ಯಕ್ಷಗಾನ ಗೊಂಬೆ ಆಟದ ಕುರಿತ ಸಂಶೋಧನಾ ಅಧ್ಯಯನ ವರದಿ
ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಜೀವನ್ ರಾಮ್ ಸುಳ್ಯ, ಯಕ್ಷಗಾನ ಗೊಂಬೆ ಆಟವು ಕರಾವಳಿ ಭಾಗದ ಆಕರ್ಷಕ ಕಲೆಯಾಗಿದ್ದು, ಪಪೆಟ್ (ಗೊಂಬೆ)ಗಳ ಮೂಲಕ ಯಕ್ಷಗಾನದ ಕಥಾವಸ್ತುಗಳನ್ನು ಪ್ರದರ್ಶಿಸುವ ಕಲಾರೂಪಕವಾಗಿದೆ. ಈ ಕಲೆ ಪ್ರೇಕ್ಷಕರಿಗೆ ಮನರಂಜನೆಯ ಜೊತೆಗೆ ಸಾಂಸ್ಕೃತಿಕ ಮೌಲ್ಯಗಳನ್ನು ಪರಿಚಯಿಸುವ ಮಹತ್ವದ ಮಾಧ್ಯಮ ಎಂದರು.
ಆಧುನಿಕ ಯುಗದಲ್ಲಿ ಟಿವಿ, ಸಿನೆಮಾ ಮತ್ತು ಡಿಜಿಟಲ್ ಮಾಧ್ಯಮಗಳ ಪ್ರಭಾವದಿಂದ ಈ ಕಲೆ ನಿಧಾನವಾಗಿ ಕಣ್ಮರೆಯಾಗುತ್ತಿದೆ. ಆದ್ದರಿಂದ, ಈ ಕಲೆ ಉಳಿಯಲು ಸರ್ಕಾರ ಹಾಗೂ ಸಾಂಸ್ಕೃತಿಕ ಸಂಸ್ಥೆಗಳು ವಿಶೇಷ ಪ್ರೋತ್ಸಾಹ ನೀಡಬೇಕು ಎಂದರು.
ಆಳ್ವಾಸ್ ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಕಲೆಯನ್ನು ಪುನರುಜ್ಜೀವನಗೊಳಿಸಲು ಕೆಲವು ಮಹತ್ವದ ಯೋಜನೆಗಳನ್ನು ಕೇಂದ್ರ ಸರ್ಕಾರಕ್ಕೆ ಈ ವರದಿ ಶಿಫಾರಸು ಮಾಡಿದೆ. ಈ ಶಿಫಾರಸುಗಳನ್ನು ಸರ್ಕಾರ ಪರಿಣಾಮಕಾರಿಯಾಗಿ ಜಾರಿಗೆ ತಂದರೆ, ಯಕ್ಷಗಾನ ಗೊಂಬೆ ಆಟಕ್ಕೆ ಹೊಸ ಚೈತನ್ಯ ದೊರೆಯುವ ಸಾಧ್ಯತೆ ಇದೆ ಎಂದರು.
ಕಾರ್ಯಕ್ರಮದಲ್ಲಿ ಭಾರತ ಸರ್ಕಾರದ ಕರಕುಶಲ ಅಭಿವೃದ್ಧಿ ಹಾಗೂ ಜವಳಿ ಸಚಿವಾಲಯದ ಮಂಗಳೂರು ವಲಯದ ಸಹಾಯಕ ನಿರ್ದೇಶಕಿ ರಾಜೇಶ್ವರಿ ಕೆ.ಎಂ, ಸಹಾಯಕ ಡಿಸೈನರ್ ಅಶ್ವಿನ್ ಕುಮಾರ್, ಆಳ್ವಾಸ್ ಸ್ವಾಯತ್ತ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಯೋಗೇಶ್ ಕೈರೋಡಿ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುಪ್ರಿಯಾ ಭಾರದ್ವಾಜ್ ಕಾರ್ಯಕ್ರಮವನ್ನು ನಿರೂಪಿಸಿದರು.
