ಚಂದ್ರಗ್ರಹಣ: ಸರ್ಪ ಸಂಸ್ಕಾರ ಸೇವೆ ಇಲ್ಲ
ಸುಬ್ರಹ್ಮಣ್ಯ: ಮಾ.2ರಂದು ಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ನಾಡಿನ ಎರಡು ಪ್ರಮುಖ ದೇವಸ್ಥಾನಗಳಾದ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೇವೆ ಹಾಗೂ ದರ್ಶನದ ಸಮಯದಲ್ಲಿ ವ್ಯತ್ಯಯವಾಗಲಿದೆ.
ಸರ್ಪ ಸಂಸ್ಕಾರ ಸೇವೆ ಇಲ್ಲ:
ಮಾ. 3ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಯಾವುದೇ ಸೇವೆಗಳು ಇರುವುದಿಲ್ಲ. ಬೆಳಿಗ್ಗೆ 9ಕ್ಕೆ ದೇವಳದ ಬಾಗಿಲು ಹಾಕಲಾಗುವುದು. ಅಂದಿನ ಮಧ್ಯಾಹ್ನದ ಮಹಾಪೂಜೆಯನ್ನು ಬೆಳಿಗ್ಗೆ 8 ಗಂಟೆಗೆ ಮುಗಿಸಲಾಗುವುದು. ರಾತ್ರಿ 7 ಗಂಟೆಯ ನಂತರ ಪುನಃ ರಾತ್ರಿ ಪೂಜೆ ನಡೆಯಲಿದೆ. ಮಾ.2, 3ರಂದು ಸರ್ಪಸಂಸ್ಕಾರ ಸೇವೆ ಇರುವುದಿಲ್ಲ. ಬೆಳಿಗ್ಗೆ 9 ಗಂಟೆಗೆ ಫಲಾಹಾರ ಮುಕ್ತಾಯಗೊಳ್ಳಲಿದ್ದು, ಅಂದು ಮಧ್ಯಾಹ್ನ ಭೋಜನ ಪ್ರಸಾದದ ವ್ಯವಸ್ಥೆ ಇರುವುದಿಲ್ಲ.
ತುಲಾಭಾರ ಸೇವೆ ಇಲ್ಲ:
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಕ್ತಾದಿಗಳಿಗೆ ಮಧ್ಯಾಹ್ನ 1.30ರವರೆಗೆ ಮಾತ್ರ ದರ್ಶನಕ್ಕೆ ಅವಕಾಶವಿರುತ್ತದೆ. ಮಧ್ಯಾಹ್ನ 1.30 ರಿಂದ ಸಂಜೆ 7.30ರವರೆಗೆ ದರ್ಶನ ಸಂಪೂರ್ಣ ಸ್ಥಗಿತಗೊಳ್ಳಲಿದೆ. ಸಂಜೆ 6.47ಕ್ಕೆ ಗ್ರಹಣ ಮುಕ್ತಾಯವಾಗಲಿದ್ದು, ದೇವಳದ ಶುದ್ಧೀಕರಣದ ನಂತರ ರಾತ್ರಿ 7.30ರಿಂದ ಭಕ್ತರಿಗೆ ದರ್ಶನಕ್ಕೆ ಪುನಃ ಅವಕಾಶ ಕಲ್ಪಿಸಲಾಗುತ್ತದೆ. ಗ್ರಹಣದ ಅವಧಿಯಲ್ಲಿ ತುಲಾಭಾರ ಹಾಗೂ ಇತರ ಯಾವುದೇ ವಿಶೇಷ ಸೇವೆಗಳು ನಡೆಯುವುದಿಲ್ಲ.