ಮುಂದಿನ ಐದು ವರ್ಷಗಳಲ್ಲಿ ಜಿಲ್ಲೆಯಲ್ಲಿ 50 ಯಶಸ್ವಿ ಸ್ಟಾರ್ಟ್ಅಪ್ಗಳು: ಕ್ಯಾ.ಬ್ರಿಜೇಶ್ ಚೌಟ
ಯೆಯ್ಯಾಡಿಯಲ್ಲಿ ಪ್ರಭಾವಶಾಲಿ ಉದ್ಯಮಗಳ ನಿರ್ಮಾಣದ ವೇದಿಕೆಯಾದ ‘ಬೊಲ್ಪು’ ಸಂಘಟನೆಯ ಆಶ್ರಯದಲ್ಲಿ ಶನಿವಾರ ಏರ್ಪಡಿಸಿದ 11 ಮಂದಿ ಸ್ಟಾರ್ಟ್ಅಪ್ ಉದ್ದಿಮೆದಾರರ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಉದ್ಯಮ ಉತ್ಸಾಹಿಗಳನ್ನು ಸೂಕ್ತ ತರಬೇತುಗೊಳಿಸಿ ಉದ್ದಿಮೆಯಲ್ಲಿ ತೊಡಗಿಸಿಕೊಳ್ಳುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ನೋಡಿಕೊಳ್ಳಲಾಗುವುದು. ಕೇಂದ್ರ ಸರ್ಕಾರ ಸ್ಟಾರ್ಟ್ಅಪ್ ಇಂಡಿಯಾ ಆರಂಭಿಸಿ 11 ವರ್ಷ ಆಗಿದ್ದು, ಕರಾವಳಿಯಲ್ಲಿ ಉದ್ದಿಮೆ ಸ್ಥಾಪಿಸಲು 850 ಅರ್ಜಿಗಳ ಪೈಕಿ 11 ಮಂದಿ ಸ್ಟಾರ್ಟ್ಅಪ್ಗಳನ್ನು ಆಯ್ಕೆ ಮಾಡಿರುವುದು ಸಂತಸದ ವಿಚಾರ. ಉದ್ದಿಮೆದಾರರನ್ನು ಪ್ರೋತ್ಸಾಹಿಸಿ ಸೂಕ್ತ ಅವಕಾಶ ಕಲ್ಪಿಸಲು ಬೊಲ್ಪು ಸಂಘಟನೆ ಕಾರ್ಯ ನಿರ್ವಹಿಸುತ್ತಿದೆ. ಕರಾವಳಿ ಎಂಬುದು ಅವಕಾಶಗಳ ಸಾಗರವಾಗಿದ್ದು, ಅದನ್ನು ಸರಿಯಾಗಿ ಬಳಸಿಕೊಳ್ಳಲು ಮುಂದಾಗಬೇಕು. ಉದ್ಯಮಗಳನ್ನು ಸೀಮಿತ ಚೌಕಟ್ಟಿಗೆ ಒಳಪಡಿಸದೆ ಅದನ್ನು ವಿಸ್ತರಿಸುವ ಬಗ್ಗೆ ಯೋಚಿಸಬೇಕು. ಆಗ ಮಾತ್ರ ಯಶಸ್ವಿ ಉದ್ಯಮಿಯಾಗಲು ಸಾಧ್ಯವಿದೆ. ಈಗಾಗಲೇ ಆಯ್ಕೆಯಾದ 11 ಮಂದಿ ವಿವಿಧ ಉದ್ದಿಮೆ ಸ್ಥಾಪಿಸುತ್ತಿದ್ದು, ಭವಿಷ್ಯದ ಜನಾಂಗಕ್ಕೆ ಕರಾವಳಿಯಲ್ಲಿ ಉದ್ಯಮ ಸ್ಥಾಪನೆ ಅತ್ಯಗತ್ಯ. ಅದಕ್ಕಾಗಿ ವಿವಿಧ ಹಂತಗಳಲ್ಲಿ ಸಲಹೆಗಾರರು, ತರಬೇತಿ, ಹಣಕಾಸು ಸೌಲಭ್ಯ, ಮಾರುಕಟ್ಟೆ ವಿಸ್ತರಣೆ ಮುಂತಾದ ನೆರವು ನೀಡಲಾಗುವುದು ಎಂದರು.
2 ಮತ್ತು 3ನೇ ಹಂತದ ನಗರಗಳಲ್ಲಿ ಉದ್ದಿಮೆ ಸ್ಥಾಪಿಸಲು ಶೇ. 60ರಷ್ಟು ಸ್ಟಾರ್ಟ್ಅಪ್ಗಳು ಅಲ್ಲದೆ ಶೇ.50ರಷ್ಟು ಮಹಿಳೆಯರು ಕೂಡ ಮುಂದೆ ಬರಬೇಕು. ಉದ್ದಿಮೆ ಸ್ಥಾಪಿಸಿದ ಬಳಿಕ ಅದನ್ನು ಅರ್ಧದಲ್ಲೇ ಕೈಬಿಡಬಾರದು. ಉದ್ದಮದ ಸಾಧನೆ ಹಾಗೂ ಅವನತಿ ಎರಡೂ ನಮ್ಮ ಕೈಯಲ್ಲೇ ಇದೆ, ಮಂಗಳೂರು ಎಲ್ಲ ಸಾಧ್ಯತೆಗಳ ದಿಕ್ಕಿನಲ್ಲಿ ಯೋಚಿಸುತ್ತಿದೆ ಎಂಬುದನ್ನು ಮರೆಯಬಾರದು ಎಂದರು.
ಇದೇ ಸಂದರ್ಭ 11 ಮಂದಿ ಸ್ಟಾರ್ಟ್ಅಪ್ಗಳು ತಮ್ಮ ಉದ್ದಿಮೆಯ ಕುರಿತಂತೆ ಅನಿಸಿಕೆ ವ್ಯಕ್ತಪಡಿಸಿದರು.