ಬಸ್ ನಿರ್ವಾಹಕನಿಗೆ ಹಲ್ಲೆ: ಕ್ರಮಕ್ಕೆ ಎಸ್ಪಿಗೆ ಮನವಿ
ಪುತ್ತೂರು: ಕೆಎಸ್ಆರ್ಟಿಸಿ ಬಸ್ ನಿರ್ವಾಹಕ ಹಾಗೂ ಚಾಲಕ ಪ್ರಶಾಂತ್ ಎಂಬವರು ಕರ್ತವ್ಯದಲ್ಲಿರುವ ಸಂದರ್ಭ ವಿಟ್ಲ ಸಮೀಪದ ಮುಳಿಯ ಎಂಬಲ್ಲಿ ಅವರ ಮೇಲೆ ಹಲ್ಲೆ ಮಾಡಿದ ಪ್ರಕರಣದ ಆರೋಪಿಗಳು ಮತ್ತು ಕೇಸ್ ವಾಪಾಸು ಪಡೆಯುವಂತೆ ಅವರ ಮೇಲೆ ಬೆದರಿಕೆ ಒಡ್ಡಿದ್ದಾರೆ. ಈ ಹಿನ್ನಲೆಯಲ್ಲಿ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪುತ್ತೂರು ವಿಭಾಗದ ಕೆಎಸ್ಸಾರ್ಟಿಸಿ ಸ್ಟಾಫ್ ಆಂಡ್ ವರ್ಕರ್ಸ್ ಯೂನಿಯನ್ ಆಗ್ರಹಿಸಿದೆ. ಈ ಬಗ್ಗೆ ಯೂನಿಯನ್ ಈ ಸಂಬಂಧ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಕಾರಿಗಳಿಗೆ ಮನವಿ ಸಲ್ಲಿಸಿದೆ.
ಮಾರ್ಚ್ 24ರಂದು ಬಿ.ಸಿ.ರೋಡ್ ಘಟಕದ ನಿರ್ವಾಹಕ ಹಾಗೂ ಚಾಲಕ ಪ್ರಶಾಂತ್ ಅವರು ವಿಟ್ಲ-ಪಕಳಕುಂಜ ರೂಟ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಮುಳಿಯ ಎಂಬಲ್ಲಿ ಎದುರಿನಿಂದ ಬಂದ ಟಿಪ್ಪರ್ ಢಿಕ್ಕಿ ಹೊಡೆದು ಬಸ್ ಜಖಂಗೊಂಡಿತ್ತು. ಈ ಬಗ್ಗೆ ವಿಚಾರಿಸಲು ಹೋದ ಪ್ರಶಾಂತ್ ಅವರ ಮೇಲೆ ಟಿಪ್ಪರ್ ಲಾರಿ ಚಾಲಕ ಬಿಲಾಲ್ ಹಲ್ಲೆ ನಡೆಸಿದ್ದಾರೆ. ಹಲ್ಲೆ ಮಾಡುತ್ತಿರುವುದನ್ನು ಮೊಬೈಲ್ನಲ್ಲಿ ಚಿತ್ರೀಕರಣ ಮಾಡುತ್ತಿದ್ದವರನ್ನು ತಡೆದು ಬೆದರಿಕೆ ಒಡ್ಡಲಾಗಿದೆ. ಹಲ್ಲೆಗೆ ಒಳಗಾದ ಪ್ರಶಾಂತ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ಮಾಡಿದ ಬಗ್ಗೆ ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಿರ್ವಾಹಕ ಪ್ರಶಾಂತ್ ಜತೆ ಪೊಲೀಸರು ಸ್ಥಳ ಮಹಜರು ಮಾಡಲು ಹೋಗಿದ್ದ ಸಂದರ್ಭ ಸುಧೀರ್ ಎಂಬಾತ ಪೊಲೀಸರ ಎದುರಲ್ಲೇ ಪ್ರಶಾಂತ್ ಅವರಿಗೆ ಬೆದರಿಕೆ ಒಡ್ಡಿದ್ದು, ಕೇಸು ವಾಪಾಸು ಪಡೆದುಕೊಳ್ಳುವಂತೆ ಒತ್ತಡ ಹೇರಿ ಕೊಲೆ ಬೆದರಿಕೆ ಒಡ್ಡಿದ್ದಾರೆ. ಇಷ್ಟಾದರೂ ವಿಟ್ಲ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಇದನ್ನು ಯೂನಿಯನ್ ಬಲವಾಗಿ ಖಂಡಿಸುತ್ತದೆ. ಈ ಬಗ್ಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಸ್ಪಿ ಅವರಿಗೆ ಕಳುಹಿಸಲಾದ ಮನವಿಯಲ್ಲಿ ಒತ್ತಾಯಿಸಲಾಗಿದೆ ಎಂದು ಪುತ್ತೂರು ವಿಭಾಗದ ಕೆಎಸ್ಸಾರ್ಟಿಸಿ ಸ್ಟಾಫ್ ಆಂಡ್ ವರ್ಕರ್ಸ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಕೋಚಣ್ಣ ಪೂಜಾರಿ ತಿಳಿಸಿದ್ದಾರೆ.