ಮೂಡುಬಿದಿರೆಯಲ್ಲಿ ಜ. 3, 4ರಂದು ಆಟೋ ಎಕ್ಸ್ ರಾಷ್ಟ್ರಮಟ್ಟದ ಆಟೋಕ್ರಾಸ್ ರ್ಯಾಲಿ
ಕಲ್ಲಬೆಟ್ಟು ಮಾರಿಗುಡಿ ದೇವಸ್ಥಾನದ ಹತ್ತಿರದ ಪಂಚರತ್ನ ಮೈದಾನದಲ್ಲಿ ರ್ಯಾಲಿ ನಡೆಯಲಿದ್ದು, ಜನವರಿ 4ರಂದು ಬೆಳಗ್ಗೆ 9.30ಕ್ಕೆ ರ್ಯಾಲಿಯ ಅಧಿಕೃತ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಸಮಾರಂಭದಲ್ಲಿ ಸಂಸದ ಬ್ರಿಜೇಶ್ ಚೌಟ, ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಚೌಟರ ಅರಮನೆಯ ಕುಲದೀಪ್ ಎಂ., ಉದ್ಯಮಿಗಳಾದ ಕೆ. ಶ್ರೀಪತಿ ಭಟ್ ಹಾಗೂ ಕೃಷ್ಣರಾಜ್ ಹೆಗ್ಡೆ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿರುವರು.
ತ್ರಿಭುವನ್ ಆಟೋಮೋಟಿವ್ ಕ್ಲಬ್ ಮತ್ತು ಬೆದ್ರ ಅಡ್ವೆಂಚರಸ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ, ಮೋಟಾರ್ಸ್ಪೋರ್ಟ್ ಹಾಗೂ ಫೆಡರೇಶನ್ ಆಫ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ಸ್ ಆಫ್ ಇಂಡಿಯಾ ಸಹಯೋಗದೊಂದಿಗೆ ಈ ರ್ಯಾಲಿ ನಡೆಯಲಿದೆ. ಭಾರತದ ಖ್ಯಾತ ರೇಸಿಂಗ್ ಸಾಧಕರಾದ ಮೂಸಾ ಶರೀಫ್ ಹಾಗೂ ಅಶ್ವಿನ್ ನಾಯಕ್ ಅವರ ತಾಂತ್ರಿಕ ಮಾರ್ಗದರ್ಶನ ಕೂಟಕ್ಕಿದೆ.
ಚಾಂಪಿಯನ್ಶಿಪ್ನಲ್ಲಿ 800ಸಿಸಿ ಯಿಂದ 1650ಸಿಸಿವರೆಗಿನ ವಿವಿಧ ವಿಭಾಗಗಳು, ಇಂಡಿಯನ್ ಓಪನ್, ಡೀಸೆಲ್ ಓಪನ್, ಜಿಪ್ಸಿ ಕ್ಲಾಸ್ ಹಾಗೂ ಸ್ಥಳೀಯರಿಗಾಗಿ ಸ್ಟಾರ್ ಆಫ್ ಮೂಡುಬಿದಿರೆ ವಿಭಾಗಗಳಿರಲಿವೆ. ವಿಶೇಷವಾಗಿ ಮಹಿಳೆಯರಿಗಾಗಿ ಲೇಡೀಸ್ ಓಪನ್ ಹಾಗೂ ಹೊಸಬರಿಗಾಗಿ ಅಮೆಚೂರ್ ಕ್ಲಾಸ್ ಪರಿಚಯಿಸಲಾಗಿದೆ. ವಿಜೇತರಿಗೆ ನಗದು ಪುರಸ್ಕಾರ ಹಾಗೂ ಆಕರ್ಷಕ ಟ್ರೋಫಿಗಳನ್ನು ನೀಡಲಾಗುವುದು. ಮೋಟಾರ್ ಸ್ಪೋರ್ಟ್ಸ್ ಕ್ಷೇತ್ರದಲ್ಲಿ ಸಾಧನೆ ಮಾಡಿದ ಇಬ್ಬರು ಸಾಧಕರ ಸ್ಮರಣಾರ್ಥ, ಈ ಬಾರಿ ಫಾಸ್ಟೆಸ್ಟ್ ಡ್ರೆöÊವರ್ ಮತ್ತು ಬೆಸ್ಟ್ ರೈಡರ್ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು. ಮೂಡುಬಿದಿರೆ ಟ್ರ್ಯಾಕ್ ಚಾಂಪಿಯನ್ಗೆ ರೂ. 20,000 ನಗದು ಬಹುಮಾನ ನೀಡಲಾಗುವುದು.
ಸುದ್ದಿಗೋಷ್ಠಿಯಲ್ಲಿ ಸಂಘಟಕರಾದ ಯತಿರಾಜ್ ಶೆಟ್ಟಿ ಮತ್ತು ಚೆಂಗಪ್ಪ ಉಪಸ್ಥಿತರಿದ್ದರು