ಕಾರ್ಮಿಕ ಸಂಹಿತೆಗಳ ವಿರುದ್ಧ ಸಹಾಯಕ ಕಾರ್ಮಿಕ ಆಯುಕ್ತರಿಗೆ ಆಕ್ಷೇಪಣೆ ಸಲ್ಲಿಕೆ ಹಾಗೂ ಪ್ರತಿಭಟನೆ
Wednesday, March 4, 2026
ಮಂಗಳೂರು: ಕಾರ್ಮಿಕ ವಿರೋಧಿಯಾದ ಸಂಹಿತೆಗಳ ವಿರುದ್ಧ ಆಕ್ಷೇಪಣೆ ಸಲ್ಲಿಕೆ ಹಾಗೂ ಪ್ರತಿಭಟನಾ ಪ್ರದರ್ಶನವು ಇಂದು ನಗರದ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿಯೆದುರು ಜರುಗಿತು. ದ.ಕ.ಜಿಲ್ಲೆಯಲ್ಲಿ ನೊಂದಾವಣೆಗೊಂಡ ಯೂನಿಯನ್ ಹಾಗೂ ವಿವಿಧ ಕಾರ್ಮಿಕ ಸಂಘಟನೆಗಳ ಕಾರ್ಮಿಕರು CITU ನೇತ್ರತ್ವದಲ್ಲಿ ಪ್ರತಿಭಟನೆ ನಡೆಸುವ ಮೂಲಕ ಪ್ರತ್ಯೇಕ ಪ್ರತ್ಯೇಕ ಮನವಿಗಳನ್ನು ಸಲ್ಲಿಸಿ ತಮ್ಮ ಆಕ್ಷೇಪಣೆಗಳನ್ನು ದಾಖಲಿಸಿದರು.
ಕಾರ್ಮಿಕ ವರ್ಗವನ್ನು ಮತ್ತೆ ಗುಲಾಮಗಿರಿಯತ್ತ ತಳ್ಳಲು ಸಂಚು ರೂಪಿಸಿರುವ ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ CITU ದ.ಕ.ಜಿಲ್ಲಾಧ್ಯಕ್ಷರಾದ ಬಿ.ಎಂ. ಭಟ್ ಅವರು, ಕಾರ್ಪೊರೇಟ್ ಗಳ ಹಿತಾಸಕ್ತಿಗಳನ್ನು ಕಾಪಾಡಲು ಉತ್ಸುಕರಾಗಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ, ಕಾರ್ಮಿಕ ವರ್ಗದ ಕಲ್ಯಾಣಕ್ಕಾಗಿ ಯಾವುದೇ ಯೋಜನೆಗಳನ್ನು ರೂಪಿಸುತ್ತಿಲ್ಲ ಬದಲಾಗಿ ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಿ, ಕಾರ್ಮಿಕ ವರ್ಗದ ಬದುಕನ್ನು ಸಂಕಷ್ಟಗೊಳಪಡಿಸಿದೆ.ಇಂತಹ ಅಪಾಯಕಾರಿ ಸಂಹಿತೆಗಳನ್ನು ಕರ್ನಾಟಕ ರಾಜ್ಯದಲ್ಲಿ ಜಾರಿಗೊಳಿಸಲು ಸಮಾಜವಾದಿ ಹಿನ್ನೆಲೆಯ ಸಿದ್ದರಾಮಯ್ಯ ಸರಕಾರವೂ ಕೂಡ ಮುಂದಡಿ ಇಟ್ಟಿರುವುದು ಕಾರ್ಮಿಕ ವರ್ಗವನ್ನು ಶೋಷಣೆ ಮಾಡುವುದರಲ್ಲಿ ತಾನೇನು ಕಮ್ಮಿ ಇಲ್ಲ ಎಂಬುದನ್ನು ಸಾಬೀತುಪಡಿಸಿದೆ ಎಂದು ಹೇಳಿದರು.
CITU ಜಿಲ್ಲಾ ಉಪಾಧ್ಯಕ್ಷರಾದ ವಸಂತ ಆಚಾರಿಯವರು ಮಾತನಾಡಿ, ದೇಶದ ಕಾರ್ಮಿಕ ವರ್ಗದಲ್ಲಿ 90% ದಷ್ಟು ಕಾರ್ಮಿಕರನ್ನು ಹೊರಗಿಟ್ಟು ಲೇಬರ್ ಕೋಡ್ ಎಂದು ಕರೆಯುವ ಬದಲು ಅದನ್ನು ಕಾರ್ಪೊರೇಟ್ ಕೋಡ್ ಎಂದು ಕರೆಯುವುದು ಸೂಕ್ತ ವಾಗಿದೆ ಎಂದು ವ್ಯಂಗ್ಯವಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಅವರು, ದೇಶದ ಕಾರ್ಮಿಕ ವರ್ಗ ಒಂದಾಗಿ ಕನಿಷ್ಠ ಕೂಲಿ ಮಾಸಿಕ ರೂ. 36,000 ಸಿಗಬೇಕೆಂದು ಕೇಳಿದರೆ,56 ಇಂಚಿನ ಎದೆಯುಳ್ಳವರು,ತನ್ನನ್ನು ತಾನು ವಿಶ್ವಗುರುವೆಂದು ಕರೆಸಿಕೊಂಡವರು, ಚೌಕಿದಾರನೆಂದು ಗುರುತಿಸಿಕೊಂಡವರು ನಿಗದಿ ಪಡಿಸಿದ ಕನಿಷ್ಠ ಕೂಲಿ ದಿನಕ್ಜೆ ರೂ.176 ಮಾತ್ರ. ಇದರಿಂದ ಅಚ್ಛೇದಿನ್ ಬರುವುದು ಹೇಗೆ ಎಂಬುದನ್ನು ದೇಶದ ಪ್ರಧಾನಿ ಜನತೆಗೆ ವಿವರಿಸಬೇಕಾಗಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ CITU ಜಿಲ್ಲಾ ನಾಯಕರಾದ ಜೆ ಬಾಲಕೃಷ್ಣ ಶೆಟ್ಟಿ,ಯೋಗೀಶ್ ಜಪ್ಪಿನಮೊಗರು, ಪದ್ಮಾವತಿ ಶೆಟ್ಟಿ, ಜಯಂತ ನಾಯಕ್, ರವಿಚಂದ್ರ ಕೊಂಚಾಡಿ, ವಸಂತಿ ಕುಪ್ಪೆಪದವು, ರಾಧಾ ಮೂಡಬಿದ್ರೆ, ಗಿರಿಜಾ,ಲೋಲಾಕ್ಷಿ, ಈಶ್ವರಿ ಬೆಳ್ತಂಗಡಿ, ಪ್ರಮೋದಿನಿ, ಸಂತೋಷ್ ಆರ್ ಎಸ್,ಭವಾನಿ ವಾಮಂಜೂರು, ಪುಷ್ಪ, ವಾರಿಜಾ, ಭಾರತಿ ಬೋಳಾರ, ಜಯಲಕ್ಷ್ಮಿ, ದೇವಕಿ ಬೆಳ್ತಂಗಡಿ, ಮುಝಾಫರ್, ಇಬ್ರಾಹಿಂ ಅಂಬ್ಲಮೊಗರು, ಯಶೋಧ ಮಳಲಿ ಮುಂತಾದವರು ಭಾಗವಹಿಸಿದ್ದರು.
ಬಳಿಕ ಪ್ರತಿಯೊಂದು ಯೂನಿಯನ್ ಗಳ ಮುಖಂಡರು ಸಂಹಿತೆಗಳಿಗೆ ಆಕ್ಷೇಪಣೆ ಸಲ್ಲಿಸುವ ಮನವಿಯನ್ನು ಸಹಾಯಕ ಕಾರ್ಮಿಕ ಆಯುಕ್ತರಿಗೆ ಸಲ್ಲಿಸಿದರು.



