ಅಧಿಕಾರ ಮತ್ತು ಹಣ ದುರುಪಯೋಗ: ನೆಲ್ಲಿಕಾರು ಪಂ. ಉಪಾಧ್ಯಕ್ಷೆ ಸುಶೀಲ ಸದಸ್ಯತ್ವ ಅನಹ೯
ಮೂಡುಬಿದಿರೆ: ನೆಲ್ಲಿಕಾರು ಗ್ರಾ. ಪಂ. ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಉಪಾಧ್ಯಕ್ಷೆ ಸುಶೀಲ ಅವರು ಅಧಿಕಾರ ದುರುಪಯೋಗ ಮತ್ತು ಹಣ ದುರುಪಯೋಗ ಪಡಿಸಿಕೊಂಡಿರುವ ಆರೋಪಗಳು ಸಾಬೀತಾಗಿರುವುದರಿಂದ ಅವರನ್ನು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ-1993 ಪ್ರಕರಣ 43(ಎ) (i) ಮತ್ತು (vi), 48 (4) ಹಾಗೂ (5)ರನ್ವಯ ಸದಸ್ಯತ್ವ/ ಉಪಾಧ್ಯಕ್ಷ ಸ್ಥಾನದಿಂದ ತೆಗೆದು ಹಾಕಿರುವುದಲ್ಲದೇ ಮತ್ತು ಅದೇ ಅಧಿನಿಯಮದ 43 (ಎ) (2) ರನ್ವಯ ಯಾವುದೇ ಪಂಚಾಯತ್ಗೆ ಮುಂದಿನ ಆರು (06) ವರ್ಷಗಳವರೆಗೆ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸಿ ಪಂಚಾಯತ್ ರಾಜ್ ಪ್ರಾದೇಶಿಕ ಆಯುಕ್ತರು ಆದೇಶಿಸಿದ್ದಾರೆ.
48,289 ರೂ.ಗಳನ್ನು ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿರುವ ದಿನಾಂಕದಿಂದ ಶೇ.8ರ ಬಡ್ಡಿದರದೊಂದಿಗೆ ಕರ್ನಾಟಕ ಪಂಚಾಯತ್ ರಾಜ್ (ಗ್ರಾಮ ಪಂಚಾಯತ್ ಗಳ ಆಯವ್ಯಯ ಮತ್ತು ಲೆಕ್ಕಪತ್ರಗಳು) ನಿಯಮಗಳು-2006ರ ನಿಯಮ 111ರನ್ವಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ನಿರ್ಧರಿಸಿ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ-1993ರ ಪ್ರಕರಣ 246(8) ರನ್ವಯ ವಸೂಲಿ ಮಾಡಲು ಕಾರ್ಯನಿರ್ವಹಕ ಅಧಿಕಾರಿ, ತಾಲೂಕು ಪಂಚಾಯತ್ ಮೂಡುಬಿದಿರೆ ತಾಲೂಕು ಇವರಿಗೆ ಆದೇಶಿಸಿದೆ.
ನೆಲ್ಲಿಕಾರು ಪಂಚಾಯತ್ ನಲ್ಲಿ ಸುಶೀಲರವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯಲ್ಲಿ ಮಾಂಟ್ರಾಡಿ ಶಾಲೆಯ ಮಳೆ ನೀರು ಕೊಯ್ಲು ಕಾಮಗಾರಿ, ನೆಲ್ಲಿಕಾರು ಗ್ರಾಮ ಪಂಚಾಯತ್ ಕಚೇರಿ ಬಳಿ ಇರುವ ಕೊಳವೆ ಬಾವಿಗೆ ಜಲಮರುಪೂರಣದ ಘಟಕ, ಮಾಂಟ್ರಾಡಿ ಗ್ರಾಮದ ಈಶ್ವರಬೆಟ್ಟುವಿನಿಂದ ಹಂಪೆಜಾಲು ತನಕ ಸಾರ್ವಜನಿಕ ತೋಡಿನ ಹೂಳೆತ್ತುವ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿರುವುದಾಗಿ ಗ್ರಾಮಸ್ಥ ಪ್ರಕಾಶ್ ಬಿನ್ ವಾಸು ಪೂಜಾರಿಯವರು ಒಂಬುಡ್ಸ್ಮೆನ್ ನಲ್ಲಿ ದೂರು ನೀಡಿದ್ದರು. ನಂತರ ಈ ಕಾಮಗಾರಿಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿದ್ದ ಉಗ್ಗಪ್ಪ ಮೂಲ್ಯ ರವರು ಮೊದಲ ಆಪಾದಿತರಾಗಿ ಅವ್ಯವಹಾರದಲ್ಲಿ ಭಾಗಿಯಾಗಿದ್ದುದು ಸಾಬೀತಾಗಿ ಅವರಿಂದ ಇಲಾಖೆ ಹಣ ವಸೂಲಿ ಮಾಡಿತ್ತು. ಆದರೆ ಸುಶೀಲ ಅವರು ಇಲಾಖಾ ವಿಚಾರಣೆಗೆ ಸರಿಯಾದ ಸಮಯದಲ್ಲಿ ಹಾಜರಾಗದೆ ಹಣವನ್ನು ಮರುಪಾವತಿಯು ಮಾಡದೆ ಇರುವುದರಿಂದ ಇಲಾಖೆ ಇದೀಗ ಅವರ ಮೇಲೆ ಕ್ರಮ ಕೈಗೊಂಡಿದೆ.