ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ನಡೆಗೆ ದ.ಕ. ಜಿಲ್ಲಾ ಬಿಜೆಪಿ ಖಂಡನೆ
ಮಂಗಳೂರು: ಗಣರಾಜ್ಯೋತ್ಸವದಂತಹ ರಾಷ್ಟ್ರೀಯ ಏಕತೆಯನ್ನು ಪ್ರತಿಬಿಂಬಿಸುವ ವೇದಿಕೆಯನ್ನು ರಾಜಕೀಯ ಟೀಕೆಗಳಿಗೆ ದುರುಪಯೋಗಪಡಿಸಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರ ನಡೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಪ್ರಕಟಣೆಯಲ್ಲಿ ತೀವ್ರವಾಗಿ ಖಂಡಿಸುತ್ತದೆ.
VB G RAM G ಯೋಜನೆ ಕುರಿತು ಗಣರಾಜ್ಯೋತ್ಸವದ ವೇದಿಕೆಯಲ್ಲಿ ಏಕಪಕ್ಷೀಯವಾಗಿ ಮಾತನಾಡುತ್ತಾ ಸುಳ್ಳು ಪಸರಿಸುವುದು ಸಂವಿಧಾನದ ಆತ್ಮಕ್ಕೆ ಮತ್ತು ರಾಷ್ಟ್ರೀಯ ಆಚರಣೆಗಳ ಘನತೆಗೆ ಅವಮಾನವಾಗಿದೆ. ಗಣರಾಜ್ಯೋತ್ಸವವು ದೇಶದ ಸಂವಿಧಾನ, ರಾಷ್ಟ್ರಭಕ್ತಿ ಮತ್ತು ನಾಗರಿಕ ಐಕ್ಯತೆಯನ್ನು ಗೌರವಿಸುವ ದಿನವಾಗಿದ್ದು, ಅದನ್ನು ಪಕ್ಷಪಾತಿ ರಾಜಕೀಯ ವೇದಿಕೆಯಾಗಿಸುವುದು ಸಚಿವ ಸ್ಥಾನಕ್ಕೆ ಶೋಭೆಯಲ್ಲ.
VB G RAM G ಯೋಜನೆಯ ಉದ್ದೇಶ ಗ್ರಾಮೀಣ ಪ್ರದೇಶಗಳಲ್ಲಿ ಪಾರದರ್ಶಕತೆ, ತಂತ್ರಜ್ಞಾನ ಆಧಾರಿತ ಅನುಷ್ಠಾನ ಮತ್ತು ಲಾಭಾರ್ಥಿಗಳಿಗೆ ನೇರ ಪ್ರಯೋಜನವನ್ನು ತಲುಪಿಸುವುದಾಗಿದೆ. ಈ ಯೋಜನೆಯನ್ನು ಬಡವಿರೋಧಿ, ಕಾರ್ಮಿಕ ವಿರೋಧಿ ಅಥವಾ ಸಂವಿಧಾನ ಬಾಹಿರ ಎಂದು ಬಿಂಬಿಸುವುದು ಖಂಡನೀಯ, ಹಾಗೂ ಸುಳ್ಳುಗಳನ್ನು ಹೇಳುವ ಮೂಲಕ ಜನರನ್ನು ಗೊಂದಲಕ್ಕೆ ತಳ್ಳುವ ಹಾಗೂ ಬಡವರನ್ನು ಈ ಯೋಜನೆಯಿಂದ ವಂಚಿಸುವ ವ್ಯರ್ಥ ಪ್ರಯತ್ನವಾಗಿದೆ.
ರಾಜ್ಯ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಹಾಕಲು ಮತ್ತು ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ಅಪಹಾಸ್ಯ ಮಾಡುವ ಉದ್ದೇಶದಿಂದ ಸಚಿವರು ರಾಷ್ಟ್ರೀಯ ಹಬ್ಬಗಳ ಆಚರಣೆಯ ವೇದಿಕೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರಕ್ಕೆ ಗ್ರಾಮೀಣ ಬಡವರ ಮೇಲಿನ ನಿಜವಾದ ಕಾಳಜಿ ಇದ್ದಿದ್ದರೆ, ರಾಜ್ಯದಲ್ಲಿ ಉದ್ಯೋಗ ಸೃಷ್ಟಿ, ಅಭಿವೃದ್ಧಿ ಕಾಮಗಾರಿಗಳ ವೇಗ ಮತ್ತು ಪಂಚಾಯತ್ ವ್ಯವಸ್ಥೆಯ ಬಲವರ್ಧನೆಗೆ ಆದ್ಯತೆ ನೀಡಬೇಕಾಗಿತ್ತು.
ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ, ಗಣರಾಜ್ಯೋತ್ಸವದಂತಹ ಸಂದರ್ಭಗಳಲ್ಲಿ ರಾಜಕೀಯ ಪ್ರೇರಿತ ಹೇಳಿಕೆಗಳನ್ನು ನೀಡದೇ, ಸಂವಿಧಾನಾತ್ಮಕ ಮೌಲ್ಯಗಳು ಮತ್ತು ರಾಷ್ಟ್ರಭಕ್ತಿಯನ್ನು ಗೌರವಿಸುವ ಜವಾಬ್ದಾರಿಯುತ ವರ್ತನೆಯನ್ನು ಸಚಿವರಿಂದ ಜನರು ನಿರೀಕ್ಷಿಸುತ್ತಾರೆ.
ಈ ರೀತಿಯ ಅಸಂಬದ್ಧ ಮತ್ತು ರಾಜಕೀಯ ಪ್ರೇರಿತ ಹೇಳಿಕೆಗಳಿಗೆ ನಮ್ಮ ಜಿಲ್ಲೆಯ ಜನರು ಒಪ್ಪುವುದಿಲ್ಲಾ ಹಾಗೂ ದ.ಕ. ಬಿಜೆಪಿಯು ತೀವ್ರವಾಗಿ ಖಂಡಿಸುತ್ತದೆ ಎಂದು ದ.ಕ. ಜಿಲ್ಲಾ ಬಿಜೆಪಿ ವಕ್ತಾರ ಅರುಣ್ ಜಿ. ಶೇಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.