ಉಜಿರೆ ಎಸ್ಡಿಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಶೀಘ್ರ ಎಂಆರ್ಐ ಸ್ಕ್ಯಾನಿಂಗ್ ಸೇವೆ ಆರಂಭ
ಅವರು ಆಸ್ಪತ್ರೆಯಲ್ಲಿ ಶನಿವಾರ ಜರಗಿದ ಕಾರ್ಯಕ್ರಮದಲ್ಲಿ ಮುಂದಿನ ಯೋಜನೆಗಳು ಹಾಗೂ ಪ್ರಸಕ್ತ ವರ್ಷದ ಆಸ್ಪತ್ರೆಯ ಸಾಧನೆಗಳ ಪಕ್ಷಿನೋಟವನ್ನು ನೀಡಿದರು. ಆಸ್ಪತ್ರೆ ಲಾಭದ ದೃಷ್ಟಿ ಇಲ್ಲದೆ ಕೇವಲ ಗ್ರಾಮೀಣ ಜನರಿಗೆ ಸೇವೆ ನೀಡಲು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮತ್ತು ಕುಟುಂಬಸ್ಥರು ಉಜಿರೆಯಲ್ಲಿ ಆರಂಭಿಸಿರುವ ಆಸ್ಪತ್ರೆ ವತಿಯಿಂದ ಪ್ರಸಕ್ತ ವರ್ಷ 5 ಕೋಟಿ ರೂ.ಗೂ ಅಧಿಕ ಮೊತ್ತದ ಉಚಿತ ಔಷಧ ಹಾಗೂ ಚಿಕಿತ್ಸೆ, ಉಚಿತ ಶಿಬಿರ ಇತ್ಯಾದಿ ವೈದ್ಯಕೀಯ ಸೇವೆಗಳನ್ನು ಬಡ ರೋಗಿಗಳಿಗೆ ನೀಡಲಾಗಿದೆ ಎಂದರು.
ಸತತ ಎರಡನೇ ಬಾರಿ ಆಸ್ಪತ್ರೆಗೆ ಎನ್ಎಬಿಎಚ್ ಮಾನ್ಯತೆ ದೊರೆತಿದೆ. 2025 ಜ.1ರಿಂದ ಉಚಿತ ಡಯಾಲಿಸಿಸ್ ಯೋಜನೆಯನ್ನು ಪ್ರಾರಂಭಿಸಿದ್ದು ಪ್ರತಿ ರೋಗಿಗೆ ತಿಂಗಳಿಗೆ 24 ಸಾವಿರ ರೂ.ಗಳಿಗೂ ಅಧಿಕ ಉಳಿತಾಯವಾಗುತ್ತದೆ. ನವೆಂಬರ್ ವರೆಗೆ 6,83 ಉಚಿತ ಡಯಾಲಿಸಿಸ್ ನೀಡಲಾಗಿದ್ದು ಇದಕ್ಕೆ ಒಂದು ಕೋಟಿ ರೂ.ಗಿಂತ ಅಧಿಕ ವೆಚ್ಚವಾಗಿದೆ. ಆಸ್ಪತ್ರೆ ವತಿಯಿಂದ ವಿಮಾ ಸೌಲಭ್ಯಗಳು, ಉಚಿತ ಆರೋಗ್ಯ ತಪಾಸಣೆ ಶಿಬಿರಗಳು, ಉಚಿತ ವೈದ್ಯಕೀಯ ಸೇವೆ ಇತ್ಯಾದಿ ನೀಡಲಾಗುತ್ತಿದೆ. ಅತ್ಯಾಧುನಿಕ ವೈದ್ಯಕೀಯ ಸಲಕರಣೆಗಳನ್ನು ಹೊಂದಿರುವ ಆಸ್ಪತ್ರೆಯಲ್ಲಿ ವಿಶ್ವದಲ್ಲಿಯೇ ಮೊದಲ ಬೆನ್ನುಮೂಳೆ ಗೆಡ್ಡೆ ಮತ್ತು ಡ್ಯೂರಲ್ ದುರಸ್ತಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಇದರ ಜತೆ ವಕ್ರಪಾದ, ಲ್ಯಾಪ್ರೋಸ್ಕೋಪಿಕ್, ಇಷ್ಟೇ ಮಕ್ಕಳಿಗೆ ಲಾಪ್ರೊಸ್ಕೋಪಿಕ್ ಅಪೆಂಡಿಸೈಟಿಸ್, ಕ್ಯಾನ್ಸರ್ ಸರ್ಜರಿ ಮೊದಲಾದ ವಿಶಿಷ್ಟ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗುತ್ತಿದೆ ಎಂದರು.
ವೈದ್ಯಕೀಯ ಅಧೀಕ್ಷಕ ಡಾ. ದೇವೇಂದ್ರ ಕುಮಾರ್ ಪಿ., ಮುಖ್ಯ ವೈದ್ಯಾಧಿಕಾರಿ ಡಾ. ಸಾತ್ವಿಕ್ ಜೈನ್ ಮತ್ತಿತರರು ಉಪಸ್ಥಿತರಿದ್ದರು. ಫೈನಾನ್ಸ್ ಆಫೀಸರ್ ನಾರಾಯಣ ಬಿ. ಕಾರ್ಯಕ್ರಮ ನಿರೂಪಿಸಿದರು. ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸಾದ್ ಶೆಟ್ಟಿ, ಎನಿಂಜೆ, ಕಾರ್ಯದರ್ಶಿ ತುಕಾರಾಂ, ಮೀಡಿಯಾ ಕ್ಲಬ್ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಕಾರ್ಯದರ್ಶಿ ಸತೀಶ್ ಪೆರ್ಲೆ ಉಪಸ್ಥಿತರಿದ್ದರು.