತಿರುವ ನೈತಿಕತೆ ಆಧಾರಿತ ಶೈಕ್ಷಣಿಕ ಚಟುವಟಿಕೆಗಳನ್ನು ಶ್ಲಾಘಿಸಿ, ಸಂಸ್ಥೆಯ ಮುಂದಿನ ಬೆಳವಣಿಗೆಗೆ ಶುಭ ಹಾರೈಸಿದರು.

ಸಂಸ್ಥೆ ಆರಂಭವಾಗಿ ಐದು ವರ್ಷಗಳು ಪೂರ್ಣಗೊಳ್ಳುವ ಶುಭಸಂದರ್ಭದಲ್ಲಿ ಐದು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಬೋಧಕೇತರ ಸಿಬ್ಬಂದಿ ವರ್ಗದವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಸಂಜೆ ಕ್ರಿಯೇಟಿವ್ ವಿದ್ಯಾರ್ಥಿ–ವಿದ್ಯಾರ್ಥಿನಿಯರಿಂದ ”ಸಿಂದೂರ ಸಂಭ್ರಮ” ಪರಿಕಲ್ಪನೆಯ ಅತ್ಯಂತ ವರ್ಣ ರಂಜಿತ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಾರ್ಷಿಕೋತ್ಸವ ಸಮಾರಂಭವು ಸಂಪನ್ನಗೊಂಡಿತು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿ, 2500 ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು, ಬೋಧಕ–ಬೋಧಕೇತರ ವರ್ಗದವರು, ಪೋಷಕರು, ಸಾರ್ವಜನಿಕರು ಪಾಲ್ಗೊಂಡಿದ್ದರು.

ಡಿ.4ರಂದು ಕ್ರಿಯೇಟಿವ್ ಯಕ್ಷಾರಾಧನಮ್ ಹವ್ಯಾಸಿ ಕಲಾವಿದರಿಂದ ’ಶ್ರೀರಾಮಾನುಗ್ರಹ ಸಿಂದೂರ ವಿಜಯ’ ಯಕ್ಷಗಾನ ಪ್ರದರ್ಶನ ನಡೆಯಿತು.

ಡಿ.5 ರಂದು ದಿ. ಎಚ್.ಎಸ್ ವೆಂಕಟೇಶಮೂರ್ತಿಯವರ ಸವಿ ನೆನಪಿನ ಕುರಿತ ’ಭಾವ ನಮನ’ ಭಾವಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು.

ಖ್ಯಾತ ನಿರೂಪಕ ಅವಿನಾಶ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ವಿವಿಧ ಸ್ಪರ್ಧಾವಳಿಗಳ ಬಹುಮಾನ ವಿತರಣಾ ಕಾರ್ಯಕ್ರಮ ಜರುಗಿತು. ಸಹ ಸಂಸ್ಥಾಪಕರಾದ ವಿದ್ವಾನ್ ಗಣಪತಿ ಭಟ್ ರವರು ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article