ಸಿದ್ಧರಾಮಯ್ಯ ಸರಕಾರದ ಅಮಲು ಬಜೆಟ್: ಸತೀಶ್ ಕುಂಪಲ
ಮಂಗಳೂರು: ಕರ್ನಾಟಕ ರಾಜ್ಯದಲ್ಲಿ ಇರುವ ಸಿದ್ದರಾಮಯ್ಯ ನೇತೃತ್ವದ ಸರಕಾರ ಅಬಕಾರಿ ಇಲಾಖಾ ಮುಖಾಂತರ 45,000 ಕೋಟಿ ರೂ. ತೆರಿಗೆ ವಸೂಲಿಗೆ ಟಾರ್ಗೆಟ್ ಕೊಟ್ಟಿರುವುದು ಕಾಂಗ್ರೆಸ್ ಸರಕಾರ ಅಮಲು ಪ್ರೇರಿತ ಸರಕಾರವಾಗಿದೆ ಎಂದು ದ.ಕ. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.
ರಾಜ್ಯದ ಮದ್ಯಪ್ರಿಯರಿಗೆ ಅಮಲೇರಿಸಿ ಅವರಿಂದ ವಸೂಲಿ ಮಾಡಿದ ಹಣದಲ್ಲಿ ಸರಕಾರ ನಡೆಸುವ ಪ್ರಯತ್ನವಾಗಿದೆ. ಯುವನಿಧಿಯ ಹೆಸರಿನಲ್ಲಿ ಪ್ರಚಾರ ಗಿಟ್ಟಿಸಿದ ಸರಕಾರ ಯುವ ಜನತೆಗೆ ಅನ್ಯಾಯವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ನೀರಸ ಬಜೆಟ್ ಆಗಿದೆ. ಕರಾವಳಿಗೆ ಏನೂ ಕೊಡುಗೆ ನೀಡದ ಸರಕಾರ ದಿವಾಳಿ ಸರಕಾರವಾಗಿದೆ.
ರಾಜ್ಯದ ಆರ್ಥಿಕತೆಗೆ ಅತೀ ಹೆಚ್ಚು ತೆರಿಗೆ ನೀಡುವ ದಕ್ಷಿಣ ಕನ್ನಡ ಜಿಲ್ಲೆಗೆ ಬಜೆಟ್ನಲ್ಲಿ ಏನೂ ಘೋಷಿಸದೆ ಎರಡು ಪೊಲೀಸ್ ಠಾಣೆ ಮಾತ್ರ ನೀಡಿ ಹಿಂದೂಗಳ ಮೇಲೆ ಕೇಸು ದಾಖಲಿಸಿ ಮುಸ್ಲಿಂ ಓಲೈಕೆ ಮಾಡಲು ಹೊರಟ ಅಮಲು ಸರಕಾರವಾಗಿದೆ.
ರಾಜ್ಯದ ಬೇರೆ ಬೇರೆ ಇಲಾಖೆಯಲ್ಲಿ ಸ್ವಾಭಾವಿಕವಾಗಿ ಬಜೆಟ್ನಲ್ಲಿ ಅಭಿವೃದ್ಧಿಗೋಸ್ಕರ ಹಣ ಮೀಸಲಿರಿಸುವುದು ಮತ್ತು ಕಳೆದ ವರ್ಷಕ್ಕಿಂತ ಈ ಆರ್ಥಿಕ ವರ್ಷದಲ್ಲಿ ಹೆಚ್ಚಿಸುವ ಮೂಲಕ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡುವುದಾಗಿತ್ತು, ಆದರೆ ಈ ಬಜೆಟ್ನಲ್ಲಿ ಇದರ ಬದಲಾಗಿ ಹಿಂದಿನ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಮೀಸಲಿರಿಸಿರುವ ಪ್ರಯತ್ನದಿಂದಾಗಿ ರಾಜ್ಯದ ಅಭಿವೃದ್ಧಿಗೆ ದೊಡ್ಡ ಹೊಡೆತವಾಗಿದೆ ಎಂದು ಸತೀಶ್ ಕುಂಪಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.