‘ಮಗು ಭಾಗ್ಯ’ ಪ್ರಕರಣ-ನ್ಯಾಯಕ್ಕಾಗಿ ಸಂಧಾನದ ಬದಲು ಕಾನೂನು ಹೋರಾಟ: ಕೆ.ಪಿ. ನಂಜುಂಡಿ

‘ಮಗು ಭಾಗ್ಯ’ ಪ್ರಕರಣ-ನ್ಯಾಯಕ್ಕಾಗಿ ಸಂಧಾನದ ಬದಲು ಕಾನೂನು ಹೋರಾಟ: ಕೆ.ಪಿ. ನಂಜುಂಡಿ


ಮಂಗಳೂರು: ಪುತ್ತೂರು ಬಿಜೆಪಿ ಮುಖಂಡನ ಪುತ್ರ ಮಗು ಕರುಣಿಸಿ ವಿವಾಹವಾಗದೆ ವಂಚಿಸಿದ ಪ್ರಕರಣದಲ್ಲಿ ಇನ್ನು ಸಂಧಾನ ಬದಲು ಕಾನೂನು ಹೋರಾಟ ನಡೆಸಲಾಗುವುದು ಎಂದು ವಿಶ್ವಕರ್ಮ ಸಮಾಜದ ಮುಂದಾಳು, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಪಿ. ನಂಜುಂಡಿ ಹೇಳಿದ್ದಾರೆ.

ಮಂಗಳೂರಿನಲ್ಲಿ ಸೋಮವಾರ ಮಗು ಸಹಿತ ಸಂತ್ರಸ್ತೆ ಜೊತೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷ್ಣ ಜೆ. ರಾವ್ ಮತ್ತು ಸಂತ್ರಸ್ತೆ ಸ್ನೇಹಿತರಾಗಿದ್ದು, ಆಕೆ ಆತನಿಂದ ಗರ್ಭಧರಿಸಿ ಮಗುವಿಗೆ ಜನ್ಮ ನೀಡಿದ್ದಾಳೆ. ಡಿಎನ್‌ಎ ಪರೀಕ್ಷೆಯಲ್ಲಿ ಮಗುವಿನ ತಂದೆ ಕೃಷ್ಣನೇ ಎಂದು ದೃಢಪಟ್ಟಿದೆ. ಹೀಗಾಗಿ ಆಕೆಯನ್ನು ವಿವಾಹವಾಗುವಂತೆ ಹಲವು ಬಾರಿ ಪ್ರಯತ್ನ ನಡೆಸಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಅಂತಿಮವಾಗಿ ಕಾನೂನು ಹೋರಾಟ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಯುವತಿಯ ಮೂಲ ಬಡ ಕುಟುಂಬವಾಗಿದ್ದು, ಇಬ್ಬರೂ ಒಂದಾಗಿ ಸಂಸಾರ ಮುನ್ನಡೆಸುವ ಯೋಚನೆಯಲ್ಲಿ ಆತನ ಪೋಷಕರ ಜೊತೆ ಸಂಧಾನ ನಡೆಸಲಾಗಿದೆ. ಆದರೆ ಆತನ ಪೋಷಕರು ವಿವಾಹಕ್ಕೆ ಆತ ಸಮ್ಮತಿಸುವುದಿಲ್ಲ ಎಂದು ಹೇಳುತ್ತಿದ್ದಾರೆ. ಹೀಗಾಗಿ ಸಂಧಾನ ಮುರಿದುಬಿದ್ದಿದ್ದು, ಕಾನೂನು ಹೋರಾಟವೇ ಅನಿವಾರ್ಯವಾಗಿದೆ. ಅದರಲ್ಲಿ ಸಂತ್ರಸ್ತೆಗೆ ನ್ಯಾಯಸಿಗುತ್ತದೆ ಎಂಬ ಭರವಸೆ ಇದೆ ಎಂದರು.

ಡಿಎನ್‌ಎ ಪರೀಕ್ಷೆಯಲ್ಲೂ ಮಗುವಿನ ತಂದೆ ಕೃಷ್ಣನೇ ಎಂದು ದೃಢಪಟ್ಟ ಬಳಿಕವೂ ಆತ ಮದುವೆಗೆ ನಿರಾಕರಿಸುತ್ತಿದ್ದು, ಹೀಗಾಗಿ ಆತನ ಪೋಷಕರ ಜೊತೆಗಿನ ಸಂಧಾನ ಮಾತುಕತೆ ಮುರಿದುಬಿದ್ದಿದೆ. ಇನ್ನು ಏನಿದ್ದರೂ ಕಾನೂನು ಹೋರಾಟ ಮುಂದುವರಿಯಲಿದೆ ಎಂದರು.

ದ.ಕ. ಹಿಂದುತ್ವದ ನೆಲ, ವಿಶ್ವಕರ್ಮ ಸಮಾಜವವೂ ಅದನ್ನೇ ನಂಬಿಕೊಂಡು ಬಂದಿದೆ. ಆದರೆ ಈ ಬಡ ಕುಟುಂಬ ವಂಚನೆಗೆ ಒಳಗಾಗಿದೆ. ಕೃಷ್ಣ ಮತ್ತು ಪೂಜಾ ಇಬ್ಬರೂ ತಪ್ಪು ಮಾಡಿದ್ದರೂ ಮಗುವಾದ ಕಾರಣ ಅವರನ್ನು ಒಂದು ಮಾಡಿ ಈ ಪ್ರಕರಣವನ್ನು ಸುಖಾಂತ್ಯಗೊಳಿಸುವ ನಮ್ಮ ಪ್ರಯತ್ನ ಈಡೇರುತ್ತಿಲ್ಲ. ಕೃಷ್ಣನ ಪೋಷಕರು ಈಡೇರಿಸಲು ಸಾಧ್ಯವಾಗದ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಅವುಗಳನ್ನು ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಒಂದೆರಡು ದಿನಗಳಲ್ಲಿ ಬಹಿರಂಗಪಡಿಸಲಾಗುವುದು ಎಂದರು.

ಪ್ರಸಕ್ತ ಈ ಪ್ರಕರಣ ಕೇಸು ಕೋರ್ಟ್ನಲ್ಲಿ ಇರುವುದರಿಂದ ನಾನು ಹೆಚ್ಚೇನೂ ಮಾತನಾಡುವುದಿಲ್ಲ. ಮಗುವಿನ ತಂದೆ ಹಾಗೂ ಕುಟುಂಬದ ವಿರುದ್ಧ ಈಗಾಗಲೇ ಕೇಸು ದಾಖಲಾಗಿದೆ. ಮಾಧ್ಯಮಕ್ಕೆ ಹೇಳಿಕೆ ನೀಡುವ ವಿಚಾರದಲ್ಲಿ ಪೊಲೀಸ್ ಠಾಣೆಯಲ್ಲಿ ಮುಚ್ಚಳಿಕೆ ಬರೆದಿರುವುದು ಅಥವಾ ತಡೆಯಾಜ್ಞೆ ತಂದಿರುವುದಾಗಿ ಹೇಳುತ್ತಿರುವುದು ಸರಿಯಲ್ಲ. ನಾನು ಯಾವತ್ತೂ ಸಂತ್ರಸ್ತ ಕುಟುಂಬದ ಜೊತೆ ಇದ್ದೇನೆ. ನಾನು ಸಂತ್ರಸ್ತರ ಜೊತೆಗೆ ಇಲ್ಲ ಎಂಬ ನನ್ನ ಮೇಲಿನ ಆರೋಪದಲ್ಲಿ ಹುರುಳಿಲ್ಲ, ನಾನು ಸಂತ್ರಸ್ತೆಯ ಜೊತೆ ಇದ್ದು ನ್ಯಾಯಕ್ಕಾಗಿ ಶ್ರಮಿಸುತ್ತೇನೆ. ಈಗಾಗಲೇ ಸಂತ್ರಸ್ತೆಯ ಕುಟುಂಬಕ್ಕೆ ಬೇಕಾದ ಅಗತ್ಯ ನೆರವುಗಳನ್ನು ನೀಡುತ್ತಿದ್ದೇನೆ.

ಸಂಧಾನ ಪ್ರಕ್ರಿಯೆ ವೇಳೆ ಆರೋಪಿ ಯುವಕನ ಕುಟುಂಬದವರು ಹಲವು ಬೇಡಿಕೆ ಇರಿಸಿದ್ದಾರೆ, ಅವುಗಳು ಏನೆಂಬುದನ್ನು ಒಂದೆರಡು ದಿನಗಳಲ್ಲಿ ಕಾನೂನು ತಜ್ಞರೊಂದಿಗೆ ಚರ್ಚಿಸಿ ಬಹಿರಂಗಪಡಿಸಲಾಗುವುದು ಎಂದರು.

ಸಂತ್ರಸ್ತರಾದ ಮಗುವಿನ ತಾಯಿ ಹಾಗೂ ಆಕೆಯ ತಾಯಿ, ಸಮಾಜದ ಮುಂದಾಳುಗಳಾದ ರಾಜೇಶ್ ಆಚಾರ್ಯ, ಲೋಕೇಶ್ ಆಚಾರ್ಯ ಇದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article