ಹಿರಿಯ ಯಕ್ಣಗಾನ ಕಲಾವಿದ ಗೋವಿಂದ ಭಟ್ ಅವರ ಕುಟುಂಬಕ್ಕೆ ಗೌರವ ಡಾಕ್ಟರೇಟ್ ಪದವಿ ಹಸ್ತಾಂತರ
ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಸಂಪಾಜೆ ವತಿಯಿಂದ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ಸೋಮವಾರ ನಡೆದ ರಾಜ್ಯ ಮತ್ತು ರಾಷ್ಟ್ರಪ್ರಶಸ್ತಿ ಪುರಸ್ಕೃತ, ಯಕ್ಷದಶಾವತಾರಿ ಡಾ. ಕೆ. ಗೋವಿಂದ ಭಟ್ ಸೂರಿಕುಮೇರು ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ ಗೋವಿಂದ ಸ್ಮರಣೆ ಕಾರ್ಯಕ್ರಮದಲ್ಲಿ ಸೇರಿದ್ದ ನೂರಾರು ಅಭಿಮಾನಿಗಳ ಸಮ್ಮಖದಲ್ಲಿ ಡಾಕ್ಟರೇಟ್ ಪದವಿ ಹಸ್ತಾಂತರಿಸಲಾಯಿತು.
ಭಟ್ ಪುತ್ರರಾದ ಪ್ರಸನ್ನ ಕುಮಾರ್, ಶ್ಯಾಮಪ್ರಸಾದ್, ಸೂರ್ಯಪ್ರಕಾಶ್ ಅವರಿಗೆ ವಿಶ್ವವಿದ್ಯಾಲಯ ನೀಡುವ ಗೌರವ ಡಾಕ್ಟರೇಟ್ ಪದವಿಯನ್ನು ಹಸ್ತಾಂತರ ಮಾಡಲಾಯಿತು.
ಇದೇ ವೇಳೆ ಗೋವಿಂದ ಭಟ್ಟರ ಭಾವಚಿತ್ರಕ್ಕೆ ಗೌರವಾರ್ಪಣೆ ಮಾಡಿ ಮಾತನಾಡಿದ ಕುಲಪತಿ ಡಾ. ಧರ್ಮ, ಮೊದಲ ಬಾರಿ ಮಂಗಳೂರು ವಿಶ್ವವಿದ್ಯಾನಿಲಯವು ಮರಣೋತ್ತರ ಡಾಕ್ಟರೇಟ್ ಪದವಿಯನ್ನು ವಿಶ್ವವಿದ್ಯಾನಿಲಯದ ಲಾಂಛನದೊಂದಿಗೆ ಕುಲಾಧಿಪತಿಗಳ ಅನುಮತಿಯೊಂದಿಗೆ ನೀಡಲಾಗುತ್ತಿದೆ ಎಂದರು.
ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ, ಗೋವಿಂದ ಭಟ್ ಯಕ್ಷಜೀವನದ ಕುರಿತು ಸಂಶೋಧನಾ ಪುಸ್ತಕ ಹೊರಬರಬೇಕು ಎಂದರು. ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಭಟ್ಟರ ಜೊತೆಗಿನ ಒಡನಾಟ ಸ್ಮರಿಸಿದರು.
ರಿಜಿಸ್ಟ್ರಾರ್ ಪ್ರೊ. ಗಣೇಶ್ ಸಂಜೀವ್, ಪರೀಕ್ಷಾಂಗ ಕುಲಸಚಿವ ಡಾ. ದೇವೇಂದ್ರಪ್ಪ, ಹಣಕಾಸು ಅಧಿಕಾರಿ ಪಂಚಲಿಂಗಸ್ವಾಮಿ, ಐಕ್ಯುಎಸಿ ನಿರ್ದೇಶಕಿ ಪ್ರೊ. ಮೋನಿಕಾ ಸದಾನಂದ ಮತ್ತು ಸಹಾಯಕ ಕುಲಸಚಿವೆ ಸುಚೇತಾ ಕೆ. ಉಪಸ್ಥಿತರಿದ್ದರು.
ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ. ಟಿ. ಶಾಮ ಭಟ್ ಅವರು ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ಪರವಾಗಿ ಸ್ವಾಗತಿಸಿದರು. ಕಲಾವಿದ ಹರೀಶ್ ಬೊಳಂತಿಮೊಗರು ಕಾರ್ಯಕ್ರಮ ನಿರ್ವಹಿಸಿದರು. ವಿದ್ವಾಂಸ ಹಿರಣ್ಯ ವೆಂಕಟೇಶ್ವರ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಗೋವಿಂದಾರ್ಪಣ ಯಕ್ಷಗಾನ ಕಾರ್ಯಕ್ರಮ ನಡೆಯಿತು.