ಜ.24 ರಂದು ‘ಪರಿಕ್ರಮ’ ಲಯನ್ಸ್ ಪ್ರಾಂತೀಯ ಸಮ್ಮೇಳನ
ಮಂಗಳೂರು: ಲಯನ್ಸ್ ಜಿಲ್ಲಾ 317ಡಿ ಪ್ರಾಂತ್ಯ 111 ವತಿಯಿಂದ ‘ಪರಿಕ್ರಮ’ ಪ್ರಾಂತೀಯ ಸಮ್ಮೇಳನ ಜ.24ರಂದು ಸಂಜೆ 5.30ಕ್ಕೆ ಲಯನ್ಸ್ ಕ್ಲಬ್ ನೇತ್ರಾವತಿ ಅವರ ಆತಿಥ್ಯದಲ್ಲಿ ಸುಲ್ತಾನ್ ಬತ್ತೇರಿಯ ಸ್ವಸ್ತಿಕಾ ವಾಟರ್ ಫ್ರಂಚ್ನಲ್ಲಿ ಆಯೋಜಿಸಲಾಗಿದೆ ಎಂದು ಲಯನ್ಸ್ ಜಿಲ್ಲಾ 317ಡಿ ಪ್ರಾಂತ್ಯ 111 ಪ್ರಾಂತೀಯ ಸಮ್ಮೇಳನ ಸಮಿತಿ ಅಧ್ಯಕ್ಷೆ ಗಾಯತ್ರಿ ಅರವಿಂದ ರಾವ್ ಕೇದಿಗೆ ಹೇಳಿದರು.
ಅವರು ನಗರದ ಪ್ರೆಸ್ಕ್ಲಬ್ನಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಸಮ್ಮೇಳನದಲ್ಲಿ 500ಕ್ಕೂ ಹೆಚ್ಚು ಲಯನ್ಸ್ ಕ್ಲಬ್ನ ಸದಸ್ಯರು, ಲಯನ್ಸ್ ಜಿಲ್ಲಾ ಪದಾಧಿಕಾರಿಗಳು ಹಾಗೂ ಆಹ್ವಾನಿತ ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ. ಮುಖ್ಯ ಅತಿಥಿಯಾಗಿ ಶ್ರೀ ಕಟೀಲು ದುರ್ಗಾಪರಮೇಶ್ವರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಿನ್ಸಿಪಾಲ್ ಪೊ.ಬಾಲಕೃಷ್ಣ ಶೆಟ್ಟಿಭಾಗವಹಿಸಲಿದ್ದಾರೆ. ಕಾರ್ಯಕ್ರಮವನ್ನು
ಪ್ರಾಂತ್ಯದ ಪ್ರಥಮ ಲಯನ್ ಡಾ. ಕೇದಿಗೆ ಅರವಿಂದ ರಾವ್ ಉದ್ಘಾಟಿಸಲಿದ್ದಾರೆ. ಈ ವರ್ಷದ ಸೇವಾ ಚಟುವಟಿಕೆಗಳ ಆಧಾರದ ಮೇಲೆ ಪ್ರಾಂತ್ಯದ ನಾನಾ ಲಯನ್ಸ್ ಕ್ಲಬ್ಗಳಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. ಇದೇ ಸಂದರ್ಭ ದಾನಿಗಳನ್ನು ವಿಶೇಷವಾಗಿ ಗೌರವಿಸಲಾಗುತ್ತದೆ. ಸಮ್ಮೇಳನದ ಮೂಲಕ ಸಾಕಷ್ಟುಸಮಾಜಮುಖಿ ಕೆಲಸಗಳಿಗೆ ಧನಸಹಾಯ ನೀಡುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.
ಡಾ.ಕೇದಿಗೆ ಅರವಿಂದ ರಾವ್, ಪ್ರಾಂತೀಯ ಸಮ್ಮೇಳನ ಸಮಿತಿ ಅಧ್ಯಕ್ಷೆ ಗೀತಾ ಆರ್ ಶೆಟ್ಟಿ, ಪರಿಕ್ರಮ ಪ್ರಾಂತೀಯ ಸಮ್ಮೇಳನ ಸಮಿತಿ ಕಾರ್ಯದರ್ಶಿ ಆಶಾ ರಾವ್ ಅರೂರ್, ಆತಿಥೇಯ ಕ್ಲಬ್ ಅಧ್ಯಕ್ಷ ವಿನಯಾ ಶೆಟ್ಟಿ, ವಲಯಾಧ್ಯಕ್ಷರುಗಳಾದ ನಿರ್ಮಲಾ ಪ್ರಮೋದ್ ಮತ್ತು ಪ್ರೀತಿ ರೈ ಉಪಸ್ಥಿತರಿದ್ದರು.