ಆಸಿಡ್ ಎರಚಿದರೂ ಪತಿಯ ಬಿಟ್ಟು ಕೊಡದ ಪತ್ನಿ
ಮಂಗಳೂರು: ‘ಪತ್ನಿಗೆ ಪತಿಯೇ ದೇವರು. ಕಾಲ ಬದಲಾದರೂ ಆಧುನಿಕತೆ ಮೇಳೈಸಿದರೂ ಈ ಮನೋಭಾವ ಇಂದಿಗೂ ಬದಲಾಗಿಲ್ಲ. ಗಂಡ ಹೊಡೆದರೂ, ಬಡಿದರೂ ಆತನನ್ನು ಪತ್ನಿ ಬಿಟ್ಟು ಕೊಡಲಾರಳು. ಇಂತಹದೇ ಘಟನೆಯೊಂದು ಇಂದು ರಾಜ್ಯ ಮಹಿಳಾ ಅಯೋಗದ ಮುಂದೆ ಬಂದಿದೆ.
ಅಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಇಂದು ಮಂಗಳೂರಿನ ವೆನ್ಲಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಸಿಡ್ ದಾಳಿ ಪೀಡಿತೆಯನ್ನು ಭೇಟಿ ಮಾಡಿದರು. ಆಕೆಯನ್ನು ಮಾತನಾಡಿಸಿದಾಗ ಆಕೆ ಗಂಡ ತನ್ನ ಮೇಲೆ ಆಸಿಡ್ ದಾಳಿ ಮಾಡಿದರೂ ಆತನನ್ನು ಬಿಟ್ಟು ಕೊಡಲು ಸಿದ್ಧಳಿಲ್ಲ.
ಈ ವಿಷಯವನ್ನು ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಚೌಧರಿ ಬಹಿರಂಗ ಪಡಿಸಿದರು. ಆಸಿಡ್ ಸಂತ್ರಸ್ತೆಗೆ ಸರ್ಕಾರದಿಂದ ದೊರಕಬೇಕಾದ ಎಲ್ಲಾ ನೆರವು ಒದಗಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
44 ವರ್ಷದ ಮಹಿಳೆಯ ಮೇಲೆ ಆಕೆಯ ಪತಿ ಮದ್ಯಪಾನದ ಮತ್ತಿನಲ್ಲಿ ಆಸಿಡ್ ಎರಚಿದ್ದಾನೆ. ಮಹಿಳೆಯ ಎದೆ, ತುಟಿ ಮತ್ತು ಕೈಗಳ ಮೇಲೆ ಸುಮಾರು 10ರಿಂದ 15 ಶೇಕಡಾ ಸುಟ್ಟ ಗಾಯಗಳಾಗಿವೆ ಪೀಡಿತೆಗೆ ತಿಂಗಳಿಗೆ 10,000 ರೂ. ಪಿಂಚಣಿ ಹಾಗೂ ಗಾಯಗಳ ಪ್ರಮಾಣವನ್ನು ಅವಲಂಬಿಸಿ ಪರಿಹಾರ ಧನ ನೀಡಲಾಗುವುದು ಎಂದು ತಿಳಿಸಿದರು.
ಘಟನೆ ಫೆ. 28ರ ರಾತ್ರಿ ನಡೆದಿದೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೀಡಿತೆ ಮಾಸಿಕ ರಜೆಯಲ್ಲಿದ್ದ ಕಾರಣ ಮನೆ ಒಳಗೆ ಹೋಗಲು ಸಾಧ್ಯವಾಗದೆ ಪತಿಗೆ ಊಟ ನೀಡುವಂತೆ ಕೇಳಿದ್ದಳು. ಪತಿ ಊಟ ನೀಡದ ಕಾರಣ ಆಕೆ ಸಮೀಪದಲ್ಲಿರುವ ಪತಿಯ ಸಹೋದರನ ಮನೆಗೆ ಹೋಗಿ ಊಟ ಮಾಡಿ ಮರಳಿ ಮನೆಗೆ ಬಂದು ಹೊರಗಡೆ ವರಂಡಾದಲ್ಲಿ ಮಲಗಿದ್ದಳು.
ನಂತರ ಪತಿ ದೀಪ ಹಚ್ಚಿದಾಗ ಆಕೆ ಎಚ್ಚರಗೊಂಡು ನೋಡಿದಾಗ ರಬ್ಬರ್ ಶೀಟ್ ಪ್ರಕ್ರಿಯೆಗಾಗಿ ತಂದಿದ್ದ ಆಸಿಡ್ ಡಬ್ಬಿ ಕಾಣಿಸಿಕೊಂಡಿತು. ಭಯಗೊಂಡ ಆಕೆ ಮತ್ತೆ ಬಾವನ ಮನೆಗೆ ಹೋಗಿ ವಿಷಯ ತಿಳಿಸಿದಳು. ಭಾವನ ಮಗನ ಜೊತೆ ಮನೆಗೆ ಬಂದಾಗ ಪತಿ ಒಳಗೆ ಹೋಗಿದ್ದನು.
ಆದರೆ ಆ ರಾತ್ರಿ ನಂತರದಲ್ಲಿ, ತನ್ನ ಸಹೋದರನ ಮನೆಯಲ್ಲಿ ಊಟ ಮಾಡಿದ್ದಕ್ಕೆ ಕೋಪಗೊಂಡ ಪತಿ ಲಿಂಗಪ್ಪ ಆಕೆಯ ಮೇಲೆ ಆಸಿಡ್ ಎರಚಿದ್ದಾನೆ ಎಂದು ಆರೋಪಿಸಲಾಗಿದೆ. ತಕ್ಷಣ ಬಂಧುಗಳು ಆಕೆಯನ್ನು ನಾವೂರಿನ ಕ್ಲಿನಿಕ್ಗೆ ಕರೆದೊಯ್ದು ಬಳಿಕ ಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ ದಾಖಲಿಸಿದರು. ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
2024ರಲ್ಲಿ ಆಸಿಡ್ ದಾಳಿಗೆ ಒಳಗಾದ ವಿದ್ಯಾರ್ಥಿನಿಯ ತಾಯಿ ನಾಲ್ಕನೇ ಶಸ್ತ್ರಚಿಕಿತ್ಸೆಗೆ ಹಣ ಸಂಗ್ರಹಿಸಲು ತನ್ನ ಚಿನ್ನದ ಆಭರಣಗಳನ್ನು ಗಿರವಿ ಇಡಬೇಕಾಯಿತು ಎಂಬುದನ್ನೂ ಉಲ್ಲೇಖಿಸಿದ ಅವರು, ಆಸಿಡ್ ದಾಳಿ ಪೀಡಿತರ ಶಸ್ತ್ರಚಿಕಿತ್ಸೆ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ ಎಂದು ಅವರು ಹೇಳಿದರು.
‘ಆಕೆಯ ಶಸ್ತ್ರಚಿಕಿತ್ಸೆ ವೆಚ್ಚವನ್ನು ಮರುಪಾವತಿಸಲು ಮತ್ತು ಶೀಘ್ರದಲ್ಲೇ ನಡೆಯಲಿರುವ ಐದನೇ ಶಸ್ತ್ರಚಿಕಿತ್ಸೆಯ ವೆಚ್ಚವನ್ನು ಸರ್ಕಾರವೇ ಭರಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿದ್ದೇನೆ,” ಎಂದು ಹೇಳಿದರು.