ಕೊರಗಜ್ಜನ ಸನ್ನಿಧಿಗೆ ಬಾಲಿವುಡ್ ನಟ ಸುನಿಲ್ ಶೆಟ್ಟಿ
Saturday, January 17, 2026
ಮಂಗಳೂರು: ಬಾಲಿವುಡ್ ನಟ ಸುನಿಲ್ ಶೆಟ್ಟಿ ಕುತ್ತಾರಿನ ಕೊರಗಜ್ಜನ ಗುಡಿಗೆ ಶುಕ್ರವಾರ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಮಂಗಳೂರಿಗೆ ಯಾರು ಬಂದರೂ ಕೊರಗಜ್ಜನ ಕ್ಷೇತ್ರಕ್ಕೆ ಬಂದೇ ಬರುತ್ತಾರೆ. ಯಾರೇ ಬಂದರೂ ಕೊರಗಜ್ಜ ಅವರ ಬಯಕೆಗಳನ್ನು ಈಡೇರಿಸುತ್ತಾರೆ. ನನ್ನ ಮಗ, ಮಗಳು, ಅಳಿಯ ಎಲ್ಲರೂ ಇಲ್ಲಿಗೆ ಬಂದಿದ್ದಾರೆ. ನನಗೂ ಇಲ್ಲಿ ಬರಲು ಬಹಳ ಆಸೆ ಇತ್ತು, ಅದು ಇಂದು ನೆರವೇರಿದೆ. ಪುತ್ರ ಅಹಾನ್ ಶೆಟ್ಟಿ ನಟನೆಯ ಬಹು ನಿರೀಕ್ಷಿತ ಬಾರ್ಡರ್ -2 ಚಿತ್ರ ಬಿಡುಗಡೆಯಾಗುತ್ತಿದೆ. ಅದರ ಯಶಸ್ಸಿಗಾಗಿ ಆಶೀರ್ವಾದ ಬೇಡಲು ಇಲ್ಲಿಗೆ ಬಂದಿದ್ದೇನೆ ಎಂದರು.
ತುಳು ಭಾಷೆ, ಸಂಸ್ಕೃತಿಯನ್ನು ಜಗತ್ತಿಗೆ ಪಸರಿಸುವ ಉದ್ದೇಶದಿಂದ ಈಗಾಗಲೇ “ಜೈ” ತುಳು ಸಿನಿಮಾದಲ್ಲಿ ನಟಿಸಿದ್ದೇನೆ. ತುಳು, ಕನ್ನಡ ಸಿನೆಮಾದಲ್ಲಿ ಸದ್ಯಕ್ಕೆ ಬೇರೆ ಯೋಜನೆಗಳಿಲ್ಲ ಎಂದರು.
ಕುತ್ತಾರು ಕೊರಗ ತನಿಯ ಆದಿಸ್ಥಳ ಕ್ಷೇತ್ರದ ಪರವಾಗಿ ನಟ ಸುನಿಲ್ ಶೆಟ್ಟಿ ಅವರನ್ನ ಸನ್ಮಾನಿಸಿ ಗೌರವಿಸಲಾಯಿತು.
ಮುಂಬೈ ಉದ್ಯಮಿ ವಿವೇಕ್ ಶೆಟ್ಟಿ ಬೊಲ್ಯಗುತ್ತು, ಕುತ್ತಾರು ಕೊರಗತನಿಯ ಆದಿ ಕ್ಷೇತ್ರದ ಮಹಾಬಲ ಹೆಗ್ಡೆ, ದೇವಿಪ್ರಸಾದ್ ಶೆಟ್ಟಿ, ಶ್ರೀರಾಮ್ ರೈ ಮೊದಲಾದವರಿದ್ದರು.