ಧರ್ಮಸ್ಥಳದಲ್ಲಿ ನಾಳೆ ಶಿವರಾತ್ರಿ ವೈಭವ: ಪಾದಯಾತ್ರಿಗಳ ಗಡಣ, ಅಹೋರಾತ್ರಿ ಶಿವಪಂಚಾಕ್ಷರಿ ಪಠಣ, ಜಾಗರಣೆ, ಕಲಾಸೇವೆ

ಧರ್ಮಸ್ಥಳದಲ್ಲಿ ನಾಳೆ ಶಿವರಾತ್ರಿ ವೈಭವ: ಪಾದಯಾತ್ರಿಗಳ ಗಡಣ, ಅಹೋರಾತ್ರಿ ಶಿವಪಂಚಾಕ್ಷರಿ ಪಠಣ, ಜಾಗರಣೆ, ಕಲಾಸೇವೆ


ಉಜಿರೆ: ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ನಾಳೆ, ಭಾನುವಾರ ಶಿವರಾತ್ರಿ ಪ್ರಯುಕ್ತ ನಾಡಿನೆಲ್ಲೆಡೆಯಿಂದ ಲಕ್ಷಕ್ಕೂ ಮಿಕ್ಕಿ ಭಕ್ತಾದಿಗಳು ಆಗಮಿಸಲಿದ್ದು ಅವರಿಗೆ ಸಕಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಸುಮಾರು ಐವತ್ತು ಸಾವಿರಕ್ಕೂ ಮಿಕ್ಕಿ ಪಾದಯಾತ್ರಿಗಳು ಬರುವುದಾಗಿ ಈಗಾಗಲೆ ಖಚಿತಪಡಿಸಿದ್ದು, ಅವರಿಗೆ ಸಕಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಧರ್ಮಸ್ಥಳದಲ್ಲಿ ಸಾಕೇತ ಗಂಗೋತ್ರಿ, ಎಸ್.ಡಿ.ಎಂ. ಹೈಸ್ಕೂಲ್, ಅಮೃತವರ್ಷಿಣಿ ಸಭಾಭವನ ಹಾಗೂ ಉಜಿರೆಯಲ್ಲಿರುವ ಶಿಕ್ಷಣ ಸಂಸ್ಥೆಗಳಲ್ಲಿ ವಿಶ್ರಾಂತಿ ಹಾಗೂ ಉಜಿರೆಯಲ್ಲಿರುವ ಶಿಕ್ಷಣಸಂಸ್ಥೆಗಳಲ್ಲಿ ವಿಶ್ರಾಂತಿ ಹಾಗೂ ವಸತಿಗೆ ಸೌಲಭ್ಯ ಕಲ್ಪಿಸಲಾಗಿದೆ.

ಧರ್ಮಸ್ಥಳದಲ್ಲಿ ಮುಖ್ಯ ಪ್ರವೇಶದ್ವಾರದ ಬಳಿ ಸ್ವಾಗತ ಕಾರ್ಯಾಲಯ ತೆರೆದಿದ್ದು ಮಾಹಿತಿಕೇಂದ್ರ, ಉಚಿತ ವೈದ್ಯಕೀಯ ಚಿಕಿತ್ಸೆ, ಪಾನೀಯ ವಿತರಣೆ, ಪೊಲೀಸ್ ಚೌಕಿ, ಅಂಬುಲೆನ್ಸ್ ಸೇವೆ ಲಭ್ಯವಿದೆ. ಪಾದಯಾತ್ರೆಯಲ್ಲಿ ಬಂದವರನ್ನು ಇಲ್ಲಿ ಹಾರಹಾಕಿ ಗೌರವದಿಂದ ಸ್ವಾಗತಿಸಲಾಗುವುದು.

ಉಜಿರೆಯ ಎಸ್.ಡಿ.ಎಂ. ಆಸ್ಪತ್ರೆ ವತಿಯಿಂದ ಚಾರ್ಮಾಡಿ, ಮುಂಡಾಜೆ, ಉಜಿರೆ, ಬೂಡುಜಾಲು ಮೊದಲಾದ ಕಡೆ ಪಾದಯಾತ್ರಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ.

ಸ್ವಚ್ಛತೆಯೊಂದಿಗೆ ನಿರಂತರ ನೀರು ಸರಬರಾಜು ಹಾಗೂ ವಿದ್ಯುತ್ ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನ ಡಾ. ಪಂಚಾಕ್ಷರಿ ನೇತೃತ್ವದಲ್ಲಿ ವೈದ್ಯರು ಪ್ರತಿವರ್ಷದಂತೆ ಧರ್ಮಸ್ಥಳದಲ್ಲಿ ಉಚಿತ ಚಿಕಿತ್ಸೆ ನೀಡುವರು.

ಪಾದಯಾತ್ರಿಗಳು ತಂಗುವ ಸ್ಥಳದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೇತೃತ್ವದಲ್ಲಿ ಧಾರ್ಮಿಕ ಉಪನ್ಯಾಸ, ಭಜನೆ ಹಾಗೂ ಸತ್ಸಂಗ ಮೊದಲಾದ ಧರ್ಮಪ್ರಭಾವನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ವೈವಿಧ್ಯಮಯ ಸೇವೆ: ಶಿವರಾತ್ರಿ ಪ್ರಯುಕ್ತ ಭಾನುವಾರ ಭಕ್ತಾದಿಗಳು ದೇವರ ದರ್ಶನ ಮಾಡಿ ಶ್ರದ್ಧಾ-ಭಕ್ತಿಯಿಂದ ಎಳನೀರಿನ ಅಭಿಷೇಕ ಹಾಗೂ ಶತರುದ್ರಾಭಿಷೇಕ ಸೇವೆ ಅರ್ಪಿಸುವರು.

ಭಕ್ತರು ಅಹೋರಾತ್ರಿ ಶಿವಪಂಚಾಕ್ಷರಿ ಪಠಣದೊಂದಿಗೆ ಜಾಗರಣೆ ಹಾಗೂ ಉಪವಾಸ ವೃತಾಚರಣೆ ಮಾಡುವರು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಭಾನುವಾರ ಸಂಜೆ ಆರು ಗಂಟೆಗೆ ದೇವಸ್ಥಾನದ ಎದುರು ಇರುವ ಪ್ರವಚನ ಮಂಟಪದಲ್ಲಿ ದೀಪ ಬೆಳಗಿಸಿ ಶಿವಪಂಚಾಕ್ಷರಿ ಪಠಣಕ್ಕೆ ಚಾಲನೆ ನೀಡುವರು. ಬಳಿಕ ಅಹೋರಾತ್ರಿ ಭಕ್ತರಿಂದ ಶಿವಪಂಚಾಕ್ಷರಿ ಪಠಣ ನಡೆಯುತ್ತದೆ.

ಭಾನುವಾರ ರಾತ್ರಿ ಅನ್ನಪೂರ್ಣ ಭೋಜನಾಲಯದ ಹಿಂಬದಿ ಇರುವ ಮೈದಾನದಲ್ಲಿ ಹಾಗೂ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ಬೆಂಗಳೂರಿನ ಭಕ್ತರು ಉಚಿತ ಅನ್ನದಾಸೋಹ ಸೇವೆ ಮಾಡುವರು.

ಕಲಾಸೇವೆ: ನಾಡಿನೆಲ್ಲೆಡೆಯಿಂದ ಬಂದು ಸುಮಾರು ಎರಡು ಸಾವಿರ ಕಲಾವಿದರು ವಾಲಗ, ಕೊಳಲು, ಶಂಖ, ಜಾಗಟೆ, ಚೆಂಡೆ ವಾದನ ಮೊದಲಾದ ಕಲಾಸೇವೆ ಅರ್ಪಿಸುವರು.

ಶಿವರಾತ್ರಿ ಪ್ರಯುಕ್ತ ರಾಜ್ಯದ ವಿವಿಧ ಊರುಗಳಿಂದ ಕೆ.ಎಸ್. ಆರ್.ಟಿ.ಸಿ. ಧರ್ಮಸ್ಥಳಕ್ಕೆ ವಿಶೇಷ ಬಸ್ ಸೌಲಭ್ಯ ಕಲ್ಪಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article