ಅಕ್ರಮ ಮರಳು ಸಾಗಾಟ ಪತ್ತೆ
Thursday, February 19, 2026
ಬಂಟ್ವಾಳ: ಇಲ್ಲಿಗೆ ಸಮೀಪದ ಮಚ್ಚಿನ ಗ್ರಾಮದ ಪುಂಚಪಾದೆ ಬಳಿಯ ಪೆರೂರುನಿಂದ ಕುಪ್ಪೆಟ್ಟಿ ಕಡೆಗೆ ಹರಿಯುವ ನೀರಿನ ತೋಡಿನಿಂದ ಪಿಕಪ್ ನಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುವುದನ್ನು ಪುಂಜಾಲಕಟ್ಟೆ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಸೋಮವಾರ ರಾತ್ರಿ ಕಾರಿಂಜೇಶ್ವರ ದೇವಳದ ಬಂದೋಬಸ್ತಿನಲ್ಲಿದ್ದ ಪುಂಜಾಲಕಟ್ಟೆ ಠಾಣೆಯ ಎಸ್ಐ ರಾಜೇಶ್ ಕೆ.ವಿ. ಅವರಿಗೆ ಬಂದ ಮಾಹಿತಿಯನ್ನಾಧರಿಸಿ ಕಾರ್ಯಚರಣೆ ನಡೆಸಿ ಪೆರೂರು ಎಂಬಲ್ಲಿ ಮರಳನ್ನು ಕಳವುಗೈದು ಪಿಕ್ ಆಪ್ ವಾಹನದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದನ್ನು ಪತ್ತೆಯಚ್ಚಿದ್ದಾರೆ.
ಪಿಕಪ್ ಚಾಲಕ ಪ್ರವೀಣ್ (38) ಹಾಗೂ ವಾಹನದಲ್ಲಿದ್ದ ವಸಂತ (42), ದಿನೇಶ(48) ಎಂಬವರನ್ನು ವಶಪಡಿಸಿ ವಿಚಾರಿಸಿದಾಗ ತೋಡಿನಿಂದ ಮರಳನ್ನು ಕಳವುಗೈದು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದರಿಂದ ಮರಳು ತುಂಬಿದ್ದ ಪಿಕ್ ಆಪ್ ವಾಹನ ಸಹಿತ ಸೊತ್ತುಗಳನ್ನು ವಶಪಡಿಸಿರುವ ಪುಂಜಾಲಕಟ್ಟೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.