‘ಮಹಿಳೆಯರ ಮೇಲಿನ ಹಿಂಸಾಚಾರ ಹಾಗೂ ಕಾನೂನು ಪರಿಹಾರ’ ಉಪನ್ಯಾಸ
Saturday, January 31, 2026
ಪುತ್ತೂರು: ಸಂತ ಫಿಲೋಮಿನ ಕಾಲೇಜು (ಸ್ವಾಯತ್ತ), ಪುತ್ತೂರಿನ ವಿದ್ಯಾರ್ಥಿ ಸಂಘ, ಮಹಿಳಾ ಸಬಲೀಕರಣ ಕೋಶ ಹಾಗೂ ಮಹಿಳಾ ಕಿರುಕುಳ ತಡೆ ಕೋಶಗಳ ಸಂಯುಕ್ತ ಆಶ್ರಯದಲ್ಲಿ ಬುಧವಾರ ಎಸ್ಜೆಎಂ ಸಭಾಂಗಣದಲ್ಲಿ ‘ಮಹಿಳೆಯರ ಮೇಲಿನ ಹಿಂಸಾಚಾರ ಮತ್ತು ಕಾನೂನು ಪರಿಹಾರಗಳು’ ಎಂಬ ವಿಷಯದ ಕುರಿತು ಅತಿಥಿ ಉಪನ್ಯಾಸ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ರೆ. ಡಾ. ಆಂಟನಿ ಪ್ರಕಾಶ್ ಮೊಂತೇರೋ ವಹಿಸಿ ಮಾತನಾಡಿ, ಮಹಿಳೆಯರ ಹಕ್ಕುಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದ್ದು, ಎಲ್ಲ ವಿಧದ ಹಿಂಸಾಚಾರಗಳ ವಿರುದ್ಧ ಧೈರ್ಯವಾಗಿ ನಿಲ್ಲಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಪುತ್ತೂರಿನ ಖ್ಯಾತ ನ್ಯಾಯವಾದಿ ಕೃಷ್ಣ ಪ್ರಸಾದ್ ನಾಡ್ಸಾರ್ ಭಾಗವಹಿಸಿ, ಮಹಿಳೆಯರ ಮೇಲೆ ನಡೆಯುವ ವಿವಿಧ ಹಿಂಸಾಚಾರಗಳ ಸ್ವರೂಪ ಹಾಗೂ ಭಾರತೀಯ ಕಾನೂನಿನಡಿ ಲಭ್ಯವಿರುವ ಕಾನೂನು ಪರಿಹಾರಗಳನ್ನು ವಿವರಿಸಿದರು. ಗೃಹ ಹಿಂಸೆ, ಕಾರ್ಯಕ್ಷೇತ್ರದ ಲೈಂಗಿಕ ಕಿರುಕುಳ ಹಾಗೂ ಸೈಬರ್ ಅಪರಾಧಗಳಿಗೆ ಸಂಬಂಧಿಸಿದ ಕಾನೂನುಗಳನ್ನು ವಿವರಿಸಿ, ಮಹಿಳೆಯರು ತಮ್ಮ ಹಕ್ಕುಗಳು ಮತ್ತು ಕಾನೂನು ಸಹಾಯ ವ್ಯವಸ್ಥೆಗಳ ಬಗ್ಗೆ ಅರಿವು ಹೊಂದಿರಬೇಕೆಂದು ಅವರು ಕರೆ ನೀಡಿದರು.
ಕಾಲೇಜಿನ ಉಪಪ್ರಾಂಶುಪಾಲ ಡಾ. ವಿಜಯಕುಮಾರ್ ಎಂ ಉಪಸ್ಥಿತರಿದ್ದರು. ವಿದ್ಯಾರ್ಥಿ ಸಂಘದ ನಿರ್ದೇಶಕರಾದ ಡಾ. ರಾಧಾಕೃಷ್ಣ ಗೌಡ ಹಾಗೂ ಸ್ಪಿಯರ್ಲ್ ಫಿಯೋನಾ ಪೆರೇರಾ, ಮಹಿಳಾ ಕಿರುಕುಳ ತಡೆ ಕೋಶದ ಸಂಚಾಲಕ ನೋವೆಲಿನ್ ಎನ್ ಡಿಸೋಜಾ ಮತ್ತು ಮಹಿಳಾ ಸಬಲೀಕರಣ ಕೋಶದ ಸಹ ಸಂಚಾಲಕಿ ಸ್ವಾತಿ ಶೆಟ್ಟಿ ಉಪಸ್ಥಿತರಿದ್ದರು.
ಲಿಖಿತಾ ಅತಿಥಿಯ ಪರಿಚಯವನ್ನು ನೀಡಿದರು, ಶ್ರೀಜನಾ ಸ್ವಾಗತ ಭಾಷಣ ಮಾಡಿದರು, ಸಹನಾ ಪ್ರಿಯಾ ವಂದನಾ ಸಮರ್ಪಿಸಿದರು. ಲಾನಿಶಾ ಮತ್ತು ಅವನಿ ಪ್ರಾರ್ಥನೆ ನೆರವೇರಿಸಿದರು. ಹಿಬಾ ಶೇಖ್ ಕಾರ್ಯಕ್ರಮ ನಿರೂಪಿಸಿದರು.

