ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ಹಾಗೂ ಮಹಿಳಾ ವಿರೋಧಿ ಧೋರಣೆಯನ್ನು ತೀವ್ರವಾಗಿ ಖಂಡಿಸಿದ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ
ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಸತತವಾಗಿ ಹಿಂದೂ ವಿರೋಧಿ ಹಾಗೂ ಅಸುರಕ್ಷತೆಯ ನೀತಿಯನ್ನು ಅನುಸರಿಸುತ್ತಿರುವುದನ್ನು ದ.ಕ. ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಪ್ರಕಟಣೆಯಲ್ಲಿ ತೀವ್ರವಾಗಿ ಖಂಡಿಸಿದೆ.
ಇತ್ತೀಚೆಗೆ ಉಡುಪಿ ಪರ್ಯಾಯ ಮಹೋತ್ಸವದ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಶತಮಾನಗಳ ಸಂಪ್ರದಾಯದಂತೆ ಭಗವಾಧ್ವಜ ಹಾರಿಸಿ ಮೆರವಣಿಗೆಗೆ ಚಾಲನೆ ನೀಡಿದ್ದನ್ನು ವಿರೋಧಿಸಿ, ಅವರ ಮೇಲೆ ಕ್ರಮಕ್ಕೆ ಒತ್ತಾಯಿಸಿರುವುದು ಕಾಂಗ್ರೆಸ್ನ ಬೌದ್ಧಿಕ ದಿವಾಳಿತನ ಹಾಗೂ ಸನಾತನ ಧರ್ಮದ ಮೇಲಿನ ದ್ವೇಷಕ್ಕೆ ಸಾಕ್ಷಿಯಾಗಿದೆ.
ಹಿಂದೂ ಸಮಾಜಕ್ಕಾಗಿ ಜೀವನವನ್ನೇ ಸವೆಸಿದ, ಹಿಂದೂ ಸಮಾಜದ ಕಣ್ಮಣಿ, ಶ್ರೀರಾಮ ಶಾಲೆ, ವಿವೇಕನಂದ ಶಾಲೆಯ ಮೂಲಕ ಸಹಸ್ರರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯ ಮೂಲಕ ಖ್ಯಾತರಾಗಿರುವ ಮತ್ತು ಹಿರಿಯ ಮಾರ್ಗದರ್ಶಕರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರ ಮೇಲೆ ರಾಜಕೀಯ ಪ್ರೇರಿತ ಸುಳ್ಳು ಮೊಕದ್ದಮೆಗಳನ್ನು ದಾಖಲಿಸುತ್ತಿರುವುದು ಖಂಡನೀಯವಾಗಿದೆ.
ಇದೇ ಸಮಯದಲ್ಲಿ ಕಾಂಗ್ರೆಸ್ ಸರ್ಕಾರ ಮಹಿಳೆಯರ ರಕ್ಷಣೆಯ ವಿಚಾರದಲ್ಲಿಯೂ ಸಂಪೂರ್ಣ ವಿಫಲವಾಗಿದೆ. ಚುನಾವಣೆ ಸಮಯದಲ್ಲಿ ಮಹಿಳೆಯರಿಗೆ ಹಲವು ಭರವಸೆಗಳನ್ನು ನೀಡಿದರೂ, ಇಂದು ಮಹಿಳೆಯರಿಗೆ ನಿಜವಾದ ‘ಮಹಿಳಾ ಸುರಕ್ಷ ಗ್ಯಾರಂಟಿ’ಯನ್ನೇ ನೀಡಿಲ್ಲ. ಮಹಿಳೆಯರ ಸುರಕ್ಷತೆ, ಗೌರವ ಮತ್ತು ಬದುಕಿನ ಅಗತ್ಯ ಸಮಸ್ಯೆಗಳ ಬಗ್ಗೆ ಸರ್ಕಾರ ನಿರ್ಲಕ್ಷ್ಯ ತೋರಿಸುತ್ತಿದೆ. ಮಹಿಳೆಯರ ಮೇಲಿನ ದೌರ್ಜನ್ಯ, ಕಿರುಕುಳ, ಸಾರ್ವಜನಿಕ ಸ್ಥಳಗಳಲ್ಲಿ ಅಸುರಕ್ಷತೆ, ಉದ್ಯೋಗಸ್ಥ ಮಹಿಳೆಯರ ಸಮಸ್ಯೆಗಳು, ಬೆಲೆ ಏರಿಕೆಯಿಂದ ಕುಟುಂಬ ನಿರ್ವಹಣೆಯ ಒತ್ತಡ, ಮುಂತಾದವುಗಳಿಗೆ ಸರ್ಕಾರದಿಂದ ಸ್ಪಷ್ಟ ಪರಿಹಾರ ಕಾಣಿಸುತ್ತಿಲ್ಲ. ಈ ದಮನಕಾರಿ ನೀತಿಗೆ ತಕ್ಕ ಪಾಠವನ್ನು ಜನತೆ ಕಲಿಸಲಿದೆ ಎಂದು ಪ್ರಕಟಣೆಯಲ್ಲಿ ಎಚ್ಚರಿಸಿದೆ.