ಸರಕಾರ ಹಾಗೂ ಜನರ ನಡುವಿನ ಕೊಂಡಿಯಾಗಿ ಕೆಲಸ ಮಾಡೋದು ಸರಕಾರಿ ಉದ್ಯೋಗಿಗಳ ಕರ್ತವ್ಯ: ಜಿ. ಮಂಜುನಾಥ್
ಬಂಟ್ವಾಳ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸೋಮವಾರ ಬಿ.ಸಿ. ರೋಡಿನ ಆಡಳಿತ ಸೌಧದಲ್ಲಿ ನಡೆದ ದೇಶದ 77ನೇ ಗಣರಾಜ್ಯೋತ್ಸವ ಆಚರಣೆಯ ಧ್ವಾಜರೋಹಣ ನೆರವೇರಿಸಿ ಮಾತನಾಡಿದ ಅವರು, ದೇಶದ ಶಾಂತಿ-ಸೌಹಾರ್ದತೆ ಹಾಗೂ ಭಾತೃತ್ವವನ್ನು ಕಾಪಾಡಿಕೊಂಡು ಬಂದಾಗ ನಿಜವಾದ ಗಣರಾಜ್ಯವನ್ನು ಕಾಪಾಡಿಕೊಂಡಂತಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ಶಾಸಕ ಯು. ರಾಜೇಶ್ ನಾಯ್ಕ್ ಅವರು ಜನತೆಗೆ 77ನೇ ಗಣರಾಜ್ಯೋತ್ಸವದ ಶುಭ ಸಂದೇಶ ನೀಡಿದರು.
ಗಣರಾಜ್ಯೋತ್ಸವ ಪ್ರಯುಕ್ತ ವಿಶೇಷ ಉಪನ್ಯಾಸ ನೀಡಿದ ಕಾವಳಕಟ್ಟೆ ಶಾಲಾ ವಿದ್ಯಾರ್ಥಿನಿ ವಂದನಾ ಮಾತನಾಡಿ, ಸಂವಿಧಾನದ ಆಶಯಗಳ ಸಾಕಾರ ಪ್ರತಿಯೊಬ್ಬರ ಧ್ಯೇಯ ಆಗಬೇಕು. ಭ್ರಷ್ಟಾಚಾರ, ಭಯೋತ್ಪಾದನೆ ಮೂಲೋತ್ಪಾದನೆಗೆ ಕಟಿ ಬದ್ದರಾಗಬೇಕು ಎಂದು ಕರೆ ನೀಡಿದರು.
ಬುಡಾ ಅಧ್ಯಕ್ಷ ಬೇಬಿ ಕುಂದರ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ಪೂಜಾರಿ ಮುಖ್ಯ ಅತಿಥಿಗಳಾಗಿದ್ದರು.
ಇದೇ ವೇಳೆ ಮಾಜಿ ಸೈನಿಕರಾದ ಕ್ಯಾ ಧನಂಜಯ, ಹೆನ್ರಿ ರೋಡ್ರಿಗಸ್, ರಂಗನಾಥ ರೈ, ಮಾಧವ ಕುಲಾಲ್ ಮಾಣಿ, ಮೋಹನ್ ಗೌಡ ಅವರನ್ನು ಸನ್ಮಾನಿಸಲಾಯಿತು.
ಕಬಡ್ಡಿ, ಕರಾಟೆ, ವೈಟ್ ಲಿಫ್ಟ್, ಡಿಸ್ಕ್ ತ್ರೋ, ಈಜು ಮೊದಲಾದ ವಿಭಾಗಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಾದ ಪ್ರೀತೇಶ್ ವಿಟ್ಲ, ಚೈತನ್ಯಾ ಸಾಲೆತ್ತೂರು, ಕೀರ್ತಿ ಕುಕ್ಕಿಲ, ಹೇಮಂತ್ ತೆಂಕ ಕಜೆಕಾರು, ಶಮೀರ್ ಅಬ್ದುಲ್ಲ, ಸಾನ್ವಿ ಕೆ., ಕೃತಿ ನೆಟ್ಲ, ಅನಘ್ರ್ಯ ಬರಿಮಾರು, ಅನನ್ಯ ಬರಿಮಾರು ಹಾಗೂ ಜಾವೆಲಿನ್ ಮತ್ತು ಡಿಸ್ಕ್ ತ್ರೋ ವಿಭಾಗದಲ್ಲಿ ಸಾಧನೆಗೈದ ಶಿಕ್ಷಕಿ ಭಾಗೀರಥಿ ರೈ ಅವರನ್ನು ಗೌರವಿಸಲಾಯಿತು.
ಕಳೆದ ಬಾರಿ ಎಸ್ಸೆಸ್ಸೆಲ್ಸಿ ಪಿಯುಸಿ ಪರೀಕ್ಷೆಗಳಲ್ಲಿ ಟಾಪರ್ ವಿದ್ಯಾರ್ಥಿಗಳಿಗೆ ನಗದು ಪ್ರೋತ್ಸಾಹಧನ ವಿತರಿಸಲಾಯಿತು.
ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಕ್ಷೇತ್ರ ಶಿಕ್ಷಣಾಧಿಕಾರಿ ಮಾಲತಿ ವಂದಿಸಿದರು. ಶಿಕ್ಷಕ ಗೋಪಾಕೃಷ್ಣ ಮಾಣಿ ಕಾರ್ಯಕ್ರಮ ನಿರೂಪಿಸಿದರು.
ಇದಕ್ಕೂ ಮೊದಲು ಪೊಲೀಸ್, ಗೃಹರಕ್ಷಕ ದಳ, ಮಾಜಿ ಸೈನಿಕರು, ವಿವಿಧ ಶಾಲೆಗಳ ಸ್ಕೌಟ್ಸ್, ಗೈಡ್ಸ್ ಮೊದಲಾದ ತಂಡಗಳಿಂದ ಪಥ ಸಂಚಲನ ಹಾಗೂ ಅತಿಥಿಗಳಿಂದ ಗೌರವ ವಂದನೆ ಸ್ವೀಕಾರ ನಡೆಯಿತು. ಬಳಿಕ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಮನೋರಂಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.