‘ನಿಮ್ಮ ಪಕ್ಷದ ಉಸ್ತುವಾರಿ, ಪ್ರಧಾನ ಕಾರ್ಯದರ್ಶಿಗಳ ಏಜೆಂಟರಲ್ಲವೇ..?, ಇಲ್ಲ ಬ್ರೋಕರ್ ಗಳೇ..?: ರಮಾನಾಥ ರೈ ಪ್ರಶ್ನೆ
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪ್ರತಿಪಕ್ಷ ನಾಯಕರಾಗಿರುವ ಆರ್. ಅಶೋಕ್ ತನ್ನ ಜವಾಬ್ದಾರಿ ಸ್ಥಾನದ ಬಗ್ಗೆ ಅರಿತುಕೊಳ್ಳದೆ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಅಶೋಕ್ ಅವರ ಕಿಡಿಗೇಡಿತನದ ಹೇಳಿಕೆ ಹಿಂದೆ ಅವರ ವ್ಯಕ್ತಿತ್ವ ತೋರಿಸುತ್ತದೆ. ಬಿಜೆಪಿಯವರು ಸರಕಾರಿ ಜಾಗ ಖಾಸಗಿ ಮಾರಿದವರಿಗೆ ಇತಿಹಾಸವಿದೆ. ಅವರಿಗೆ ಯಾರನ್ನೂ ಪ್ರಶ್ನಿಸುವ ನೈತಿಕತೆಯಿಲ್ಲ ಎಂದರು.
ಬಿಹಾರ ಚುನಾವಣೆಯಲ್ಲಿ ಮತದಾರನಿಗೆ ಆಮಿಷ ತೋರಿಸಿ ಬಿಜೆಪಿ ಮಿತ್ರಪಕ್ಷಗಳು ಅಧಿಕಾರದ ಚುಕ್ಕಾಣಿ ಹಿಡಿದಿದೆ. ೨೦ವರ್ಷ ಆಡಳಿತ ಚೆನ್ನಾಗಿ ನಡೆಸುತ್ತಿದ್ದರೆ ಇಂತಹ ಆಮಿಷ ಬೇಕಿತ್ತೇ? ನಾವು ಚುನಾವಣೆ ಸಂದರ್ಭ ಪ್ರಣಾಳಿಕೆಯಲ್ಲಿ ಘೋಷಿಸಿ, ಅಧಿಕಾರ ಹಿಡಿದ ಬಳಿಕ ಕೊಟ್ಟಮಾತಿನಂತೆ ನಡೆದಿದ್ದೇವೆ. ಬಿಜೆಪಿಯವರಂತೆ ಆಮಿಷ ತೋರಿಸಲ್ಲ ಎಂದರು.
ದೇಶದ ಪ್ರಧಾನಿ ಮನಮೋಹನಸಿಂಗ್ ಅವರು ಪ್ರಧಾನಿಯಾಗಿದ್ದಾಗ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತವಾದಾಗ ದೇಶದ ಮಾನ ಹರಾಜು ಆಗಿದೆ ಎಂದು ಬಿಜೆಪಿ ಹೈಕಮಾಂಡ್ ನಾಯಕರು
ಟೀಕಿಸಿದ್ದರು. ಈಗ ರೂಪಾಯಿ ಮೌಲ್ಯ ದಾಖಲೆಯ ಕುಸಿತ ಕಂಡಿದ್ದು, ಇದು ದೇಶಕ್ಕಾದ ಅವಮಾನವಲ್ಲವೇ? ಇದರಿಂದ ದೇಶದ ವರ್ಚಸ್ಸಿಗೆ ಧಕ್ಕೆಯಾಗಿಲ್ಲವೇ? ಎಂದು ಪ್ರಶ್ನಿಸಿದರು.
ರಾಜ್ಯ ಗಾಣಿಗ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಶ್ವಾಸ್ದಾಸ್, ಬುಡಾ ಅಧ್ಯಕ್ಷ ಬೇಬಿ ಕುಂದರ್, ಕಾಂಗ್ರೆಸ್ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಶುಭೋದಯ ಆಳ್ವ, ಜಿಲ್ಲಾ ಮಹಿಳಾ ಕಾಂಗ್ರೆಸ್ (ನಗರ) ಅಧ್ಯಕ್ಷೆ ಅಪ್ಪಿ,
ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ಮಾಜಿ ಮಹಾಪೌರರಾದ ಅಶ್ರಫ್, ಶಶಿಧರ್ ಹೆಗ್ಡೆ, ಸಫಾಯಿ ಕರ್ಮಾಚಾರಿ ಘಟಕದ ಅಧ್ಯಕ್ಷರಾದ ಪ್ರೇಮ್ ಬಲ್ಲಾಳ್ಬಾಗ್, ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಕೋಟ್ಯಾನ್ ಪಡು, ಮಾಜಿ ಕಾರ್ಪೊರೇಟರ್ ಅಶೋಕ್ ಡಿ.ಕೆ., ಕಚೇರಿ ಕಾರ್ಯದರ್ಶಿ ನಝೀರ್ ಬಜಾಲ್, ಶಬೀರ್ ಸಿದ್ಧಕಟ್ಟೆ ಉಪಸ್ಥಿತರಿದ್ದರು.