ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ ಕ್ರಿಸ್ಮಸ್ ಹಬ್ಬ ಆಚರಣೆ
Sunday, January 4, 2026
ಪುತ್ತೂರು: ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ ಕ್ರಿಸ್ಮಸ್ ಹಬ್ಬವನ್ನು ಪ್ರೀತಿ ಮತ್ತು ಸೌಹಾರ್ದತೆದೊಂದಿಗೆ ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ವಂ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಅವರು ಮಾತನಾಡಿ, ಕ್ರಿಸ್ಮಸ್ ಹಬ್ಬವು ಆರೈಕೆ ಮತ್ತು ಹಂಚಿಕೆಯ ಸಂಕೇತವಾಗಿದೆ. ಆದ್ದರಿಂದ ನಿಮ್ಮ ಜೀವನದಲ್ಲಿ ಇತರರ ಬಗ್ಗೆ ಕಾಳಜಿ ವಹಿಸಿ ಮತ್ತು ನಿಮ್ಮಲ್ಲಿರುವ ಸುಖ ಸಂತೋಷವನ್ನು ಇತರರೊಂದಿಗೆ ಹಂಚಿಕೊಳ್ಳಿ. ಕ್ರಿಸ್ಮಸ್ ಹಬ್ಬವು ಅಸಂಖ್ಯಾತ ಭಾವನೆಗಳನ್ನು ಬೆಸೆದುಕೊಂಡಿದೆ ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ ಮಾತನಾಡಿ, ಒಬ್ಬರು ಇನ್ನೊಬ್ಬರ ಸಹಾಯವನ್ನು ಮಾಡಬೇಕು, ಶಾಂತಿ ಸಮಾನತೆಯಿಂದ ಜೀವಿಸಬೇಕು, ಪ್ರೀತಿಯನ್ನು ಹಂಚಿಕೊಳ್ಳಬೇಕು, ನಾವು ಮಾಡುವ ಕೆಲಸ ಬೇರೆಯವರಿಗೆ ಒಳ್ಳೇದಾಗುವಂತಿರಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ವರದರಾಜ್ ಚಂದ್ರಗಿರಿ ಮಾತನಾಡಿ, ಕ್ರಿಸ್ತನ ಬಗ್ಗೆ ಹಲವಾರು ಕವಿತೆಗಳನ್ನು ಗೋವಿಂದ ಪೈ ಅವರು ಬರೆದ್ದಿದ್ದಾರೆ ಅದರಲ್ಲಿ ಯೇಸು ಮತ್ತು ಕೃಷ್ಣ ಎನ್ನುವ ಕವಿತೆಯು ಒಂದು. ಎಲ್ಲಾ ಧರ್ಮಗಳು ಹುಟ್ಟಿಕೊಳ್ಳುವ ಮೊದಲೇ ಪ್ರೀತಿ, ವಿಶ್ವಾಸ, ಪ್ರಾಮಾಣಿಕತೆ ಇತ್ಯಾದಿ ನಮ್ಮಲ್ಲಿ ಮೊದಲೇ ಹುಟ್ಟಿ ಕೊಂಡಿತ್ತು. ನಾವು ಏನು ಮರೆಯುತ್ತೇವೆಯೋ ಅದನ್ನು ದೇವರು ನೆನಪಿಸಿ ಕೊಡುತ್ತಾರೆ ಎಂದು ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಹಣಕಾಸು ಅಧಿಕಾರಿ ಪಂಚಲಿಂಗ ಸ್ವಾಮಿ ಎಸ್. ಅವರು ಮಾತನಾಡಿ, ಯಾವ ಧರ್ಮವು ಇನ್ನೊಬ್ಬರನ್ನು ದ್ವೇಷಿಸಿ ಅಥವಾ ವಿರೋಧಿಸಿ ಎಂದು ಹೇಳುವುದಿಲ್ಲ ಪ್ರೀತಿಯನ್ನು ಹಂಚಿ, ಯಾರು ತಮ್ಮನ್ನು ತಾವು ಪ್ರೀತಿಸಿಕೊಳ್ಳುತ್ತಾರೋ, ಅವರು ಖಂಡಿತವಾಗಿಯೂ ಚಿಟ್ಟೆಯಂತೆ ಪ್ರೀತಿಯನ್ನು ಪಸರಿಸಬಲ್ಲರು. ಚಿಟ್ಟೆಯು ಹೇಗೆ ಸಂತೋಷವನ್ನು ಹರಡುತ್ತದೆಯೋ, ಹಾಗೆಯೇ ನೀವು ಸುಖಮಯ ಜೀವನವನ್ನು ನಡೆಸಬೇಕೆಂದರೆ ನಿಮ್ಮ ಸುತ್ತಮುತ್ತಲಿರುವ ಜನರು ಸಹ ಸಂತೋಷವಾಗಿರಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಂ. ಫಾ. ಅಶೋಕ್ ರಾಯನ್ ಕ್ರಾಸ್ತಾ, ಮಹಿಳಾ ಹಾಸ್ಟೆಲ್ ವಾರ್ಡನ್ ಆಗಿರುವ ಸಿಸ್ಟರ್ ಲೂರ್ಡ್ ಮೇರಿ ಮತ್ತು ಸಿಸ್ಟರ್ ಮೇರಿ ರಾಣಿ, ಉಪ ಪ್ರಾಂಶುಪಾಲ ಡಾ. ವಿಜಯ್ ಕುಮಾರ್ ಮೊಳೆಯರ್, ಶೈಕ್ಷಣಿಕಾ ಕುಲಸಚಿವ ಡಾ. ನೋರ್ಬಟ್ ಮಸ್ಕರೇನ್ಹಸ್ ಮತ್ತು ಪರೀಕ್ಷಾಂಗ ಕುಲಸಚಿವ ಡಾ. ವಿನಯಚಂದ್ರ ಮತ್ತು ಉಪನ್ಯಾಸಕ ವೃಂದದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸೋಶಿಯಲ್ ವರ್ಕ್ ವಿಭಾಗದ ಸಂಯೋಜಕಿ ಶ್ರೀಮನಿ ಕ್ರಿಸ್ಮಸ್ ಸಂದೇಶವನ್ನು ನೀಡಿದರು. ಉಪನ್ಯಾಸಕ ವೃಂದ ಮತ್ತು ವಿದ್ಯಾರ್ಥಿನಿಯರ ಬಳಗ ಕ್ಯಾರಲ್ಸ್ ಗಾಯನದಲ್ಲಿ ಪಾಲ್ಗೊಂಡರು. ಪ್ರಾಣಿಶಾಸ್ತ್ರ ವಿಭಾಗದ ಉಪನ್ಯಾಸಕಿ ಶಿವಾನಿ ಮಲ್ಯ ಪ್ರಾರ್ಥಿಸಿದರು, ಐಕ್ಯುಎಸಿ ಸಂಯೋಜಕ ಡಾ. ಏಡ್ವಿನ್ ಡಿಸೋಜಾ ಸ್ವಾಗತಿಸಿ, ಕಚೇರಿ ಅಧೀಕ್ಷಕಿ ರುಫಿನಾ ಡಿಸೋಜಾ ವಂದಿಸಿದರು. ಪೃಥ್ವಿ ಕಾರ್ಯಕ್ರಮವನ್ನು ನಿರೂಪಿಸಿದರು.



