ಉತ್ತಮ ಆರೋಗ್ಯಕ್ಕಾಗಿ ಕ್ರೀಡೆ ಅಗತ್ಯ: ಡಾ. ಸತೀಶ್ಚಂದ್ರ ಎಸ್.

ಉತ್ತಮ ಆರೋಗ್ಯಕ್ಕಾಗಿ ಕ್ರೀಡೆ ಅಗತ್ಯ: ಡಾ. ಸತೀಶ್ಚಂದ್ರ ಎಸ್.


ಉಜಿರೆ: ಸಾಂಪ್ರಾದಾಯಿಕ ಚಟುವಟಿಕೆಗಳು, ದೇಶಿಯ ಕ್ರೀಡೆಗಳು ಇಂದು ಮೂಲೆ ಗುಂಪಾಗುತ್ತಿವೆ. ಕ್ರೀಡೆಯಲ್ಲಿ ಅನೇಕ ಮಾನಸಿಕ ಸಮಸ್ಯೆಗಳಿಗೆ ಪರಿಹಾರವಿದೆ. ಇದು ದೈಹಿಕ ಕ್ಷಮತೆಯನ್ನು ಹೆಚ್ಚಿಸುತ್ತದೆ. ಕ್ರೀಡೆಗಳು ಪದಕ ಮತ್ತು ಪ್ರಶಸ್ತಿಗಳಿಗೆ ಮಾತ್ರ ಸೀಮಿತವಾಗದೆ ಉತ್ತಮ ಆರೋಗ್ಯಕ್ಕಾಗಿ, ಸದೃಢ ಸಮಾಜಕ್ಕಾಗಿ ಮತ್ತು ಯುವ ಸಮುದಾಯದ ಚೈತನ್ಯಕ್ಕಾಗಿ ಕನಿಷ್ಠ ಸಮಯವನ್ನಾದರೂ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಅಗತ್ಯ ಎಂದು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಹೇಳಿದರು.


ಅವರು ಉಜಿರೆಯ ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾ ಕೂಟಕ್ಕೆ ಉದ್ಘಾಟಕರಾಗಿ ಆಗಮಿಸಿ, ದೀಪ ಪ್ರಜ್ವಲನೆಯ ಮೂಲಕ ಕ್ರೀಡಾ ಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.


ಕ್ರೀಡೆಗಳು ನಮ್ಮ ದಿನ ನಿತ್ಯ ಚಟುವಟಿಕೆಗಳ ಅವಿಭಾಜ್ಯ ಅಂಗವಾಗಬೇಕು. ಸಾಧಕ ಕ್ರೀಡಾ ಪಟುಗಳು ಸೋತಾಗ ಕುಗ್ಗದೆ, ಗೆದ್ದಾಗ ಹಿಗ್ಗದೆ ಸಮಚಿತ್ತದಿಂದ ಕ್ರೀಡೆಯನ್ನು ಅನುಭವಿಸಬೇಕು. ಕ್ರೀಡಾ ಜ್ಯೋತಿ, ಪ್ರತಿಜ್ಞಾ ವಿಧಿ ಸ್ವೀಕಾರ, ಪಥಸಂಚಲನ, ಸಾಧಕ ವಿದ್ಯಾರ್ಥಿಗಳ ಗೌರವಿಸುವಿಕೆ ಇವೆಲ್ಲವು ಕ್ರೀಡಾ ಸಂಸ್ಕೃತಿಯನ್ನು ಬೆಳೆಸಿ ಪೋಷಿಸುತ್ತದೆ. ಅಂತರಾಷ್ಟ್ರೀಯ ಕ್ರೀಡಾ ಕೂಟಗಳಲ್ಲಿ ಇಂತಹ ಆಯೋಜನೆಗಳಿಗೆ ಹೆಚ್ಚಿನ ಮಹತ್ವವಿದೆ. ಅಂತರಾಷ್ಟ್ರೀಯ ಮಾದರಿಯನ್ನು ಗ್ರಾಮೀಣ ಭಾಗದಲ್ಲಿ ಅನುಸರಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಇದು ಬದುಕಿನಲ್ಲಿ ಶಿಸ್ತು ಮತ್ತು ಯಶಸ್ಸಿನ ಹಾದಿಯನ್ನು ತೋರಿಸುತ್ತದೆ ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ ದೈಹಿಕ ಶಿಕ್ಷಣ ನಿರ್ದೇಶಕ ಮತ್ತು ಉಪನ್ಯಾಸಕ ಡಾ. ಕರುಣಾಕರ್ ಶೆಟ್ಟಿ ಮಾತನಾಡಿ, ಕ್ರೀಡೆ ಸೋಲು ಮತ್ತು ಸೋಲಿನಿಂದ ಹೇಗೆ ಹೊರ ಬರುವುದು ಎಂಬ ಛಲವನ್ನು ತುಂಬುತ್ತದೆ. ಪ್ರತಿನಿತ್ಯ ಕ್ರೀಡೆಯಲ್ಲಿ ನಿರತರಾಗಿರುವುದ ರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ವಿದ್ಯಾರ್ಥಿಗಳಿಗೆ ಶುಭ ಕೋರಿದರು.

ಕ್ರೀಡಾ ಕೂಟದಲ್ಲಿ ಕಾಲೇಜಿನ 29 ವಿಭಾಗಳಿಂದ ನಾನ ಧ್ಯೇಯ, ಸಂದೇಶಗಳ ಭಿತಿ ಫಲಕ ಮತ್ತು ಬಾವುಟವನ್ನು ಹಿಡಿದು ಅತಿಥಿ ಅಭ್ಯಾಗತರ ಸಮ್ಮುಖದಲ್ಲಿ ಪಥಸಂಚಲನ ಮಾಡಿದರು. ಬಳಿಕ ಎಸ್.ಡಿ.ಎಂ ಕ್ರೀಡಾ ಸಂಘದ ರಾಷ್ಟ್ರೀಯ ಕ್ರೀಡಾ ಪಟುಗಳಾದ ದರ್ಶನ್, ಚಂದು, ಸುಪ್ರೀಯಾ ಮತ್ತು ಪ್ರಣವ್ ಇವರಿಂದ ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಿಂದ ಕಾಲೇಜಿನ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದವರೆಗೆ ಕ್ರೀಡಾ ಜ್ಯೋತಿಯನ್ನು ಬೆಳಗಿಸಿ ಅತಿಥಿಗಳಿಗೆ ಹಸ್ತಾಂತರಿಸಿದರು. ಅತಿಥಿಗಳಿಂದ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.

ಇದೇ ಸಂದರ್ಭದಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ಮತ್ತು ಎಸ್.ಡಿ.ಎಂ. ಕ್ರೀಡಾ ಸಂಘದ ವತಿಯಿಂದ ಅತಿಥಿಗಳಾಗಿದ್ದ, ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ ದೈಹಿಕ ಶಿಕ್ಷಣ ನಿರ್ದೇಶಕ ಮತ್ತು ಉಪನ್ಯಾಸಕ ಡಾ. ಕರುಣಾಕರ್ ಶೆಟ್ಟಿಯವರನ್ನು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಗೌರವಿಸಿದರು.

ಇದೇ ಕ್ರೀಡಾ ಕೂಟದ ಸಂದರ್ಭದಲ್ಲಿ ವಿದ್ಯಾರ್ಥಿಗಳ ಜೊತೆಗೆ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗದವರಿಗೂ ಕ್ರಿಕೆಟ್, ಹಗ್ಗಜಗ್ಗಾಟದಂತಹ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರಮೋದ್ ಕುಮಾರ್ ಬಿ. ವಹಿಸಿದ್ದರು. ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ ಎಸ್.ಡಿ.ಎಂ ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ್ ಪಿ, ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲರಾದ ರಾಜೇಶ್ ಬಿ, ಎಸ್.ಡಿ.ಎಂ ಕ್ರೀಡಾ ಸಂಘದ ಕಾರ್ಯದರ್ಶಿ ರಮೇಶ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಉಪನ್ಯಾಸಕರು, ಸಿಬ್ಬಂದಿಗಳು ಹಾಗು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉಪನ್ಯಾಸಕ ಮಹಾವೀರ್ ಜೈನ್ ನಿರೂಪಿಸಿ, ಉಪನ್ಯಾಸಕ ರಾಜು ವಂದಿಸಿದರು. ಕ್ರೀಡಾ ಕೂಟವನ್ನು ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ಸಂದೇಶ್ ಪೂಂಜ ಸಂಯೋಜಿಸಿದರು.


‘ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಮತ್ತು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಸಾಗುತ್ತಿರುವ ಉಜಿರೆಯ ಎಸ್.ಡಿ.ಎಂ ಕ್ರೀಡಾ ಸಂಘ ನೂರಾರು ರಾಷ್ಟ್ರೀಯ ಕ್ರೀಡಾ ಪಟುಗಳನ್ನು ಈ ನಾಡಿಗೆ ಕೊಟ್ಟಿದೆ. ಇಲ್ಲಿನ ದೈಹಿಕ ಶಿಕ್ಷಣ ಉಪನ್ಯಾಸಕರ ವೃಂದ, ತರಬೇತಿ ಮತ್ತು ಕ್ರೀಡಾಂಗಣ, ಸುಸಜ್ಜಿ ಆಧುನಿಕ ವ್ಯವಸ್ಥೆಗಳು ಎಲ್ಲವೂ ವಿದ್ಯಾರ್ಥಿಗಳ ಬೆಳವಣಿಗೆಗೆ ಪೂರಕವಾಗಿದೆ. ವಿದ್ಯಾರ್ಥಿಗಳು ಕ್ರೀಡೆಯನ್ನು ಪಠ್ಯದ ಅವಿಭಾಜ್ಯ ಅಂಗವಾಗಿ ಸ್ವೀಕರಿಸಬೇಕು.’ -ಡಾ. ಕರುಣಾಕರ್ ಶೆಟ್ಟಿ, ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ ದೈಹಿಕ ಶಿಕ್ಷಣ ನಿರ್ದೇಶಕ

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article