‘ವ್ಯಾಲೆಂಟೈನ್ ಡೇ’ ಹೆಸರಿನಲ್ಲಿ ನಡೆಯುವ ಅನಾಚಾರಗಳನ್ನು ತಡೆಯಲು ತಕ್ಷಣ ಕ್ರಮಕೈಗೊಳ್ಳಿ: ಹಿಂದೂ ಜನಜಾಗೃತಿ ಸಮಿತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ
ಶಾಲಾ-ಕಾಲೇಜುಗಳಲ್ಲಿ ಮಾತ್ರವಲ್ಲದೆ, ಇತರ ಕಡೆಗಳಲ್ಲೂ ಇಂತಹ ಘಟನೆಗಳು ನಡೆಯದಂತೆ ತಡೆಗಟ್ಟಲು ವಿನಂತಿಸಿಕೊಳ್ಳಲಾಯಿತು.
ವ್ಯಾಲೆಂಟೈನ್ ಡೇ ವೇಳೆ ‘ಪಾರ್ಟಿಗಳಲ್ಲಿ’ ಯುವಕ-ಯುವತಿಯರು ಮದ್ಯಪಾನ, ಧೂಮಪಾನ, ಮಾದಕ ವಸ್ತುಗಳ ಸೇವನೆ ಮುಂತಾದ ಅನಾಚಾರಗಳಲ್ಲಿ ತೊಡಗುವುದು ಬೆಳಕಿಗೆ ಬಂದಿದೆ. ಇದಲ್ಲದೆ, ಈ ದಿನ ಗರ್ಭನಿರೋಧಕ ಸಾಮಗ್ರಿಗಳ ಹೆಚ್ಚಿನ ಮಾರಾಟವು ಅನೈತಿಕ ಸಂಬಂಧಗಳ ಹೆಚ್ಚಳವನ್ನು ತೋರಿಸುತ್ತದೆ. ಯುವತಿಯರನ್ನು ಸೆಳೆಯಲು ಅತಿ ವೇಗವಾಗಿ ವಾಹನ ಚಲಾಯಿಸುವುದರಿಂದ ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿದೆ. ಅಲ್ಲದೆ, ಸುಳ್ಳು ಹೆಸರು ಹೇಳಿ ಯುವತಿಯರಿಗೆ ಮೋಸ ಮಾಡುವವರು ‘ಲವ್ ಜಿಹಾದ್’ ಮೂಲಕ ಅವರ ಬದುಕನ್ನು ಹಾಳು ಮಾಡುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯು ಈ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ ಫೆಬ್ರವರಿ 14ರಂದು ನಗರದಲ್ಲಿ ವಿಶೇಷ ಪೊಲೀಸ್ ಪಡೆ ನಿಯೋಜಿಸಬೇಕು. ಕಾಲೇಜು ಆವರಣಗಳಲ್ಲಿ ಕಾನೂನು ವಿರೋಧಿ ಕೃತ್ಯಗಳಲ್ಲಿ ತೊಡಗುವವರ ಮೇಲೆ ನಿಗಾ ಇಡಬೇಕು, ಅತಿವೇಗದಲ್ಲಿ ವಾಹನ ಚಲಾಯಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಷ್ಟೇ ಅಲ್ಲದೆ, ಆಪತ್ತಿನ ಸಂದರ್ಭಗಳಲ್ಲಿ ಯುವತಿಯರಿಗೆ ಸಹಾಯ ಮಾಡಲು ‘ವಿಶೇಷ ಹೆಲ್ಪ್ಲೈನ್ ನಂಬರ್’ ಅನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದು ಮನವಿಯ ಮೂಲಕ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ವಕೀಲ ಈಶ್ವರ ಕೊಟ್ಟಾರಿ ಬಜಾಲ್, ಹಿಂದೂ ಜನಜಾಗೃತಿ ಸಮಿತಿಯ ಉಪೇಂದ್ರ ಆಚಾರ್ಯ, ರೋಹಿತ್ ಕೋಟ್ಯಾನ್, ಹಿಂದೂ ಮಹಾಸಭಾದ ಲೋಹಿತ್ ಸುವರ್ಣ, ಲೋಕೇಶ್ ಕುತ್ತಾರ್, ಧರ್ಮಾಭಿಮಾನಿಗಳಾದ ದಿನೇಶ್ ಜಪ್ಪಿನಮೊಗರು, ದಿನಕರ್ ಬಜಾಲ್, ಭಾಸ್ಕರ ಆಚಾರ್ಯ, ಜಯಪ್ರಕಾಶ್ ಬಜಾಲ್, ಮಧುಸೂಧನ್ ಇನೋಳಿ ಮತ್ತಿತರರು ಉಪಸ್ಥಿತರಿದ್ದರು.