ಆಧುನಿಕ ಶಿಕ್ಷಣದೊಂದಿಗೆ ದೇಶಕ್ಕೆ ಕೊಡುಗೆಯಾಗಬಲ್ಲ ಆವಿಷ್ಕರಗಳನ್ನು ಮಾಡಿ: ಕಾಳಹಸ್ತೇಂದ್ರ ಸ್ವಾಮೀಜಿ
ಅವರು ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದ ವರ್ಷಾವಧಿ ಮಹೋತ್ಸವದಂಗವಾಗಿ ಬುಧವಾರ ನಡೆದ ಧಾರ್ಮಿಕ ಸಭೆಯಲ್ಲಿ ಸಾಧಕರನ್ನು ಸಮ್ಮಾನಿಸಿ ಆಶೀರ್ವಚನ ನೀಡಿ ಮಾತನಾಡಿ ವಿಶೇಷವಾಗಿ ಯುವಪ್ರತಿಭೆಗಳು ರಕ್ಷಣಾ ರಂಗದಲ್ಲಿ ಸ್ವಾವಲಂಬಿಗಳಾಗುವಂಥ ಸಂಶೋಧನೆಗಳನ್ನು ನಡೆಸುವ ಮೂಲಕ ರಕ್ಷಣಾ ರಂಗದ ಕೆಲವೊಂದು ವಿಷಯಗಳಲ್ಲಿ ವಿದೇಶಗಳ ಅವಲಂಬನೆಯಿಂದ ನಾವು ಮುಕ್ತರಾಗಬಹುದು ಎಂದ ಅವರು ದೇವಸ್ಥಾನದ ಪ್ರಗತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಮ್ಮಾನ: ಡ್ರೋನ್ ತಯಾರಿಕೆಯಲ್ಲಿ ವಿಶ್ವಮಟ್ಟದಲ್ಲಿ ಎರಡು ದಾಖಲೆಗಳನ್ನು ಮಾಡಿರುವ, ಎಂಆರ್ ಪಿಎಲ್ ನ ಡೆಲ್ಲಿ ಪಬ್ಲಿಕ್ ಸ್ಕೂಲ್ ನ 6ನೇ ತರಗತಿ ವಿದ್ಯಾರ್ಥಿ ಈಶಾನ ವಿಕ್ರಮ ಪಾಲ್ತಾಡಿ ಅವರನ್ನು ಸಮ್ಮಾನಿಸಲಾಯಿತು. ಪಡುಮಾರ್ನಾಡು ಗ್ರಾಮಕೂಡುವಳಿಕೆ ಮೊಕ್ತೇಸರರಾಗಿ 29 ವರ್ಷಗಳಿಂದ ಸೇವೆ ಸಲ್ಲಿಸುತ್ತ ಬರುತ್ತಿರುವ ಪುರೋಹಿತ ಜಗನ್ನಾಥ ಆಚಾರ್ಯ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತೆ ಪ್ರಾಂತ್ಯ ಸ.ಪ್ರೌಢಶಾಲಾ ಸಹಶಿಕ್ಷಕಿ ರತ್ನಾವತಿ ಆಚಾರ್ ಕೆ. ಹಾಗೂ ಶ್ರವಣ ಮತ್ತು ವಾಕ್ ದೋಷವಿದ್ದರೂ ಚಿತ್ರ ಮತ್ತು ಶಿಲ್ಪಕಲೆಯಲ್ಲಿ ಬೆಳಗುತ್ತಿರುವ ಕಾಪು ಸುಭಾಷ್ ನಗರದ ಯುವ ಕಲಾವಿದ ಅಖಿಲೇಶ್ ಆಚಾರ್ಯ ಇವರಿಗೆ ಗೌರವಾರ್ಪಣೆ ಮಾಡಲಾಯಿತು.
ಸಮ್ಮಾನಿತರ ಪರವಾಗಿ ರತ್ನಾವತಿ ಆಚಾರ್ ಮಾತನಾಡಿ, ಸಂಸ್ಕಾರಯುತ ಶಿಕ್ಷಣ, ಮಕ್ಕಳಲ್ಲಿರುವ ಕೌಶಲ, ಸೃಜನಶೀಲತೆಗೆ ಪ್ರೋತ್ಸಾಹ ನೀಡಬೇಕಾಗಿದೆ. ಶಿಕ್ಷಣ ಮತ್ತು ಉದ್ಯೋಗಕ್ಕೆ ಮಾರ್ಗದರ್ಶನ, ಆರ್ಥಿಕ ಸಹಾಯ ನೀಡಲು ಸಮಾಜದ ಸಂಘಟನೆಗಳು ಮುಂದೆ ಬರಬೇಕಾಗಿದೆ ಎಂದರು.
ಮುಖ್ಯಅತಿಥಿ, ಕಟಪಾಡಿ ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಮುರಹರಿ ಆಚಾರ್ಯ ಅವರು ಮಾತನಾಡಿ, ಆದಾಯ ವೃದ್ಧಿ ಎಷ್ಟು ಅಗತ್ಯವೋ ಅಷ್ಟೇ ಪರಂಪರಾಗತ ಸಂಸ್ಕೃತಿ ಉಳಿಸುವುದೂ ಮುಖ್ಯ ಎಂದರು.
ದೇವಸ್ಥಾನದ ಆಡಳಿತ ಮೊಕ್ತೇಸರ ಎಂ.ಕೆ. ಬಾಲಕೃಷ್ಣ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಎರಡನೇ ಮೊಕ್ತೇಸರ ಶಿವರಾಮ ಆಚಾರ್ಯ ಉಳಿಯ ಸ್ವಾಗತಿಸಿ ಪ್ರಸ್ತಾವನೆಗೈದರು.
ದಿ. ಸುನಂದಾ ಭಾಸ್ಕರ ಆಚಾರ್ಯ ಪಾಲ್ತಾಡಿ ಸಂಸ್ಮರಣಾರ್ಥ, ಎಸ್ಸೆಸ್ಸೆಲ್ಸಿಯಲ್ಲಿ ಮೂಡುಬಿದಿರೆ ವಲಯದಲ್ಲಿ ಸರಕಾರಿ ಶಾಲೆಗಳಲ್ಲಿ ಪ್ರಥಮ ಸ್ಥಾನಿ ದರೆಗುಡ್ಡೆ ಸ. ಪ್ರೌಢಶಾಲೆಯ ಪದ್ಮಶ್ರೀ ಶ್ರೀಪಾದ ಹೆಗ್ಡೆ, ಅತಿಹೆಚ್ಚು ಅಂಕ ಗಳಿಸಿದ ವಿಶ್ವಕರ್ಮ ವಿದ್ಯಾರ್ಥಿನಿ, ಮೂಡುಮಾರ್ನಾಡು ಸ. ಪ್ರೌಢಶಾಲೆಯ ಲಿಖಿತಾ ವಸಂತ ಆಚಾರ್ಯ ಇವರಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಪಿಯುಸಿಯಲ್ಲಿ ಗರಿಷ್ಟ ಅಂಕಗಳಿಸಿದ ಶರಣ್ಯ ರವೀಂದ್ರ ಆಚಾರ್ಯ ಮುರಗೋಳಿ ಇವರಿಗೆ ಬಿ.ಲಕ್ಷ್ಮಣ ಆಚಾರ್ಯ-ಸರಸ್ವತಿ ಸಂಸ್ಮರಣ ವಿದ್ಯಾರ್ಥಿ ವೇತನ ನೀಡಲಾಯಿತು.
ಶಾಂತಲಾ ಎಸ್. ಆಚಾರ್ಯ (ಆಮಂತ್ರಣ), ಚಿತ್ರಾಕ್ಷ ಆಚಾರ್ಯ (ಚಪ್ಪರ) ಇವರನ್ನು ವಿಶೇಷವಾಗಿ ಗೌರವಿಸಲಾಯಿತು.
ಶ್ರೀ ಕಾಳಿಕಾಂಬಾ ಸೇವಾ ಸಮಿತಿ ಅಧ್ಯಕ್ಷ ಶ್ರೀನಾಥ ಆಚಾರ್ಯ, ಮಹಿಳಾ ಸಮಿತಿ ಅಧ್ಯಕ್ಷೆ ಶಾಂತಲಾ ಎಸ್. ಆಚಾರ್ಯ, ಆಡಳಿತ ಮಂಡಳಿ ಸದಸ್ಯರಾದ ಶಿವಪ್ರಸಾದ್, ಜಯಶ್ರೀ ಜಗನ್ನಾಥ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮೂರನೇ ಮೊಕ್ತೇಸರ ಯೋಗೀಶ ಆಚಾರ್ಯ ವಂದಿಸಿದರು. ಗೀತಾ ಯೋಗೀಶ್, ಶಶಿಧರ ಆಚಾರ್ಯ, ಯಮುನಾ ಯೋಗೀಶ್ ಸಮ್ಮಾನ ಪತ್ರ ವಾಚಿಸಿದರು.ಬೇಲಾಡಿ ಜಗದೀಶ ಆಚಾರ್ಯ ಮತ್ತು ಧನಂಜಯ ಮೂಡುಬಿದಿರೆ ನಿರೂಪಿಸಿದರು.