ಕುಕ್ಕೆ ಕ್ಷೇತ್ರದಲ್ಲಿ ಭಕ್ತ ಸಾಗರ
Monday, December 15, 2025
ಸುಬ್ರಹ್ಮಣ್ಯ: ಎರಡು ದಿನಗಳ ಸರಣಿ ರಜೆ ಹಿನ್ನಲೆಯಲ್ಲಿ ಯಾತ್ರಾ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ರವಿವಾರ ಭಕ್ತರ ದಂಡೇ ಆಗಮಿಸಿದ್ದರು.
ಶನಿವಾರ ಎರಡನೇ ಶನಿವಾರ ಹಾಗೂ ರವಿವಾರ ವಾರದ ರಜೆಯ ಹಿನ್ನಲೆಯಲ್ಲಿ ಕುಕ್ಕೆಗೆ ಶನಿವಾರ ಹಾಗೂ ರವಿವಾರ ಬಾರೀ ಸಂಖ್ಯೆಯ ಭಕ್ತರು ಆಗಮಿಸಿದ್ದರು. ಕ್ಷೇತ್ರದ ಒಳಾಂಗಣ, ಹೊರಾಂಗಣ, ಬೋಜನಾ ಶಾಲೆ, ರಥಬೀದಿ, ಸ್ನಾನಘಟ್ಟ, ಪೇಟೆಯಲ್ಲಿ ಭಕ್ತರ ದಟ್ಟಣೆ ಕಂಡುಬಂದಿತ್ತು. ವಾಹನ ಪಾರ್ಕಿಂಗ್ ಗಳಲ್ಲೂ ವಾಹನಗಳು ತುಂಬಿದ್ದವು. ಬಹುತೇಕ ವಸತಿ ಗೃಹಗಳೂ ಭರ್ತಿಯಾಗಿದ್ದವು. ಅಧಿಕ ಸಂಖ್ಯೆಯ ಭಕ್ತರು ಆಗಮಿಸಿ, ದೇವರ ದರ್ಶನ ಪಡೆದರು.
ಹೆಚ್ಚಿನ ಸಂಖ್ಯೆಯ ಸೇವೆಗಳನ್ನು ಭಕ್ತರು ನೆರವೇರಿಸಿದ ಹಿನ್ನಲೆಯಲ್ಲಿ ಬೆಳಗ್ಗೆ ಐದು ಹಂತದಲ್ಲಿ ಆಶ್ಲೇಷ ಬಲಿ ಸೇವೆಗೆ ಅವಕಾಶ ನೀಡಲಾಗಿತ್ತು. ದೇವಸ್ಥಾನದ ವತಿಯಿಂದ ಭಕ್ತರಿಗೆ ಪೂರಕ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಸಿಬ್ಬಂದಿಗಳು ಭಕ್ತರಿಗೆ ಮಾರ್ಗದರ್ಶನಗಳನ್ನು ನೀಡಿದರು.