ಬದುಕಿನ ಕಷ್ಟಗಳನ್ನು ಮಕ್ಕಳಿಗೆ ತಿಳಿಸಿಕೊಡಿ: ಡಾ. ಅರುಣ್ ಉಳ್ಳಾಲ್

ಬದುಕಿನ ಕಷ್ಟಗಳನ್ನು ಮಕ್ಕಳಿಗೆ ತಿಳಿಸಿಕೊಡಿ: ಡಾ. ಅರುಣ್ ಉಳ್ಳಾಲ್

ಪ್ರೇರಣಾ ಶಾಲೆಯಲ್ಲಿ ಶತಸಂಭ್ರಮದ ಭಜನಾ ಪ್ರೇರಣೋತ್ಸವ


ಮೂಡುಬಿದಿರೆ: ಹಿರಿಯರು ಮಕ್ಕಳಿಗೆ  ಕಷ್ಟ ಸುಖ, ಶಿಸ್ತು, ದೈವಭಕ್ತಿ, ಅತಿಥಿ ಸತ್ಕಾರ, ಹಂಚಿ ತಿನ್ನುವ ಗುಣ ಮೊದಲಾದ ಸಂಸ್ಕಾರಗಳನ್ನು ರೂಢಿಸುವಂತೆಯೇ  ತಮ್ಮ ಬದುಕಿನ ಕಷ್ಟಗಳನ್ನು ಬಚ್ಚಿಡದೆ ಹಂಚಿಕೊಳ್ಳಬೇಕು ಆಗ ಮಾತ್ರ ಮಕ್ಕಳಿಗೆ ಜವಾಬ್ದಾರಿಯ ಅರಿವಾಗುತ್ತದೆ ಎಂದು ಮಂಗಳೂರಿನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ವಿಭಾಗ ಮುಖ್ಯಸ್ಥ ಡಾ. ಅರುಣ್ ಉಳ್ಳಾಲ್ ಹೇಳಿದರು.


ಅವರು ಮೂಡುಬಿದಿರೆಯ ಸೇವಾಂಜಲಿ ಎಜ್ಯುಕೇಶನಲ್ ಟ್ರಸ್ಟ್ ನ ಅಂಗಸಂಸ್ಥೆ ಕಡಲಕೆರೆ ಪ್ರೇರಣಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶತಸಂಭ್ರಮದ ಪ್ರಯುಕ್ತ ರವಿವಾರ ರಾತ್ರಿ ನಡೆದ

ಭಜನಾ ಪ್ರೇರಣೋತ್ಸವ-2015ರ ಸಭಾ ಕಾರ್ಯಕ್ರಮದಲ್ಲಿ  ಧಾರ್ಮಿಕ ಉಪನ್ಯಾಸ ನೀಡಿದರು.

ಮುಖ್ಯಅತಿಥಿ, ದುಬೈ ಯುಎಇ ಮೊಗವೀರ ಸಂಘದ ಆಧ್ಯಕ್ಷ ಸಿಎ ಲೋಕೇಶ್ ಪುತ್ರನ್ ಮಾತನಾಡಿ, ಕನ್ನಡ ಶಾಲೆ ಎಂಬ ಕೀಳರಿಮೆ ಬೇಡ, ಇಂಥ ಶಾಲೆಯಲ್ಲಿಯೇ ಕಲಿತು ಸಿಎ ಪೂರೈಸಿರುವೆ; ಭಗವದ್ಗೀತೆಯೇ ತನ್ನ ಸಾಧನೆಗೆ ಪ್ರೇರಣೆ ಎಂದರು.

ಶಾಲೆಗೆ ಹೆಂಚು ಹೊದೆಸಿ ಪುನರ್ ನಿರ್ಮಿಸುವಲ್ಲಿ ಪ್ರಮುಖಪಾತ್ರ ವಹಿಸಿದ್ದ ಮಕ್ಕಳ ಸಾಹಿತಿ ದಿವಂಗತ ಪಳಕಳ ಸೀತಾರಾಮ ಭಟ್ಟರ ಪುತ್ರ, ಶಾಲಾ ಹಳೆ ವಿದ್ಯಾರ್ಥಿ ಸಿಎ ರಘುಪತಿ ಎಸ್. ಭಟ್ ಅವರು ಶಾಲಾ ಸ್ಥಾಪಕ, ಶಿಕ್ಷಕ ಸಾಲ್ವದೊರ್ ಮಾಸ್ತರರು, ತನ್ನ ಸಹಾಧ್ಯಾಯಿ, ಬೆಂಚ್ ಮೇಟ್ ಆಗಿದ್ದು ಈಗ ಆಂಧ್ರ ಪ್ರದೇಶದ ರಾಜ್ಯಪಾಲರಾಗಿರುವ ಸರ್ವೋಚ್ಛ ನ್ಯಾಯಾಲಯದ ಪೂರ್ವ ಮುಖ್ಯ ನ್ಯಾಯಾಧೀಶ ಅಬ್ದುಲ್ ನಝೀರ್ ಅವರ ಒಡನಾಟವನ್ನು ಸ್ಮರಿಸಿಕೊಂಡರು.

ಎಂಸಿಎಸ್ ಸೊಸೈಟಿಯ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್, ಮಿಜಾರು ಸುರೇಶ್ ಶೆಟ್ಟಿ ಹರಿಮೀನಾಕ್ಷಿ ದೋಟ, ಶಾಲಾ ಹಳೆವಿದ್ಯಾರ್ಥಿಗಳಾದ ವಾಮದ ಪದವು ಕಾಲೇಜಿನ ಪ್ರೊ. ಹರಿ ಕಾರಂತ್, ನೀರ್ಕೆರೆ ಶಾಲೆಯ ಶಿಕ್ಷಕಿ ಯೋಗಿತಾ ನವಾನಂದ, ಸ್ವಾತಿ ವಿಶ್ವಜೀತ್ ಧರ್ಮಸ್ಥಳ ಮುಖ್ಯಅಭ್ಯಾಗತರಾಗಿದ್ದರು.

ಸಭಾ ಕಾರ್ಯಕ್ರಮಕ್ಕೂ ಮುನ್ನ ಮೂಡುಬಿದಿರೆಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ದೀಪ ಪ್ರಜ್ವಲನೆಗೈದು ಆಶೀರ್ವಚನವಿತ್ತರು. ಚೌಟರ ಅರಮನೆ ಕುಲದೀಪ ಎಂ. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಸೇವಾಂಜಲಿ ಎಜ್ಯುಕೇಶನಲ್ ಟ್ರಸ್ಟ್ ನ ಅಧ್ಯಕ್ಷ ರಾಜೇಶ ಬಂಗೇರ ಸ್ವಾಗತಿಸಿದರು. 1923ರಲ್ಲಿ ಸಾಲ್ವದೊರ್ ಮಾಸ್ತರರಿಂದ ಸೈಂಟ್ ಇಗ್ನೇಶಿಯಸ್ ಶಾಲೆ ಸ್ಥಾಪನೆಯಾಗಿ, 1925ರಲ್ಲಿ ಅಧಿಕೃತ ಮನ್ನಣೆ ಪಡೆದಿದ್ದು, 2016ರಲ್ಲಿ ಸೇವಾಂಜಲಿ ಟ್ರಸ್ಟ್ ಆಡಳಿತ ವಹಿಸಿಕೊಂಡು, ಸುಂದರ ಕಟ್ಟಡ, ಶಿಶುಮಂದಿರವನ್ನುಹೊಂದಿದೆ. ವಿದ್ಯಾಭಾರತಿಗೆ ಸಂಯೋಜಿತವಾಗಿ ಉತ್ತಮ ಸಂಸ್ಕಾರಯುತ ಶಿಕ್ಷಣಾಲಯವಾಗಿ ರೂಪುಗೊಂಡು ಸದ್ಯ 310 ವಿದ್ಯಾರ್ಥಿಗಳಿದ್ದಾರೆ. ಇನ್ನಷ್ಟು ಅವಶ್ಯಕತೆಗಳನ್ನು ದಾನಿಗಳ ಸಹಕಾರದಿಂದ ಪೂರೈಸುವ ಹಂಬಲವಿದೆ. ಎಪ್ರಿಲ್ ನಲ್ಲಿ ಶತಮಾನೋತ್ಸವ ಜರಗಲಿದೆ ಎಂದವರು ತಿಳಿಸಿದರು.

ಶಾಲಾ ಸಂಚಾಲಕ ಶಾಂತರಾಮ ಕುಡ್ವ, ಮುಖ್ಯ ಮಾತಾಜಿ ವತ್ಸಲಾ ರಾಜೇಶ್ ಉಪಸ್ಥಿತರಿದ್ದರು.

ದ.ಕ. ಜಿಲ್ಲೆಯ 48 ಭಜನ ತಂಡಗಳು ಎರಡು ಗಂಟೆಗಳ ಕಾಲ ನಡೆದ ಭಜನಾ ಕಮ್ಮಟದಲ್ಲಿ ಪಾಲ್ಗೊಂಡಿದ್ದು ತಂಡಗಳ ಮುಖ್ಯಸ್ಥರನ್ನು, ಮುಖ್ಯನಿರ್ದೇಶಕರಾಗಿ ಸಹಕರಿಸಿದ ಬೆಳುವಾಯಿ ಅಂಬೂರಿ ಶ್ರೀ ಮಹಮ್ಮಾಯಿ ಭಜನಾ ಮಂಡಳಿಯ ಅಧ್ಯಕ್ಷ ದಿನಕರ ಕುಲಾಲ್ ಇವರನ್ನುವಿಶೇಷವಾಗಿ ಗೌರವಿಸಲಾಯಿತು. ರಾಮ್ ಕುಮಾರ್ ಮಾರ್ನಾಡ್ ನಿರೂಪಿಸಿ ಶಾಂತರಾಮ ಕುಡ್ವ ವಂದಿಸಿದರು.

ಅಟೋ ರಿಕ್ಷಾ ಚಾಲಕ ಮಾಲಕರ ಸಂಘ, ನಮೋ ಫ್ರೆಂಡ್ಸ್ ನೆತ್ತೋಡಿ, ಶ್ರೀ ದೇವಿ ಕ್ರಿಕೆಟರ್ಸ್ ಕೊಡ್ಯಡ್ಕ, ಹಳೆ ವಿದ್ಯಾರ್ಥಿಗಳು, ಸಾರ್ವಜನಿಕರು ಸಹಕರಿಸಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article