ಪುತ್ತೂರು ಮಾದಕ ವಸ್ತು ಸಾಗಾಟ: ಮೂವರ ಸೆರೆ
Friday, February 20, 2026
ಪುತ್ತೂರು: ನಿಷೇಧಿತ ಮಾದಕ ವಸ್ತು ಎಂಡಿಎಮ್ಎ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಮಾಡಿದ ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರು ಕೇರಳ ಮೂಲದ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ಅವರಿಂದ ಎಂಡಿಎಂ ಮತ್ತು ಒಂದು ತಲವಾರು ಸ್ವಾಧೀನ ಪಡೆಸಿಕೊಂಡಿದ್ದಾರೆ.
ಕೇರಳ ರಾಜ್ಯದ ಕೋಜಿಕೋಡ್ ಪೆರುವಾಯಲ್ ಎಂಬಲ್ಲಿನ ನಿವಾಸಿ ಮುಹಮ್ಮದ್ ಅಜ್ಜಲ್ ಸಿ. (30), ವಯನಾಡ್ ನಿವಾಸಿ ಇಸ್ಮಾಯಿಲ್ (28), ಕೋಜಿಕೋಡ್ ಕೊಯಿಲಾಡಿ ನಿವಾಸಿ ಸಂಶೀರ್ (27) ಬಂಧಿತ ಆರೋಪಿಗಳು. ಅವರಿಂದ 55 ಗ್ರಾಂ ಎಂಡಿಎಂಎ ಮತ್ತು ಒಂದು ತಲುವಾರು ಸ್ವಾಧೀನ ಪಡಿಸಿಕೊಳ್ಳಲಾಗಿದೆ.
ಗ್ರಾಮಾಂತರ ಪೊಲೀಸ್ ಠಾಣೆಯ ಎಸ್.ಐ ಗುಣಪಾಲ ಜೆ ಅವರು ಸಿಬ್ಬಂದಿಗಳೊಂದಿಗೆ ಕರ್ತವ್ಯದಲ್ಲಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಪರ್ಪುಂಜ ಎಂಬಲ್ಲಿ ವಾಹನ ತಪಾಸಣೆ ನಡೆಸುತ್ತಿರುವಾಗ ಪುತ್ತೂರು ಕಡೆಯಿಂದ ಕಪ್ಪು ಬಣ್ಣದ ಕೆ.ಎಲ್. ನೋಂದಾವಣೆಯ ಮಹೀಂದ್ರ ಥಾರ್ ಕಾರ್ ತಡೆದು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅವರನ್ನು ವಿಚಾರಿಸಿದಾಗ ಎಮ್ಡಿಎಂ ಮಾರಾಟಕ್ಕೆ ತೆರಳುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಪೊಲೀಸರು ಕಾರನ್ನು ಪರಿಶೀಲಿಸಿದಾಗ ಚಾಲಕನ ಸೀಟ್ನ ಅಡಿಯಲ್ಲಿದ್ದ ಒಂದು ತಲವಾರು ವಶಕ್ಕೆ ತೆಗೆದುಕೊಂಡಿದ್ದಾರೆ.