ಪತಿಯಿಂದ ಹಲ್ಲೆ, ಜೀವ ಬೆದರಿಕೆ: ಪತ್ನಿಯಿಂದ ದೂರು
ಕುಂದಾಪುರ: ಮೊದಲ ಪತ್ನಿಯ ಮೇಲಿನ ಮೋಹದಿಂದ ವ್ಯಕ್ತಿರ್ವ ತನ್ನ ಎರಡನೇ ಪತ್ನಿಯನ್ನು ಥಲಿಸಿದ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ.
ಈ ಬಗ್ಗೆ ವಾರಂಬಳ್ಳಿ ಗ್ರಾಮದ ರಿಹಾನ (40) ಎಂಬವರು ಬ್ರಹ್ಮಾವರ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರಿನಲ್ಲಿ ವಿವರಿಸಲಾದಂತೆ ಪ್ರಕರಣದ ವಿವರ ಹೀಗಿದೆ:
ರಿಹಾನ ಅವರು 2023 ರ ಜೂನ್ 11 ರಂದು ಮೊಹಮ್ಮದ್ ಇಕ್ಬಾಲ್ ಎಂಬವರನ್ನು ವಿವಾಹವಾಗಿದ್ದರು. ವಾರಂಬಳ್ಳಿ ಗ್ರಾಮದ ಸ್ವರ್ಣ ರೆಸಿಡೆನ್ಸಿ, ರೂಂ ನಂ. 101ರಲ್ಲಿ ಪತಿ ಹಾಗೂ ಮಗಳೊಂದಿಗೆ ವಾಸವಾಗಿದ್ದರು.
ಮದುವೆಯಾಗಿ ಸುಮಾರು 2½ ವರ್ಷಗಳ ಬಳಿಕ ಪತಿ ಮೊಹಮದ್ ಇಕ್ಬಾಲ್ ಸರಿಯಾಗಿ ನೋಡಿಕೊಳ್ಳದೆ, ಅವಾಚ್ಯವಾಗಿ ಬೈದು ದೈಹಿಕ ಹಿಂಸೆ ನೀಡಲು ಆರಂಭಿಸಿದ್ದಾರೆನ್ನಲಾಗಿದೆ.
ದಿನಾಂಕ 08/02/2026 ರಂದು ಪತಿ ಇಕ್ಬಾಲ್ ಮನೆಗೆ ಬಾರದೇ ಇದ್ದ ಹಿನ್ನೆಲೆಯಲ್ಲಿ ರಿಹಾನ ಪತಿ ಕೆಲಸ ಮಾಡುತ್ತಿದ್ದ ವಾರಂಬಳ್ಳಿ ಗ್ರಾಮದ ಧರ್ಮಾವರಂ ಸಮೀಪದ ಗ್ಯಾರೇಜ್ಗೆ ತೆರಳಿ ವಿಚಾರಿಸಿದಾಗ, “ನಾನು ಮನೆಗೆ ಬರುವುದಿಲ್ಲ” ಎಂದು ಹೇಳಿ ಗಲಾಟೆ ನಡೆಸಿದನೆಂದು ತಿಳಿದು ಬಂದಿದೆ. ಅದೇ ದಿನ ಸಂಜೆ ಮನೆಗೆ ಬಂದ ಇಕ್ಬಾಲ್, “ಗ್ಯಾರೇಜ್ಗೆ ಯಾಕೆ ಬಂದೆ?” ಎಂದು ಪ್ರಶ್ನಿಸಿ ಪತ್ನಿಗೆ ಕೈಯಿಂದ ಹೊಡೆದಿರುವುದಾಗಿ ದೂರಿನಲ್ಲಿ ಹೇಳಲಾಗಿದೆ.
ಮತ್ತೊಮ್ಮೆ ನಾಲ್ಕು ದಿನ ಮನೆಗೆ ಬಾರದಿದ್ದ ಹಿನ್ನೆಲೆಯಲ್ಲಿ, 19/02/2026 ರಂದು ಬೆಳಿಗ್ಗೆ ಸುಮಾರು 9:30 ಗಂಟೆಗೆ ರಿಹಾನ ಗ್ಯಾರೇಜ್ಗೆ ತೆರಳಿ ಮನೆಗೆ ಬರುವಂತೆ ಮನವಿ ಮಾಡಿದಾಗ, ಮೊಹಮದ್ ಇಕ್ಬಾಲ್, “ನೀನು ನನಗೆ ಬೇಡ, ನನಗೆ ಮೊದಲ ಹೆಂಡತಿ ಬೇಕು, ನೀನು ಬೇರೆ ಮದುವೆಯಾಗು” ಎಂದು ಹೇಳಿದನೆಂದು ಆರೋಪಿಸಲಾಗಿದೆ. ಇದಕ್ಕೆ ಪತ್ನಿ ಸಂಸಾರ ನಿಮ್ಮೊಂದಿಗೇ ಮಾಡುವುದಾಗಿ ಹೇಳಿದಾಗ, ಕಲ್ಲಿನಿಂದ ಹಣೆಗೆ ಹೊಡೆದು, ಬಳಿಕ ಅಲ್ಲಿದ್ದ ರಾಡ್ನಿಂದ ಮೈಕೈ ಹಾಗೂ ತಲೆಗೆ ಹಲ್ಲೆ ನಡೆಸಿ, ಹೊಟ್ಟೆಗೆ ಕಾಲಿನಿಂದ ತುಳಿದು ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಗಾಯಗೊಂಡ ರಿಹಾನ ಅವರು ಬ್ರಹ್ಮಾವರದ ಮಹೇಶ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.
ಆಕೆ ನೀಡಿದ ದೂರಿನನ್ವಯ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.