ಬಳ್ಳಮಂಜ ದೇವಳದ ಜಾತ್ರೆಗೆ ಹೋಗಿ ಬರುವಷ್ಟರಲ್ಲಿ ನಗದು, ಚಿನ್ನಾಭರಣ ಕಳವು
ಬಂಟ್ವಾಳ: ಮನೆಮಂದಿ ಬಳ್ಳಮಂಜ ಅನಂತೇಶ್ವರ ದೇವಸ್ಥಾನದ ಜಾತ್ರೆಗೆಂದು ಹೋಗಿ ಬರುವಷ್ಟರಲ್ಲಿ ಮನೆಯ ಬೀಗ ಮುರಿದು ಒಳಪ್ರವೇಶಿಸಿದ ಕಳ್ಳರು ಲಕ್ಷಾಂತರ ರೂ. ಮೌಲ್ಯ ಚಿನ್ನಾಭರಣ ಸಹಿತ ನಗದು ಕಳವುಗೈದು ಪರಾರಿಯಾದ ಘಟನೆ ನಡೆದಿದೆ.
ಮಚ್ಚಿನ ಗ್ರಾಮದ ಬಳ್ಳಮಂಜ ಹೊಸಮನೆ ನಿವಾಸಿ ಡಿ. ಮುರಳಿ ಅವರ ಮನೆಯಲ್ಲಿ ಈ ಕಳವು ಕೃತ್ಯ ನಡೆದಿದೆ. ಇವರು ಕೃಷಿಕರಾಗಿದ್ದಲ್ಲದೆ ಪುರೋಹಿತರಾಗಿಯು ಕೆಲಸ ಮಾಡುತ್ತಿದ್ದಾರೆ.
ಎ.5 ರಂದು ಸಂಜೆ ಇವರ ಪತ್ನಿ, ತಾಯಿ ಮತ್ತು ಮಗ ಬಳ್ಳಮಂಜ ಶ್ರೀ ಅನಂತೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿದ್ದ ಬ್ರಹ್ಮಕಳಸದ ಜಾತ್ರೆಗೆಂದು ತೆರಳಿದ್ದು ಈ ಸಂದರ್ಭ ಮನೆಯೊಳಗಿದ್ದ ಕಪಾಟಿಗೆ ಹಾಗೂ ಮುಂಬಾಗಿಲಿಗೂ ಬೀಗ ಹಾಕಿ ಭದ್ರಪಡಿಸಿದ್ದರೆನ್ನಲಾಗಿದೆ.
ಮುರಳಿಯವರ ಪತ್ನಿ, ಮಗ ಹಾಗೂ ತಾಯಿ ಜಾತ್ರೆಯಲ್ಲಿಂದ ರಾತ್ರಿ ಮನೆಗೆ ಬಂದಾಗ ಮನೆಯ ಮುಂಬಾಗಿಲು ಅರ್ಧ ತೆರೆದಿರುವುದನ್ನು ಕಂಡು ಅನುಮಾನಗೊಂಡು ಮನೆಯಯೊಳಗೆ ಹೋಗಿ ಬೆಡ್ ರೂಂಗೆ ಬಂದಾಗ ಕಪಾಟಿನ ಲಾಕ್ ತೆರೆದಿದ್ದು, ಬಟ್ಟೆಗಳೆಲ್ಲ ಚಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ಕಂಡು ಬಂದಿದೆ.
ತಕ್ಷಣ ಮುರಳಿ ಅವರ ಪತ್ನಿ ಶಾಂತ ಗಂಡನಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅವರು ಮನೆಗೆ ಬಂದು ನೋಡಿದಾಗ ಮನೆಯ ಮುಂಬಾಗಿಲಿನ ಬೀಗವನ್ನು ಆಯುಧದಿಂದ ಮುರಿದು ಒಳಪ್ರವೇಶಿಸಿ ಬೆಡ್ ರೂಂನಲ್ಲಿದ್ದ ಕಪಾಟಿನ ಲಾಕ್ನ್ನು ಮುರಿದು ಅದರಲ್ಲಿಟ್ಟಿದ್ದ ವಿವಿಧ ಬಗೆಯ 136 ಗ್ರಾಂ ಚಿನ್ನಾಭರಣ ಹಾಗೂ ನಗದು 6 ಲ.ರೂ.ವನ್ನು ಕಳವುಗೈಯಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕಳವಾದ ಚಿನ್ನಾಭರಣ ಹಾಗೂ ನಗದಿನ ಒಟ್ಟು ಮೌಲ್ಯ 19,32,800 ರೂ. ಆಗಬಹುದೆಂದು ಅಂದಾಜಿಸಲಾಗಿದೆ. ಬೆರಳಚ್ಚು ತಜ್ಞರು, ಶ್ವಾನದಳವನ್ನು ಸ್ಥಳಕ್ಕೆ ಕರೆಸಲಾಗಿದೆ. ಪುಂಜಾಲಕಟ್ಟೆ ಠಾಣೆಯ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಕೇಸು ದಾಖಲಿಸಿಕೊಂಡು, ಮುಂದಿನ ತನಿಖೆ ನಡೆಸುತ್ತಿದ್ದಾರೆ.