ತುಳುನಾಡಿನ ಪ್ರತಿಯೊಬ್ಬರೂ ಓದಲೇಬೇಕಾದ ಪುಸ್ತಕ 'ಕರಾವಳಿಯ ರಕ್ತ ಕಣ್ಣೀರು'
ಸ್ವಾತಂತ್ರ್ಯ ಪೂರ್ವದಿಂದಲೇ ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಸೌಹಾರ್ದತೆಗೆ ಕೊಳ್ಳಿ ಇಟ್ಟಿದ್ದೇ ಇಲ್ಲಿನ ಸಂಘಪರಿವಾರ ಎಂಬುದರಲ್ಲಿ ಎರಡು ಮಾತಿಲ್ಲ. ಕಳೆದ 3-4 ದಶಕಗಳಿಂದ ತನ್ನ ರಾಜಕೀಯ ಬೇಳೆ ಬೇಯಿಸಲು ಕೋಮುವಾದದ ಅಸ್ತ್ರವನ್ನು ಉಪಯೋಗಿಸಿ ಅಮಾಯಕ ಯುವಕರ ಜೀವವನ್ನು ಬಲಿ ತೆಗೆದುಕೊಂಡು ತಾನು ಮಾತ್ರ ರಾಜಕೀಯದ ಮೆಟ್ಟಿಲನ್ನು ಹಂತ ಹಂತವಾಗಿ ಮೇಲೇರಿ ಕೋಟ್ಯಾಂತರ ರೂಪಾಯಿ ಹಣವನ್ನು ದೋಚಿದ ಬಿಜೆಪಿ ಸಂಘಪರಿವಾರದ ನಾಯಕರ ಕಥೆ ಯಾರಿಗೇನು ಗೊತ್ತಿಲ್ಲ.
ದೀರ್ಘಕಾಲ ಇಂತಹ ವಿಷಜಂತುಗಳು ಹಬ್ಬಿಸಿದ ಕೋಮು ದ್ವೇಷದಿಂದ ಕರಾವಳಿ ಜನತೆಯ ಬದುಕನ್ನೇ ನಾಶ ಮಾಡಿದ್ದಾರೆ. ಇಲ್ಲಿ ಅಭಿವೃದ್ಧಿಯಂತೂ ಕನಸಿನ ಮಾತಾಗಿದೆ. ಒಂದು ಕಾಲದಲ್ಲಿ ಮಂಗಳೂರಿನ ಜನತೆಯನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದ ಹೊರಗಿನ ಜನರು ಇಂದು ಮಂಗಳೂರಿಗರು ಅಂದರೆ ಮಾರುದ್ದ ಓಡುವ ಪ್ರಸಂಗ ಬಂದಿದೆ. ಅಷ್ಟರ ಮಟ್ಟಿಗೆ ಕರಾವಳಿಯ ಅಭಿವೃದ್ಧಿ ಹಾಗೂ ಸೌಹಾರ್ದತೆಯನ್ನು ನಾಶಪಡಿಸಿ, ಇಂದು ಹಿಂದುತ್ವದ ಭದ್ರಕೋಟೆ ಎಂದು ಜಪ ಮಾಡಲಾಗುತ್ತಿದೆ.
ಕೋಮುದ್ವೇಷಕ್ಕೆ ವಿನಾಃ ಕಾರಣ ಬಲಿಯಾದ ಜೀವಗಳೆಷ್ಟು?ಎಲ್ಲೋ ಒಂದು ಕಡೆ ಅಮಾಯಕ ಯುವಕನ ಕೊಲೆ ನಡೆದರೆ, ಅದಕ್ಕೆ ಪ್ರತಿಯಾಗಿ ಮುಯ್ಯಿಗೆ ಮುಯ್ಯಿ, ತಲೆಗೊಂದು ತಲೆ ಎನ್ನುವ ಎರಡೂ ಕಡೆಯ ಕೋಮುವಾದಿಗಳು ಸೃಷ್ಟಿಸಿರುವ ಫಾರ್ಮುಲಾಕ್ಕೆ ಮತ್ತೊಂದು ಕಡೆ ತನಗೆ ಸಂಬಂಧವೇ ಇಲ್ಲದ ಜನಗಳು ಬಂದು ಮತ್ತೊಬ್ಬ ಅಮಾಯಕ ಯುವಕನನ್ನು ಕೊಲೆ ಮಾಡುವುದೆಂದರೆ ಎಂತಹ ವಿಕೃತ ಮನೋಸ್ಥಿತಿಯಿದು.?ಮೊದಲು ಜೀವ ಕಳೆದುಕೊಂಡ ಯುವಕನಿಗೂ ನಂತರದ ಜೀವವನ್ನು ಬಲಿ ತೆಗೆದುಕೊಳ್ಳಲು ಹೋಗುವ ಯುವಕರಿಗೂ ಸಂಬಂಧವೇ ಇಲ್ಲ ಅದೇ ರೀತಿ ಮೊದಲ ಯುವಕನನ್ನು ಕೊಲೆ ನಡೆಸಲು ಹೋಗುವ ಯುವಕರಿಗೂ ನಂತರ ಜೀವ ಕಳೆದುಕೊಳ್ಳುವ ಯುವಕನಿಗೂ ಸಂಬಂಧವೇ ಇಲ್ಲ. ಜೀವ ಕಳೆದುಕೊಂಡ ಯುವಕನ ಮನೆಯಲ್ಲಿ ದುಖಃ ಮಡುಗಟ್ಟಿದರೆ, ಇತ್ತ ಅದೇ ಯುವಕನ ಶವವನ್ನು ಮೆರವಣಿಗೆ ನಡೆಸಿ ಅದರಲ್ಲೂ ರಾಜಕೀಯ ದುರ್ಲಾಭ ನಡೆಸುವ ನೀಚರು ರಾಜಕೀಯದಲ್ಲಿ ಮೆರೆಯುತ್ತಿರುವುದು ಕರಾವಳಿ ಜಿಲ್ಲೆಯ ದುರಂತ.
ಅತ್ಯಲ್ಪ ಕಾಲದಲ್ಲಿ ಅದೆಷ್ಟೋ ಜೀವಗಳನ್ನು ಕಳೆದುಕೊಂಡ ಕರಾವಳಿಯಲ್ಲಿ ದಿನಾ ಸಾಯುವವರಿಗೆ ಅಳುವವರು ಯಾರು ಎಂಬಂತಾಗಿದೆ. ಪುಸ್ತಕದಲ್ಲಿರುವ ಎಲ್ಲಾ ಘಟನೆಗಳು ಆ ಸಂದರ್ಭದಲ್ಲಿ ಮಾಧ್ಯಮದಲ್ಲಿ ಸುದ್ದಿಯಾಗಿದ್ದು ಬಿಟ್ಟರೆ ನಂತರದಲ್ಲಿ ಯಾರೂ ಅವರ ಬಗ್ಗೆ ಚಿಂತಿಸಿಲ್ಲ. ಆದರೆ ಇರ್ಷಾದ್ ರವರು ಈ ರೀತಿ ಜೀವ ಕಳೆದುಕೊಂಡ ಪ್ರತಿಯೊಂದು ಕುಟುಂಬ ಸದಸ್ಯರನ್ನು ಭೇಟಿಯಾಗಿ ಅವರ ಮನದಾಳದ ದುಖಃ ದುಮ್ಮಾನಗಳನ್ನು ನೋವುಗಳನ್ನು ದಾಖಲಿಸಿ ಕರಾವಳಿಯ ಲಕ್ಷಾಂತರ ಜನತೆಯ ಮುಂದಿಟ್ಟಿದ್ದಾರೆ.ಪ್ರತಿಯೊಂದು ಘಟನೆಗಳನ್ನು ಕಣ್ಷಿಗೆ ಕಟ್ಟುವಂತೆ ವಿವರಿಸಿದ್ದಾರೆ.ಓದಿ ಮುಗಿಸುವಷ್ಟರಲ್ಲಿ ಕಣ್ಣಂಚಿನಲ್ಲಿ ಕಣ್ಣೀರು ಹರಿಯಿತು.
ಅಂದ ಹಾಗೆ ಈ ಪುಸ್ತಕವನ್ನು ಪ್ರತಿಯೊಬ್ಬರೂ ಓದಲೇಬೇಕು. ಕರಾವಳಿಯ ಲಕ್ಷಾಂತರ ಜನತೆಯ ಹೃದಯ ತಟ್ಟುವಲ್ಲಿ ಈ ಪುಸ್ತಕ ನಾಂದಿ ಹಾಡಬೇಕು.ಕೆಳವರ್ಗದ ಶೂದ್ರ ಯುವಕರ ತಲೆಯಲ್ಲಿ ಕೊಮುದ್ವೇಷದ ಅಮಲು ಇಳಿದು, ಪ್ರೀತಿಯ ಗಾಳಿ ಬೀಸುವಂತಾಗಬೇಕು. ಅಮಾಯಕ ಯುವಕರ ಬಲಿ ನಿಲ್ಲುವಂತಾಗಬೇಕು ಎನ್ನುತ್ತಾರೆ ಸುನಿಲ್ ಕುಮಾರ್ ಬಜಾಲ್.