ಎ.12 ರಂದು ಕದ್ರಿ ಕ್ಷೇತ್ರದಿಂದ ಕುತ್ತಾರು ಕೊರಗಜ್ಜನ ಆದಿಕ್ಷೇತ್ರಕ್ಕೆ ನಮ್ಮ ನಡೆ ಪಾದಯಾತ್ರೆ
ಉಳ್ಳಾಲ: ವಿಶ್ವ ಹಿಂದೂ ಪರಿಷತ್ ಉಳ್ಳಾಲ ಪ್ರಖಂಡ ವತಿಯಿಂದ ಹಿಂದೂ ಸಮಾಜದ ಐಕ್ಯತೆಗೆ ಮತ್ತು ಲೋಕಕಲ್ಯಾಣಾರ್ಥವಾಗಿ 6ನೇ ವರ್ಷದ ಕೊರಗಜ್ಜನ ಆದಿಕ್ಷೇತ್ರಕ್ಕೆ ನಮ್ಮ ನಡೆ ಪಾದಯಾತ್ರೆ ಎ.12ರಂದು ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಿಂದ ಕುತ್ತಾರು ದೆಕ್ಕಾಡು ಕೊರಗಜ್ಜನ ಕಟ್ಟೆಯವರೆಗೆ ನಡೆಯಲಿದೆ ಎಂದು ನಮ್ಮ ನಡೆ ಆಯೋಜನಾ ಸಮಿತಿಯ ಅಧ್ಯಕ್ಷ ಪ್ರವೀಣ್ ಕುತ್ತಾರ್ ಹೇಳಿದರು.
ತೊಕ್ಕೊಟ್ಟುವಿನ ಉಳ್ಳಾಲ ಪ್ರೆಸ್ಕ್ಲಬ್ನಲ್ಲಿ ಆಯೋಜಿಸಿದ ಸುದ್ಧಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡುವಂತಹ ಪ್ರಕರಣಗಳು ನಿರಂತರವಾಗಿ ನಡೆಯುತಿತ್ತು. ಅಂದು ಬೆಳಗ್ಗೆ 6.30 ಸುಮಾರಿಗೆ ವಿ.ಹಿಂ.ಪ. ಮುಖಂಡರು ಚಾಲನೆ ನೀಡಲಿರುವ ಪಾದಯಾತ್ರೆ ಮಲ್ಲಿಕಟ್ಟೆ, ಪಂಪ್ವೆಲ್, ನೇತ್ರಾವತಿ ಸೇತುವೆ, ತೊಕ್ಕೊಟ್ಟು ಆಗಿ ಕುತ್ತಾರು ತಲುಪಲಿದೆ. ದಾರಿಯುದ್ದಕ್ಕೂ ಫಲಾಹಾರ ವ್ಯವಸ್ಥೆಯನ್ನು ರಿಕ್ಷಾ ಚಾಲಕರು ಹಾಗೂ ಭಕ್ತಾಧಿಗಳು ಕಲ್ಪಿಸಿದ್ದಾರೆ. ಖಾಸಗಿ ಬಸ್ಸು ಮಾಲೀಕರ ಸಂಘ ಭಕ್ತಾಧಿಗಳ ಪ್ರಯಾಣಕ್ಕೆ ಬಸ್ಸಿನ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ. ಬಳಿಕ ನಡೆಯುವ ಸಮಾರೋಪ ಸಮಾರಂಭದಲ್ಲಿ ಕೃಷ್ಣ ಅಡಿಗೆ ಭಾಗವಹಿಸಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ವಿಶ್ವಹಿಂದೂ ಪರಿಷತ್ ಉಳ್ಳಾಲನಗರ ಪ್ರಖಂಡದ ಅಧ್ಯಕ್ಷ ನಾರಾಯಣ ಕುಂಪಲ ಅವರು ಮಾತನಾಡಿದರು.
ವಿಶ್ವಹಿಂದು ಪರಿಷತ್ ಮಂಗಳೂರು ಜಿಲ್ಲಾ ಸಹಕಾರ್ಯದರ್ಶಿಯಾದ ಗುರುಪ್ರಸಾದ್ ಉಳ್ಳಾಲ್, ಆಶಿಕ್ ಮಾಡೂರು, ಪ್ರಭಾಕರ್ ಮಾಡೂರು ಉಪಸ್ಥಿತರಿದ್ದರು.