ಕೆಎಸ್ಆರ್ಟಿಸಿ ಬಸ್ಸುಗಳಿಗೆ ನಗರ ಪ್ರವೇಶಕ್ಕೆ ಅನುಮತಿ: ಸಿಪಿಐ ಸ್ವಾಗತ
ಮಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಿಗೆ 1991 ಮತ್ತು 1993ರ ಅಧಿಸೂಚನೆಯಿಂದ ವಿನಾಯತಿ ನೀಡಿ ಜಿಲ್ಲಾಧಿಕಾರಿಗಳು ಹೊರಡಿಸಿದ ಆದೇಶವನ್ನು ಭಾರತ ಕಮ್ಯುನಿಸ್ಟ್ ಪಕ್ಷದ ಮಂಗಳೂರು ತಾಲೂಕು ಸಮಿತಿ ಸ್ವಾಗತಿಸುತ್ತದೆ ಹಾಗೂ ಜಿಲ್ಲಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತದೆ. ಈ ಆದೇಶದಿಂದ ಎಲ್ಲಾ ಕೆಎಸ್ಆರ್ಟಿಸಿ ಬಸ್ಸುಗಳು ನಗರದೊಳಗೆ ಪ್ರವೇಶಿಸಲು ಅನುಕೂಲವಾಗಿದೆ.
ಆಡಳಿತ, ಸರಕಾರಿ ಬಸ್ಸುಗಳಿಗೆ ಆಧ್ಯತೆ ನೀಡಬೇಕೆಂದು ನಾವು ಬಹಳ ಹಿಂದಿನಿಂದಲೂ ಒತ್ತಾಯಿಸುತ್ತಾ ಬಂದಿದ್ದೇವೆ. ನಾಗರಿಕ ಸಂಚಾರ ವ್ಯವಸ್ಥೆಯನ್ನು ರಾಷ್ಟ್ರೀಕರಣಗೊಳಿಸಬೇಕೆಂದು ನಾವು ಅನೇಕ ಹೋರಾಟಗಳನ್ನು ನಡೆಸಿದ್ದೇವೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಖಾಸಗಿ ಬಸ್ಸಿನವರದೇ ಕಾರುಬಾರು. ಇದರಿಂದ ಸರಕಾರ ನೀಡುತಿದ್ದ ಅನೇಕ ಸವಲತ್ತುಗಳು ಪ್ರಯಾಣಕರಿಗೆ ಸಿಗದೆ ಇಲ್ಲಿನ ವಿದ್ಯಾರ್ಥಿಗಳು, ಮಹಿಳೆಯರು, ರೋಗಿಗಳು ಹಾಗೂ ವಯೋವೃದ್ಧರು ಬಹಳಷ್ಟು ಕಷ್ಟಪಡುತಿದ್ದರು. ಜಿಲ್ಲಾಧಿಕಾರಿಗಳ ಈ ಆದೇಶದಿಂದ ಇವರೆಲ್ಲರಿಗೆ ತಮ್ಮ ಸವಲತ್ತು ಸಿಕ್ಕಿದಂತಾಗುತ್ತದೆ ಎಂದು ಸಿಪಿಐ ಕಾರ್ಯದರ್ಶಿ ಕರುಣಾಕರ ಮಾರಿಪಳ್ಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.