ಡಾ. ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಪ್ರಕರಣ: ಕೋಟ್ಯಾನ್ ಖಂಡನೆ
ಸ್ವಾಮಿ ವಿವೇಕಾನಂದರು ಭಾರತದ ಆಧ್ಯಾತ್ಮಿಕ, ರಾಷ್ಟ್ರೀಯ ಮತ್ತು ಮಾನವೀಯ ಮೌಲ್ಯಗಳ ಪ್ರತೀಕ. ಅವರ ಜಯಂತಿಯಂತಹ ಪವಿತ್ರ ವೇದಿಕೆಯಲ್ಲಿ ದೇಶಭಕ್ತಿ, ಸಂಸ್ಕೃತಿ ಮತ್ತು ಸಮಾಜದ ಹಿತದ ಬಗ್ಗೆ ಮಾತನಾಡಿರುವುದನ್ನು ‘ದ್ವೇಷ ಭಾಷಣ’ ಎಂದು ಬಿಂಬಿಸಲು ಹೊರಟಿರುವುದು ದುರುದ್ದೇಶಪೂರಿತ ಹಾಗೂ ಕಾಂಗ್ರೆಸ್ನ ರಾಜಕೀಯ ಪ್ರೇರಿತ ಕ್ರಮವಾಗಿದೆ.
ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರು ಹಲವು ದಶಕಗಳಿಂದ ಶಿಕ್ಷಣ, ಸಂಸ್ಕೃತಿ ಮತ್ತು ರಾಷ್ಟ್ರಚಿಂತನೆಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವವರು. ಅವರ ಮಾತನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಮೂಲಕ ಸಾಮಾಜಿಕ ಶಾಂತಿಗೆ ಧಕ್ಕೆಯುಂಟು ಮಾಡುವ ಪ್ರಯತ್ನ ನಡೆಯುತ್ತಿದೆ. ಹಿಂದೂಗಳ ದನಿಯನ್ನು ಹತ್ತಿಕ್ಕುವ ಕಾರ್ಯ ಈ ಕಾಂಗ್ರೇಸ್ ಸರಕಾರದಿಂದ ಅವ್ಯಾಹತವಾಗಿ ನಡೆಯುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವು ಸಂವಿಧಾನಾತ್ಮಕ ಹಕ್ಕು. ಆದರೆ ಇಂದು ರಾಷ್ಟ್ರವಾದಿ ಚಿಂತನೆ ವ್ಯಕ್ತಪಡಿಸಿದರೆ ಕೇಸು, ದೂರು, ಬೆದರಿಕೆ ಎನ್ನುವ ವಾತಾವರಣ ನಿರ್ಮಾಣವಾಗುತ್ತಿರುವುದು ಆತಂಕಕಾರಿ ವಿಷಯ.
ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಈ ಪ್ರಕರಣವನ್ನು ಪಕ್ಷಪಾತರಹಿತವಾಗಿ, ಕಾರ್ಯ ನಿರ್ವಹಿಸಬೇಕು. ಅನಾವಶ್ಯಕವಾಗಿ ಸಮಾಜದಲ್ಲಿ ಉದ್ವಿಗ್ನತೆ ಸೃಷ್ಟಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಸರಕಾರ ತನ್ನ ಹೊಣೆಗಾರಿಕೆಯನ್ನು ಮರೆತು ತನ್ನ ಸೈದ್ದಾಂತಿಕ ವಿರೋಧಿಗಳ ಮೇಲೆ ಸವಾರಿ ಮಾಡಲು ಹೊರಟಿದೆ. ಅದೆಷ್ಟೋ ಬಾರಿ ಇಂತಹ ಇಲ್ಲ ಸಲ್ಲದ ದೂರುಗಳನ್ನು ನೀಡಿ ನ್ಯಾಯಾಲಯದಿಂದ ಉಗಿಸಿಕೊಂಡದ್ದೂ ಆಗಿದೆ. ಇನ್ನು ಮುಂದೆಯೂ ಇಂತಹ ರಾಜಕೀಯ ಲೇಪನದ ಗೊಡ್ಡು ಬೆದರಿಕೆಗಳಿಗೆ ಅಂಜುವ ಮಾತೇ ಇಲ್ಲ.
ಭಾರತೀಯ ಜನತಾ ಪಾರ್ಟಿಯು ಸದಾ ಸಾಮಾಜಿಕ ಸೌಹಾರ್ದತೆ, ಶಾಂತಿ ಮತ್ತು ಸಂವಿಧಾನದ ಗೌರವವನ್ನು ಕಾಪಾಡಿಕೊಂಡು ಬಂದಿದೆ. ಆದರೆ ಈ ರೀತಿಯ ಸುಳ್ಳು ದೂರುಗಳನ್ನು ದಾಖಲಿಸುವ ಮುಖೇನ ಸಮಾಜದ ವಿರುದ್ದ ಹಾಗೂ ಸಂವಿಧಾನ ಸರ್ವರಿಗೂ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಷಡ್ಯಂತ್ರವೆಲ್ಲವನ್ನೂ ಇನ್ನಷ್ಟು ಪ್ರಖರವಾಗಿ ಎದುರಿಸಿಲು ಹಾಗೂ ಹಿಂದೂಗಳು ಹಾಗೂ ಹಿಂದೂ ಕಾರ್ಯಕರ್ತರು ಮತ್ತು ಮುಖಂಡರ ಹಿತಕಾಯಲು ಶಾಸಕನಾಗಿ ನಾನೂ ಸೇರಿದಂತೆ ಭಾರತೀಯ ಜನತಾ ಪಾರ್ಟಿ ಸದಾ ಸನ್ನದ್ದವಾಗಿರುತ್ತದೆ ಎಂದು ಉಮಾನಾಥ ಕೋಟ್ಯಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.