ಕೊಡಿಯಾಲ್ ಬೈಲ್ ವಾರ್ಡ್ ಸಮಸ್ಯೆಗಳ ಕುರಿತು ಶಾಸಕ ಕಾಮತ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಯೊಂದಿಗೆ ಸಾರ್ವಜನಿಕ ಸಭೆ
ಇಲ್ಲಿನ ಬಲ್ಲಾಳ್ ಬಾಗ್ ನಲ್ಲಿರುವ ಹಳೆಯ ಅವೈಜ್ಞಾನಿಕ ಬ್ರಿಡ್ಜ್ ನಲ್ಲಿ ಮಳೆಗಾಲದಲ್ಲಿ ಕಸ ಕಡ್ಡಿಗಳು ತುಂಬಿ ನೀರು ಸಾರಾಗವಾಗಿ ಹರಿಯದೇ, ಕೊಡಿಯಾಲ್ ಗುತ್ತು, ಭಾರತಿ ನಗರ, ಚಂದ್ರಿಕಾ ಬಡಾವಣೆ ಮೊದಲಾದ ಪ್ರದೇಶಗಳಲ್ಲಿ ಕೃತಕ ನೆರೆಯ ವಾತಾವರಣ ಸೃಷ್ಟಿಯಾಗಿ ಜನಸಾಮಾನ್ಯರಿಗೆ ತೀವ್ರ ತೊಂದರೆಯಾಗುತ್ತಿತ್ತು. ಹಾಗಾಗಿ ಇಲ್ಲಿಗೊಂದು ನೂತನ ಹಾಗೂ ಸಮರ್ಪಕ ಬ್ರಿಡ್ಜ್ ನಿರ್ಮಿಸುವಂತೆ ಪರಿಸರದ ನಾಗರೀಕರಿಂದ ಬಹಳಷ್ಟು ಬೇಡಿಕೆಯಿದ್ದ ಕಾರಣ ಹಿಂದಿನ ಬಿಜೆಪಿ ಆಡಳಿತದ ಅವಧಿಯಲ್ಲಿ ಸುಧೀರ್ ಶೆಟ್ಟಿ ಕಣ್ಣೂರು ರವರು ಮೇಯರ್ ಆಗಿದ್ದ ವೇಳೆ, ಶಾಸಕ ವೇದವ್ಯಾಸ ಕಾಮತ್ ರವರ ಸಹಕಾರದೊಂದಿಗೆ ಪಾಲಿಕೆಯ ಪ್ರೀಮಿಯಂ ಎಫ್.ಎ.ಆರ್.ನಲ್ಲಿ ಸುಮಾರು ಎರಡೂವರೆ ಕೋಟಿ ಅನುದಾನವನ್ನು ಮಂಜೂರುಗೊಳಿಸಲಾಗಿತ್ತು. ನಂತರ ಕೇವಲ ಆಡಳಿತಾತ್ಮಕ ಅನುಮೋದನೆ ಮಾತ್ರ ಬಾಕಿ ಉಳಿದಿತ್ತು.
ಇದೀಗ ಪಾಲಿಕೆಯಲ್ಲಿ ಬಿಜೆಪಿ ಅವಧಿ ಅಂತ್ಯಗೊಂಡಿದ್ದು, ರಾಜ್ಯ ಸರ್ಕಾರದ ಮೂಲಕ ಆಡಳಿತಾಧಿಕಾರಿಯವರೇ ಅಧಿಕಾರದಲ್ಲಿರುವುದರಿಂದ ತಕ್ಷಣವೇ ಬಾಕಿಯಿರುವ ಎಲ್ಲಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಕಾಮಗಾರಿ ಕೈಗೆತ್ತಿಕೊಳ್ಳಲು ಅನುಕೂಲವಾಗುವಂತೆ ಮನವಿ ಮಾಡಲಾಗಿ, ಸೂಕ್ತವಾಗಿ ಸ್ಪಂದಿಸಿದ ಜಿಲ್ಲಾಧಿಕಾರಿಗಳು ತಕ್ಷಣವೇ ಅನುಮೋದನೆ ನೀಡಿದರು.
ಇದೇ ವೇಳೆ ಕೊಡಿಯಾಲ್ ಗುತ್ತು ಹಾಗೂ ಕುದ್ರೋಳಿ ವರೆಗಿನ ವೆಟ್ ವೆಲ್ ಸಮಸ್ಯೆಯಿಂದಾಗಿ ಆ ಪರಿಸರದಲ್ಲಿ ಡ್ರೈನೇಜ್ ಗೆ ಸಂಬಂಧಪಟ್ಟಂತೆ ನಾಗರಿಕರು ತೊಂದರೆ ಅನುಭವಿಸುತ್ತಿರುವ ಬಗ್ಗೆ ಶಾಸಕರು, ಜಿಲ್ಲಾಧಿಕಾರಿಗಳ ಗಮನಕ್ಕೆ ತಂದ ಪರಿಣಾಮ, ಕೂಡಲೇ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ ನಡೆಸಿ ಆ ಬಗ್ಗೆಯೂ ಕ್ರಮಕೈಗೊಳ್ಳುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪಾಲಿಕೆ ಕಮಿಷನರ್ ರವಿಚಂದ್ರ ನಾಯಕ್, ಪ್ರಮುಖರಾದ ಯಶವಂತ್ ಕುದ್ರೋಳಿ, ಸಂಕಪ್ಪ ಶೆಟ್ಟಿ, ಗಣೇಶ್ ಶೆಟ್ಟಿ, ಸುಧೀರ್ ಜಲನಿ, ಆಶೀಶಾ, ಶರತ್ ಶೆಟ್ಟಿ, ಆನಂದ್ ಶೆಟ್ಟಿ, ಇನ್ನಿತರ ವಾರ್ಡಿನ ಪ್ರಮುಖರು, ಅಧಿಕಾರಿಗಳು ಉಪಸ್ಥಿತರಿದ್ದರು