ಶಕ್ತಿ ವಿದ್ಯಾಸಂಸ್ಥೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳಿಗೆ ‘ಆಶೀರ್ವಾದ ಸಭಾ, ಮಾತಾ ಪಿತೃ ಪೂಜನ’ ಕಾರ್ಯಕ್ರಮ
Saturday, February 7, 2026
ಮಂಗಳೂರು: ಶಕ್ತಿನಗರದಲ್ಲಿರುವ ಶಕ್ತಿ ರೆಸಿಡೆನ್ಯಿಯಲ್ ಶಾಲೆಯಲ್ಲಿರುವ ರೇಷ್ಮ ಮೆಮೋರಿಯಲ್ ಸಭಾಂಗಣದಲ್ಲಿ ಆಶೀರ್ವಾದ ಸಭಾ, ಮಾತಾ ಪಿತೃ ಪೂಜನಾ ಕಾರ್ಯಕ್ರಮವು ದೀಪ ಬೆಳಗಿಸುವುದರ ಮೂಲಕ ಶನಿವಾರ ನಡೆಯಿತು.
ಫೆ.17 ರಿಂದ ಆರಂಭವಾಗುತ್ತಿರುವ ಸಿ.ಬಿ.ಎಸ್.ಇ. ಬೋರ್ಡ್ ಪರೀಕ್ಷೆಯನ್ನು ಬರೆಯುತ್ತಿರುವ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 127 ವಿದ್ಯಾರ್ಥಿಗಳಿಗೆ ಶುಭ ಹಾರೈಸಲು ವಿದ್ಯಾರ್ಥಿಗಳ ಪೋಷಕರು ಈ ಆಶೀರ್ವಾದ ಸಭಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ತಮ್ಮ ತಮ್ಮ ಮಕ್ಕಳಿಗೆ ಆಶೀರ್ವಾದ ಮಾಡಿದರು.
ಈ ಕಾರ್ಯಕ್ರಮದಲ್ಲಿ ಭಾರತೀಯ ಸಂಸ್ಕಾರದಂತೆ ವಿದ್ಯಾರ್ಥಿಗಳೆಲ್ಲರೂ ತಮ್ಮ ಪೋಷಕರ ಪಾದಪೂಜೆ ಮಾಡಿ ಅವರ ಅಶೀರ್ವಾದವನ್ನು ಪಡೆದರು. ಗಣ್ಯರ ಹಾಗೂ ಅವರ ಶಿಕ್ಷಕರ ಆಶೀರ್ವಾದವನ್ನೂ ಪಡೆದರು.
ಅಧ್ಯಾಪಕಿ ಸಾರಿಕ ಅವರು ಈ ಮಾತಾ ಪಿತೃ ಪೂಜನಾ ಮಹತ್ವವನ್ನು ಸಂಸ್ಕೃತ ಶ್ಲೋಕಗಳ ಮುಖಾಂತರ ಅರ್ಥಪೂರ್ಣವಾಗಿ ತಿಳಿಸಿದರು.
ನಂತರ ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಕ್ತಿ ರೆಸಿಡೆನ್ಯಿಯಲ್ ಶಾಲಾ ಪ್ರಾಂಶುಪಾಲೆ ಬಬಿತಾ ಸೂರಜ್ ಅವರು ‘ಮಕ್ಕಳೆಲ್ಲರೂ ತಮ್ಮ ಅಭ್ಯಾಸದಲ್ಲಿ ನೂರಕ್ಕೆ ನೂರು ಶ್ರಮವನ್ನು ಕೊಟ್ಟು ಓದುತ್ತಿದ್ದಾರೆ. ಈ ಹಂತದಲ್ಲಿ ಮಕ್ಕಳಿಗೆ ಯಾವುದೇ ರೀತಿಯ ಒತ್ತಡವನ್ನು ಪೋಷಕರು ಹೇರಬಾರದು. ಪ್ರೋತ್ಸಾಹದಾಯಕ ನುಡಿಗಳಿಂದ ಅವರಿಗೆ ಪರೀಕ್ಷೆ ಬರೆಯಲು ಸ್ಪೂರ್ತಿಯನ್ನು ನೀಡಬೇಕು. ಎಲ್ಲ ಶಿಕ್ಷಕರೂ ಕೂಡಾ ಬೋರ್ಡ್ ಪರೀಕ್ಷೆಗಾಗಿ ಮಕ್ಕಳನ್ನು ಚೆನ್ನಾಗಿ ತಯಾರು ಮಾಡುತ್ತಿದ್ದಾರೆ. ನಿಮ್ಮ ಆಶೀರ್ವಾದ ಅವರಿಗೆ ಬಹಳ ಮುಖ್ಯ ಎಂದು ಕಿವಿ ಮಾತನ್ನು ತಿಳಿಸಿದರು. ನಂತರ ಸಿ.ಬಿಎಸ್.ಇ ಪರೀಕ್ಷೆಗೆ ಬೇಕಾದ ಉಪಯುಕ್ತ ಸಲಹೆ ಸೂಚನೆಗಳನ್ನು ನೀಡಿದರು.
ಶಕ್ತಿ ವಿದ್ಯಾಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ. ಮಾತನಾಡಿ, ಇದೊಂದು ಉತ್ತಮವಾದ ಕಾರ್ಯಕ್ರಮ. ಜೀವನದಲ್ಲಿ ಮಕ್ಕಳಿಗೆ ತಂದೆ ತಾಯಿಗಳ ಮಹತ್ವ ಬಹಳಷ್ಟಿದೆ. ನಮ್ಮ ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ಸಂಸ್ಕಾರಯುತ ಶಿಕ್ಷಣವನ್ನು ಮಕ್ಕಳಿಗೆ ನೀಡಬೇಕು, ಮಕ್ಕಳ ಸರ್ವಾಂಗೀಣ ಪ್ರಗತಿ ಆಗಬೇಕು, ಭಾರತೀಯ ಸಂಸ್ಕಾರಯುತ ಶಿಕ್ಷಣವನ್ನು ಕೊಡಬೇಕು ಎಂಬುದು ಡಾ. ಕೆ.ಸಿ. ನಾಕ್ರವರ ಉದ್ದೇಶ. ಇಲ್ಲಿಗೆ ರಾಷ್ಟ್ರದ ವಿವಿಧ ಜಿಲ್ಲೆಗಳಿಂದ ಮಕ್ಕಳು ವ್ಯಾಸಂಗ ಮಾಡಲು ಬಂದಾಗಿನಿಂದ ಇಲ್ಲಿಯವರೆಗೂ ಸಾಕಷ್ಟು ಧನಾತ್ಮಕ ಬದಲಾವಣೆಯನ್ನು ನಾವು ಗಮನಿಸಿದ್ದೇವೆ. ಸದಾ ಮಕ್ಕಳ ಸರ್ವಾಂಗೀಣ ಪ್ರಗತಿಯನ್ನು ಬಯಸುವ ಡಾ. ಕೆ.ಸಿ. ನಾಕ್ ಅವರು ಪ್ರತಿನಿತ್ಯ ಶಿಕ್ಷಕ ಸಿಬ್ಬಂದಿಯ ಜೊತೆ ಚರ್ಚಿಸಿ ಮಕ್ಕಳ ಪ್ರಗತಿಗೆ ಪೂರಕವಾದ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಶಿಕ್ಷಣದೊಂದಿಗೆ ಸಂಸ್ಕಾರವನ್ನು ಮಕ್ಕಳು ಕಲಿತಿದ್ದಾರೆ. ಇದರ ಪ್ರತಿಫಲವನ್ನು ಭವಿಷ್ಯದಲ್ಲಿ ಅವರು ಉತ್ತಮ ಪ್ರಜೆಗಳಿಗಾಗಿ ಬದಲಾಗುವುದನ್ನು ಕಾಣುತ್ತೇವೆ. ತಂದೆ ತಾಯಿ ಕುಟುಂಬದ ಮಹತ್ವವನ್ನು ಅರ್ಥಮಾಡಿಸಿ ಭವಿಷ್ಯದಲ್ಲಿ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುವ ಸಂಸ್ಕಾರವನ್ನು ಮಕ್ಕಳು ಕಲಿಯಲಿ ಎಂಬ ಉದ್ದೇಶದಿಂದ ಈ ಆಶೀರ್ವಾದ ಸಭೆಯನ್ನು ಯೋಜನೆ ಮಾಡಲಾಗಿದೆ. ಬೋರ್ಡ್ ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಗಳಿಸಿ ಶಾಲೆಗೂ ಹಾಗೂ ಪೋಷಕರಿಗೂ ಕೀರ್ತಿ ತರುವಂತಾಗಲಿ ಎಂದು ಮಕ್ಕಳಿಗೆ ಹಾರೈಸಿದರು.
ನಂತರ ಅಧ್ಯಕ್ಷತೆ ವಹಿಸಿದ್ದ ಡಾ. ಕೆ.ಸಿ. ನಾಕ್ ಮಾತನಾಡಿ, ಮಕ್ಕಳು ಇಲ್ಲಿ ಶಿಕ್ಷಣವನ್ನು ಪಡೆದು ಭಾರತದ ಉತ್ತಮ ಪ್ರಜೆಗಳಾಗಲಿ. ಪ್ರೀತಿ ವಿಶ್ವಾಸದಿಂದ ಮಕ್ಕಳಿಗೆ ಚೆನ್ನಾಗಿ ಅಭ್ಯಸಿಸಲು ಪ್ರೇರೇಪಿಸಲಿ ಎಂದು ಹೇಳಿ ಮಕ್ಕಳಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪೋಷಕರು ಮಾತನಾಡಿ ಇದೊಂದು ಭಾವನಾತ್ಮಕವಾದ ಕಾರ್ಯಕ್ರಮ ಮಕ್ಕಳಲ್ಲಿ ನಮ್ಮ ಭಾರತೀಯ ಸಂಸ್ಕಾರವನ್ನು ರೂಢಿಸುವ ಕಾರ್ಯವನ್ನು ಶಕ್ತಿ ವಿದ್ಯಾ ಸಂಸ್ಥೆ ತುಂಬಾ ಚೆನ್ನಾಗಿ ಮಾಡಿಕೊಂಡು ಬರುತ್ತಿದೆ. ಇಲ್ಲಿರುವ ಆಡಳಿತ ಮಂಡಳಿ ಮತ್ತು ಶಿಕ್ಷಕ ವರ್ಗ ಮಕ್ಕಳ ಏಳಿಗೆಗಾಗಿ ಸದಾ ಶ್ರಮಿಸುತ್ತಿದೆ. ನಿಜಕ್ಕೂ ಇದೊಂದು ಮಾದರಿ ಶಾಲೆ ಎಂದು ತಮ್ಮ ಅನಿಸಿಕೆ ಅಭಿಪ್ರಾಯ ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಭಾಸ್ ಎಂಬ ವಿದ್ಯಾರ್ಥಿಯು ಶಿಕ್ಷಕರಿಗೂ, ಪೋಷಕರಿಗೂ ಹಾಗೂ ಆಡಳಿತಮಂಡಳಿಗೂ ವಂದನೆಯನ್ನು ಸಲ್ಲಿಸಿದನು.
ಈ ಅರ್ಥಪೂರ್ಣವಾದ ಕಾರ್ಯಕ್ರಮದಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳೆಲ್ಲರೂ ಸೇರಿ ಶಕ್ತಿ ವಿದ್ಯಾಸಂಸ್ಥೆಯಲ್ಲಿ ವಿದ್ಯಾಭ್ಯಾಸ ಪಡೆದುಕೊಂಡ ನೆನಪಿಗಾಗಿ ದೇವರ ಮಂಟಪವನ್ನು ಉಡುಗೊರೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ಶಕ್ತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ ಮೂರ್ತಿ ಉಪಸ್ಥಿತರಿದ್ದರು. ಶಿಕ್ಷಕರಾದ ಶರಣಪ್ಪ ನಿರೂಪಿಸಿ, ವಂದಿಸಿದರು.








