ಆಳ್ವಾಸ್ ಎನ್‌ಸಿಸಿ ಸಾಧಕರಿಗೆ ಸನ್ಮಾನ: ಮೂರು ಬಾರಿ ‘ವಿರಾಸತ್’ ವೀಕ್ಷಿಸಿದ್ದ ಕ್ಯಾ. ಪ್ರಾಂಜಲ್ ಕಾರ್ಯಕ್ರಮದಲ್ಲಿ ಸ್ಮರಣೆ

ಆಳ್ವಾಸ್ ಎನ್‌ಸಿಸಿ ಸಾಧಕರಿಗೆ ಸನ್ಮಾನ: ಮೂರು ಬಾರಿ ‘ವಿರಾಸತ್’ ವೀಕ್ಷಿಸಿದ್ದ ಕ್ಯಾ. ಪ್ರಾಂಜಲ್ ಕಾರ್ಯಕ್ರಮದಲ್ಲಿ ಸ್ಮರಣೆ


ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಎನ್‌ಸಿಸಿ ಸಾಧಕರನ್ನು ಗೌರವಿಸುವ ಸಮಾರಂಭವು ಸೋಮವಾರ ಇಲ್ಲಿನ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಜರುಗಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸೇನಾ, ನೌಕಾ ಹಾಗೂ ವಾಯುಪಡೆ ಎನ್‌ಸಿಸಿ ಘಟಕಗಳು ಜಂಟಿಯಾಗಿ ಕಾರ್ಯಕ್ರಮ ಆಯೋಜಿಸಿದ್ದವು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬೆಂಗಳೂರು ವಲಯದ ಸೇನಾ ನೇಮಕಾತಿ ಎಡಿಜಿ ಮೇಜರ್ ಜನರಲ್ ಬ್ರೂಸ್ ಫರ್ನಾಂಡಿಸ್, “ಎನ್‌ಸಿಸಿ ಯುವಜನತೆಯನ್ನು ಶಿಸ್ತು, ಸೇವಾ ಮನೋಭಾವ ಹಾಗೂ ರಾಷ್ಟ್ರಪ್ರೇಮದೊಂದಿಗೆ ರೂಪಿಸುವ ಮಹತ್ವದ ಸಂಸ್ಥೆಯಾಗಿದೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ತಂಡಭಾವನೆ ಮತ್ತು ಜವಾಬ್ದಾರಿಯುತ ನಾಗರಿಕತ್ವ ಬೆಳೆಸುವಲ್ಲಿ ಎನ್‌ಸಿಸಿ ಪ್ರಮುಖ ಪಾತ್ರ ವಹಿಸುತ್ತದೆ,” ಎಂದರು.


ತಮ್ಮದೇ ಎನ್‌ಸಿಸಿ ಅನುಭವಗಳನ್ನು ಮೆಲುಕು ಹಾಕಿದ ಅವರು, “ತರಬೇತಿ ಜೀವನದ ಸವಾಲುಗಳನ್ನು ಎದುರಿಸಲು ಧೈರ್ಯ ಹಾಗೂ ಹೋರಾಟದ ಮನೋಭಾವ ಅಗತ್ಯ. ವ್ಯಕ್ತಿಯ ಯಶಸ್ಸು, ಸಮಾಜದ ಶಾಂತಿ ಹಾಗೂ ರಾಷ್ಟ್ರದ ಅಭಿವೃದ್ಧಿಗೆ ಶಿಸ್ತು ಮೂಲಾಧಾರ. ಆದ್ದರಿಂದ ಶಿಸ್ತು ಪ್ರತಿಯೊಬ್ಬ ನಾಗರಿಕನ ಜೀವನಶೈಲಿಯಾಗಬೇಕು,” ಎಂದು ಕರೆ ನೀಡಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಒಂದೇ ಕ್ಯಾಂಪಸ್‌ನಲ್ಲಿ ಗುಣಮಟ್ಟದ ಶಿಕ್ಷಣ ಒದಗಿಸುತ್ತಿರುವುದನ್ನು ಶ್ಲಾಘಿಸಿದ ಅವರು, ಅಗ್ನಿವೀರ್ ನೇಮಕಾತಿ ರ‍್ಯಾಲಿ ಯಶಸ್ವಿಯಾಗಿ ನಡೆಯಲು ಆಳ್ವಾಸ್ ನೀಡುತ್ತಿರುವ ಸಹಕಾರವನ್ನು ಸ್ಮರಿಸಿದರು.

ಮೂರು ಬಾರಿ ‘ವಿರಾಸತ್’ ವೀಕ್ಷಿಸಿದ್ದ ಕ್ಯಾ. ಪ್ರಾಂಜಲ್ ರಜೌರಿ ಎನ್‌ಕೌಂಟರ್‌ನಲ್ಲಿ ವೀರಮರಣ ಹೊಂದಿದ ಕ್ಯಾಪ್ಟನ್ ಪ್ರಾಂಜಲ್ ಅವರ ತಂದೆ ವೆಂಕಟೇಶ್ ಎಂ. ಸಭೆಯನ್ನು ಉದ್ದೇಶಿಸಿ ಮಾತನಾಡಿ, ತಮ್ಮ ಪುತ್ರನ ವೀರಮರಣದ ನಂತರ ಆಳ್ವಾಸ್‌ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮ ‘ವಿರಾಸತ್’ ಅನ್ನು ಆತನ ಸ್ಮರಣಾರ್ಥ ಸಮರ್ಪಿಸಿದ್ದನ್ನು ನೆನಪಿಸಿದರು. ಪ್ರಾಂಜಲ್ ಈ ಕಾರ್ಯಕ್ರಮವನ್ನು ಮೂರು ಬಾರಿ ಆಸಕ್ತಿಯಿಂದ ವೀಕ್ಷಿಸಿದ್ದನ್ನು ಸ್ಮರಿಸಿದರು.

ವಿದ್ಯಾರ್ಥಿಗಳು ಸದಾ ದೊಡ್ಡ ಕನಸು ಕಾಣಬೇಕು. ರೈತ, ವಿಜ್ಞಾನಿ, ಸೈನಿಕ, ಉದ್ಯಮಿ ಅಥವಾ ಯಾವುದೇ ಕ್ಷೇತ್ರದಲ್ಲಾದರೂ ಸಮಾಜಕ್ಕೆ ಕೊಡುಗೆ ನೀಡುವ ವ್ಯಕ್ತಿಗಳಾಗಬೇಕು. ಧರ್ಮದ ಮಾರ್ಗದಲ್ಲಿ ನಡೆದು, ತಮ್ಮ ಅಂತರಾತ್ಮದ ಧ್ವನಿಯನ್ನು ಅನುಸರಿಸಿ ಗುರಿ ಸಾಧಿಸಬೇಕು,” ಎಂದು ಅವರು ಸಲಹೆ ನೀಡಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. 

ಆರ್‌ಡಿಸಿ, ಟಿಎಸ್‌ಸಿ ಸಾಧಕರಿಗೆ ಗೌರವ

ಕಾರ್ಯಕ್ರಮದ ಅಂಗವಾಗಿ ನವದೆಹಲಿಯ ಗಣರಾಜ್ಯೋತ್ಸವ ಶಿಬಿರದಲ್ಲಿ ಭಾಗವಹಿಸಿದ್ದ ಆರು ಕ್ಯಾಡೆಟ್‌ಗಳು ಹಾಗೂ ಥಲ್ ಸೈನಿಕ್ ಕ್ಯಾಂಪ್‌ನಲ್ಲಿ ಭಾಗವಹಿಸಿದ್ದ ಒಬ್ಬ ಕ್ಯಾಡೆಟ್‌ನ್ನು ಸನ್ಮಾನಿಸಲಾಯಿತು. 

ಇದೇ ವೇಳೆ ಮೇಜರ್ ಜನರಲ್ ಬ್ರೂಸ್ ಫರ್ನಾಂಡಿಸ್ ದಂಪತಿ ಹಾಗೂ ವೆಂಕಟೇಶ್ ಎಂ. ಅವರನ್ನು ಗೌರವಿಸಲಾಯಿತು.

ಲೆಫ್ಟಿನೆಂಟ್ ಕರ್ನಲ್ ರೋಹಿತ್ ರಾಯ್, ಕಮಾಂಡರ್ ಲಿಬಿನ್ ಜಾನ್ಸನ್, ವಿಂಗ್ ಕಮಾಂಡರ್ ಪ್ರವೀಣ್ ಕರಿಯಪ್ಪ, ಕರ್ನಲ್ ಜಿ. ಸೋಮು ಮಹಾರಾಜನ್, ಮರ್ಲಿನ್ ಫರ್ನಾಂಡಿಸ್, ಫೆಡರಲ್ ಬ್ಯಾಂಕ್‌ನ ಸಂಜೋ ಜೋಸೆಫ್ ಮತ್ತಿತರರು ಉಪಸ್ಥಿತರಿದ್ದರು. ಎಎನ್‌ಒಗಳಾದ ಕಿರಣ್, ಧನಂಜಯ ಆಚಾರ್ಯ ಹಾಗೂ ಪ್ರಸಾದ್ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಪವಿತ್ರ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article