ವಂದೇ ಮಾತರಂ ಕೋಸ್ಟಲ್ ಸೈಕ್ಲೋಥಾನ್ ರ‍್ಯಾಲಿ ಯಶಸ್ವಿಗೊಳಿಸಿ: ಅಪರ ಜಿಲ್ಲಾಧಿಕಾರಿ

ವಂದೇ ಮಾತರಂ ಕೋಸ್ಟಲ್ ಸೈಕ್ಲೋಥಾನ್ ರ‍್ಯಾಲಿ ಯಶಸ್ವಿಗೊಳಿಸಿ: ಅಪರ ಜಿಲ್ಲಾಧಿಕಾರಿ


ಉಡುಪಿ: ಕೇಂದ್ರ ಕೈಗಾರಿಕಾ ಭದ್ರತಾ ಪಡೆ ವತಿಯಿಂದ ವಂದೇ ಮಾತರಂ ಕೋಸ್ಟಲ್ ಸೈಕ್ಲೋಥಾನ್-2026 ರ‍್ಯಾಲಿಯು ಫೆ.18 ರಂದು ಜಿಲ್ಲೆಯಲ್ಲಿ ಸಂಚರಿಸಲಿದೆ. ಈ ಸೈಕ್ಲಿಂಗ್ ರ‍್ಯಾಲಿಯನ್ನು ಯಶಸ್ವಿಗೊಳಿಸಲು ಅಗತ್ಯ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಸೂಚನೆ ನೀಡಿದರು.

ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ತಮ್ಮ ಕಚೇರಿಯಲ್ಲಿ ಸಿ.ಐ.ಎಸ್.ಎಫ್ ವಂದೇ ಮಾತರಂ ಕೋಸ್ಟಲ್ ಸೈಕ್ಲೋಥಾನ್ ಕಾರ್ಯಕ್ರಮ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.


ವಂದೇ ಮಾತರಂ ಗೀತೆಯು 150 ವರ್ಷ ಪೂರೈಸಿರುವ ಹಿನ್ನೆಲೆ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿ.ಐ.ಎಸ್.ಎಫ್) ವತಿಯಿಂದ ವಂದೇ ಮಾತರಂ ಕೋಸ್ಟಲ್ ಸೈಕ್ಲೋಥಾನ್-2026 ಅನ್ನು ಹಮ್ಮಿಕೊಳ್ಳಲಾಗಿದ್ದು, ದೇಶದ ಪಶ್ಚಿಮ ಸಮುದ್ರ ತೀರದಲ್ಲಿ ಕರಾವಳಿ ಸಮುದಾಯಗಳು, ಸಂಸ್ಕೃತಿ ಮತ್ತು ರಾಷ್ಟ್ರೀಯ ಸಂಕಲ್ಪವನ್ನು ಒಟ್ಟುಗೂಡಿಸುವ ಉದ್ದೇಶದಿಂದ ಕೋಸ್ಟಲ್ ಸೈಕ್ಲೋಥಾನ್ ಸ್ಪರ್ಧೆಯನ್ನು ಆಯೋಜಿಸಿದ್ದು, ರ‍್ಯಾಲಿಗೆ ಈಗಾಗಲೆ ಜನವರಿಯಲ್ಲಿ ಗುಜರಾತ್ ಮತ್ತು ಪಶ್ಚಿಮ ಬಂಗಾಳದಲ್ಲಿ ಏಕಕಾಲಕ್ಕೆ ಚಾಲನೆ ನೀಡಲಾಗಿರುತ್ತದೆ. ರ‍್ಯಾಲಿಯು ಸುಮಾರು 6,500 ಕಿ.ಮೀ. ಸಂಚರಿಸುವುದರೊಂದಿಗೆ ಕೇರಳದ ಕೊಚ್ಚಿಯಲ್ಲಿ ಫೆಬ್ರವರಿ 21 ರಂದು ಕೊನೆಗೊಳ್ಳಲಿದೆ ಎಂದರು.

ಜಿಲ್ಲೆಯಲ್ಲಿ ರ‍್ಯಾಲಿಯು ಬೈಂದೂರು ತಾಲೂಕಿನ ಶಿರೂರಿನಿಂದ ಪ್ರಾರಂಭವಾಗಿ ಕುಂದಾಪುರ-ಬ್ರಹ್ಮಾವರ-ಉಡುಪಿ-ಕಾಪು-ಹೆಜಮಾಡಿ ಮೂಲಕ ಸಂಚರಿಸಿ ಮುಂದೆ ಹಾದುಹೋಗಲಿದೆ. ಈ ರ‍್ಯಾಲಿಯನ್ನು ಸಾರ್ವಜನಿಕರು, ಸಮುದಾಯದ ಜನರು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಯಶಸ್ವಿಗೊಳಿಸಬೇಕು ಎಂದರು.

ಸೈಕ್ಲೋಥಾನ್ ರ‍್ಯಾಲಿಯ ಸ್ಪರ್ಧಾಳುಗಳನ್ನು ಸ್ಥಳೀಯ ಸಂಪ್ರದಾಯದೊಂದಿಗೆ ಅಂದು ಬೆಳಗ್ಗೆ 8.30ಕ್ಕೆ ತ್ರಾಸಿಯಲ್ಲಿ ಸ್ವಾಗತಿಸಲಿದ್ದು, ಅಲ್ಲಿ ವಿದ್ಯಾರ್ಥಿಗಳೊಂದಿಗೆ ಹಾಗೂ ಸಮುದಾಯದ ಜನರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದ ಅವರು, ಬೆಳಗ್ಗೆ 11.30 ಕ್ಕೆ ಬ್ರಹ್ಮಾವರದ ಆಶ್ರಯ ಹೋಟೆಲ್ ಸಭಾಂಗಣದಲ್ಲಿ ಹಾಗೂ ಸಂಜೆ 3.30ಕ್ಕೆ ಕಾಪು ತಾಲೂಕಿನ ಸರಕಾರಿ ಕಾಲೇಜಿನ ಸಭಾಂಗಣದಲ್ಲಿ ಸಮುದಾಯದ ಜನರು ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ ಎಂದ ಅವರು, ರ‍್ಯಾಲಿಯ ಯಶಸ್ಸಿಗೆ ಸಾರ್ವಜನಿಕರು, ಸಮುದಾಯದವರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ರ‍್ಯಾಲಿಯು ಸುಗಮವಾಗಿ ಸಾಗಲು, ಸೈಕ್ಲಿಸ್ಟ್‌ಗಳು ಮತ್ತು ಅವರ ಸಿಬ್ಬಂದಿಗೆ ಸುರಕ್ಷತೆ ಒದಗಿಸಲು ಹಾಗೂ ಪ್ರಯಾಣಿಕರು ಸುಗಮ ಸಂಚಾರಕ್ಕೆ ಯಾವುದೇ ಅನಾನುಕೂಲ ಉಂಟಾಗದಂತೆ ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ರ‍್ಯಾಲಿ ಸಂದರ್ಭದಲ್ಲಿ ವೈದ್ಯಕೀಯ ಸಿಬ್ಬಂದಿಗಳನ್ನು ಒಳಗೊಂಡ ಆಂಬುಲೆನ್ಸ್ ಅನ್ನು ಸ್ಥಳದಲ್ಲಿ ನಿಯೋಜಿಸಬೇಕು ಎಂದರು.

ಸಭೆಯಲ್ಲಿ ಎನ್.ಎಂ.ಪಿ.ಎ ಮಂಗಳೂರು ಸೆಂಟ್ರಲ್ ಇಂಡಸ್ಟ್ರೀಯಲ್ ಫೋರ್ಸ್‌ನ ರಾಜೇಂದ್ರ ಪ್ರಸಾದ್ ಪಾಠಕ್, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ, ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿ ಡಾ. ಚಿದಾನಂದ ಸಂಜು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೋಶನ್ ಕುಮಾರ್ ಶೆಟ್ಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article