ಶ್ರೀ ಮಹಾವೀರ ಕಾಲೇಜಿನ ಮುಂಬಯಿ ಹಳೆ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ
ಕಾರ್ಯಕ್ರಮದ ಆರಂಭದಲ್ಲಿ ಕಾಲೇಜಿನ ಹಳೆ ವಿದ್ಯಾರ್ಥಿ ಸುಚರಿತ ಶೆಟ್ಟಿ ಸ್ವಾಗತಿಸಿ, ಹಳೆವಿದ್ಯಾರ್ಥಿಗಳು ಸಂಘಟಿತರಾಗಿ ಕಾಲೇಜಿನ ಬೆಳವಣಿಗೆಗೆ ಸಹಕರಿಸುವಂತೆ ಕರೆನೀಡಿದರು. ಪ್ರಾಧ್ಯಾಪಕ ಹರೀಶ್, ಕಾಲೇಜಿನ ಮುಂಬರುವ ೬೦ನೇ ವರ್ಷದ 'ವಜ್ರ ಮಹೋತ್ಸವ' ಸಂಭ್ರಮಾಚರಣೆಗೆ ಹಳೆವಿದ್ಯಾರ್ಥಿಗಳನ್ನು ಆಹ್ವಾನಿಸುತ್ತಾ, ಈ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ಯೋಜನೆಗಳು ಮತ್ತು ಅವುಗಳನ್ನು ಕಾರ್ಯಗತಗೊಳಿಸುವ ಕುರಿತು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ಮುಂಬಯಿ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಅಧ್ಯಕ್ಷರಾಗಿ ಮೋಹನ್ದಾಸ್ ಶೆಟ್ಟಿ, ಸಂಚಾಲಕರಾಗಿ ಸುರೇಂದ್ರ ಹೆಗ್ಡೆ, ಮಹಿಳಾ ಘಟಕದ ಸಂಚಾಲಕಿಯಾಗಿ ನೂತನ್ ಸುವರ್ಣ, ಸಂಘಟನಾ ಕಾರ್ಯದರ್ಶಿಗಳಾಗಿ ಸತೀಶ್ ಬಂಗೇರ ಮತ್ತು ಮೋಹನ್ ಸುವರ್ಣ ಆಯ್ಕೆಯಾದರು. ಹಳೆವಿದ್ಯಾರ್ಥಿ ಸಂಘದ ಚಟುವಟಿಕೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಅಮರ್ನಾಥ್ ಶೆಟ್ಟಿ, ಪ್ರದೀಪ್ ಎಸ್. ಶೆಟ್ಟಿ, ಎಮ್. ಡಿ. ಗಣೇಶ್ ಹಾಗೂ ಭಾರತಿ ಪೂಜಾರಿ ಅವರನ್ನು ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ಸಂಜೆಯವರೆಗೆ ನಡೆದ ಈ ಕಾರ್ಯಕ್ರಮದಲ್ಲಿ ಅನೇಕ ಹಳೆವಿದ್ಯಾರ್ಥಿಗಳು ಪಾಲ್ಗೊಂಡು ತಮ್ಮ ಕಾಲೇಜು ದಿನಗಳ ನೆನಪುಗಳನ್ನು ಮೆಲುಕುಹಾಕುವುದರೊಂದಿಗೆ ವಜ್ರಮಹೋತ್ಸವದ ಯಶಸ್ಸಿಗೆ ಪೂರ್ಣ ಬೆಂಬಲ ಘೋಷಿಸಿದರು.
ಈ ಸಮ್ಮಿಲನದಲ್ಲಿ ಮೂಡುಬಿದಿರೆ ಪರಿಸರದಿಂದ ಕಾಲೇಜಿನ ಹಳೆವಿದ್ಯಾರ್ಥಿಗಳಾದ ಹರಿಪ್ರಸಾದ್ ನಾಯಕ್ ಮತ್ತು ನಿರಂಜನ್ ರಾವ್ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸತೀಶ್ ಬಂಗೇರ ನಿರೂಪಿಸಿದರು. ಸಮ್ಮಿಲನಕ್ಕೆ ಆಗಮಿಸಿದವರನ್ನು ಮೋಹನ್ ಸುವರ್ಣ ವಂದಿಸಿದರು.