ಬಹುಕಾಲದ ಬಳಿಕ ಮಾಜಿ ಕೇಂದ್ರಸಚಿವರಿಬ್ಬರ ಮುಖಾಮುಖಿ
Sunday, February 1, 2026
ಬಂಟ್ವಾಳ: ದ.ಕ. ಜಿಲ್ಲೆಯ ಕಾಂಗ್ರೆಸ್ ಪಕ್ಷದ ಹಳೇ ಹಿರಿಯ ಮುಖಂಡರುಗಳಾದ ಕೇಂದ್ರದ ಮಾಜಿ ಸಚಿವರು ಬಹುಕಾಲದ ಬಳಿಕ ರವಿವಾರ ಹಠಾತ್ ಮುಖಾಮುಖಿಯಾಗಿದ್ದು, ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ.
ಮಧ್ಯಾಹ್ನದ ವೇಳೆಗೆ ಕೇಂದ್ರದ ಮಾಜಿ ಸಚಿವ ವೀರಪ್ಪಮೊಯಿಲಿ ಮತ್ತು ಕೇಂದ್ರದ ಮಾಜಿ ಸಚಿವರಾದ ಜನಾರ್ದನ ಪೂಜಾರಿ ಅವರ ಬಿ.ಸಿ.ರೋಡಿನಲ್ಲಿರುವ ನಿವಾಸಕ್ಕೆ ಭೇಟಿಯಾಗಿದ್ದು, ಉಭಯ ನಾಯಕರು ಬಹುಕಾಲದ ಬಳಿಕ ಪರಸ್ಪರ ಮುಖಾಮುಖಿಯಾಗಿ ಕುಶಲೋಪಚರಿ ನಡೆಸಿದರು.
ರಾಜ್ಯದ ಮುಖ್ಯಮಂತ್ರಿಯಾಗಿ, ಕೇಂದ್ರದ ಸಚಿವರಾಗಿ ಹಲವು ಜವಾಬ್ದಾರಿಗಳನ್ನು ನಿಭಾಯಿಸಿದ್ದ ಮೊಯ್ಲಿ ಹಾಗೂ ಕೇಂದ್ರದ ಪ್ರಭಾವಿ ಸಚಿವರಾಗಿದ್ದ ಜನಾರ್ದನ ಪೂಜಾರಿ ದಶಕಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿ ಪ್ರಭಾವಿ ನಾಯಕರಾಗಿದ್ದವರು. ಉಭಯ ನಾಯಕರು ಹಿಂದಿನ ರಾಜಕೀಯ ಸನ್ನಿವೇಶವನ್ನು ಮೆಲುಕು ಹಾಕಿ ಉಭಯಕುಶಲೋಪರಿ ನಡೆಸಿದರು.
ಮಾಜಿ ಸಚಿವ ಬಿ. ರಮಾನಾಥ ರೈ, ಮಂಗಳೂರಿನ ಮಾಜಿ ಮೇಯರ್ ಗಳಾದ ಶಶಿಧರ ಹೆಗ್ಡೆ, ಭಾಸ್ಕರ ಕೆ, ಮಂಗಳೂರಿನ ಮಾಜಿ ಕಾರ್ಪೊರೇಟರ್ ಅಶೋಕ್ ಡಿ.ಕೆ., ಬಂಟ್ವಾಳ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಬೇಬಿ ಕುಂದರ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಲಕೃಷ್ಣ ಅಂಚನ್, ರಿಸರ್ವ್ ಬ್ಯಾಂಕ್ ಮಾಜಿ ನಿರ್ದೇಶಕ ನವೀನ್ ಭಂಡಾರಿ ಉಪಸ್ಥಿತರಿದ್ದರು.