ಆಯುರ್ವೇದ ಗಿಡ ಮೂಲಿಕೆಗಳ ಬಳಕೆಯಿಂದ ರೋಗಗಳ ವಾಸಿ: ಡಾ. ಎನ್.ಟಿ. ಅಂಚನ್
ಅವರು ಯುವವಾಹಿನಿ (ರಿ.) ಮಂಗಳೂರು ಘಟಕ ಹಾಗೂ ಶ್ರೀ ಕ್ಷೇತ್ರ ಗೆಜ್ಜೆಗಿರಿ ಇವರ ಜಂಟಿ ಆಶ್ರಯದಲ್ಲಿ, ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ ಇವರ ಸಹಭಾಗಿತ್ವದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಮಾ.23 ರಂದು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಗ್ಲಾಸ್ ಹೌಸ್ ಸಭಾಂಗಣದಲ್ಲಿ ನಡೆದ ಆಯುರ್ವೇದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ಸುತ್ತಮುತ್ತಲೇ ದೊರೆಯುವ ಅನೇಕ ಸಸ್ಯಗಳಲ್ಲಿ ಅಪಾರ ಔಷಧೀಯ ಗುಣಗಳಿವೆ. ತುಳಸಿ, ಅಶ್ವಗಂಧಾ, ಕಹಿಬೇವು, ನೋನಿ, ಶಂಖ ಪುಷ್ಪ, ಅಲೋವೆರಾ ಮುಂತಾದ ಗಿಡಮೂಲಿಕೆಗಳು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಹಲವು ದೀರ್ಘಕಾಲದ ಕಾಯಿಲೆಗಳ ನಿಯಂತ್ರಣದಲ್ಲೂ ಮಹತ್ವದ ಪಾತ್ರವಹಿಸುತ್ತವೆ ಎಂದರು.
ಈ ಕಾರ್ಯಗಾರದಲ್ಲಿ ಸುಮಾರು 217 ಶಿಬಿರಾರ್ಥಿಗಳು ಭಾಗವಹಿಸಿದ್ದರು. ಅವರ ಪ್ರಶ್ನೆಗಳಿಗೆ ಡಾ. ಅಂಚನ್ ಅವರು ಸ್ಪಷ್ಟ ಹಾಗೂ ಪರಿಣಾಮಕಾರಿ ಉತ್ತರಗಳನ್ನು ನೀಡಿ ಕಾರ್ಯಗಾರಕ್ಕೆ ಮತ್ತಷ್ಟು ಮೌಲ್ಯ ಹೆಚ್ಚಿಸಿದರು.
ಈ ಸಂದರ್ಭದಲ್ಲಿ ನಾಟಿ ವೈದ್ಯೆಯರಾದ ಮೀನಾಕ್ಷಿ ನಾರಾಯಣ ಆಚಾರ್ ಬಂಟ್ವಾಳ, ಭಾಗೀರಥಿ ಕೊಡಿಯಾಳ ಸುಳ್ಯ, ಗಿರಿಜಾ ಕೋಟ್ಯಾನ್ ಕೇಮಾರು ಕಡಂದಲೆ, ಭವಾನಿ ಕುಂಜತ್ತೂರು ಮಂಜೇಶ್ವರ ಇವರ ಸಾಧನೆಯನ್ನು ಗುರುತಿಸಿ ಗೌರವಿಸಿ ಸನ್ಮಾನಿಸಲಾಯಿತು.
ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಯುವವಾಹಿನಿ ಮಂಗಳೂರು ಘಟಕದ ಅಧ್ಯಕ್ಷ ಹರೀಶ್ ಕೆ. ಸುವರ್ಣ ಸ್ವಾಗತಿಸಿದರು. ಆಕಾಶವಾಣಿಯ ನಿವೃತ್ತ ಉದ್ಘೋಷಕಿ ರೇಖಾ ನಾಗೇಶ್ ಕೋಟ್ಯಾನ್, ಶ್ರೀ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಜೈರಾಜ್ ಸೋಮಸುಂದರ್, ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಸಂಜೀವ ಪೂಜಾರಿ ಬಿರ್ವ, ಯುವವಾಹಿನಿ ಕೇಂದ್ರ ಸಮಿತಿಯ ಪ್ರಥಮ ಉಪಾಧ್ಯಕ್ಷೆ ವಿದ್ಯಾ ರಾಕೇಶ್, ಮಹಿಳಾ ಸಂಘಟನಾ ನಿರ್ದೇಶಕಿ ಸುಧಾ ಸುರೇಶ್ ಉಪಸ್ಥಿತರಿದ್ದರು.