ಸಿಇಟಿ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಗಳ ಜನಿವಾರವನ್ನು ಬಲವಂತವಾಗಿ ತೆಗೆಸಿದ ಕ್ರಮಕ್ಕೆ ಖಂಡನೆ
ಮಂಗಳೂರು: ಸಿಇಟಿ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಗಳ ಜನಿವಾರವನ್ನು ಬಲವಂತವಾಗಿ ತೆಗೆಸಿದ ಕ್ರಮವನ್ನು ಎಐಡಿಎಸ್ಓ ಕರ್ನಾಟಕ ರಾಜ್ಯ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದು ಜಿಲ್ಲಾ ಸಂಚಾಲಕ ವಿನಯ್ಚಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಧರಿಸುವ ಯಾವುದೇ ವೈಯಕ್ತಿಕ ಧಾರ್ಮಿಕ ಚಿಹ್ನೆಗಳನ್ನು ತೆಗೆಸಬಾರದು ಎಂದು ಕೆಇಎ ಮಾರ್ಗಸೂಚಿಗಳಿದ್ದರು ಸಹ, ಕೆಲವು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಜನಿವಾರ ತೆಗೆಯುವಂತೆ ಒತ್ತಾಯಿಸಿದ್ದಾರೆ. ಜೊತೆಗೆ, ಒಂದು ಕಡೆ ಜನಿವಾರವನ್ನು ಬಲವಂತದಿಂದ ಕಿತ್ತು ಹಾಕಿದ್ದಾರೆ. ಕಳೆದ ವರ್ಷವೂ ಇಂತಹ ಘಟನೆಗಳು ನಡೆದಿದ್ದವು.
ಖಾಸಗಿ ಶಾಲಾ ಕಾಲೇಜುಗಳು ಸೇರಿದಂತೆ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲೇ ಧಾರ್ಮಿಕ ಹಬ್ಬಗಳು ಮತ್ತು ಚಟುವಟಿಕೆಗಳು ಬಹಿರಂಗವಾಗಿ ನಡೆಯುತ್ತಿರುವಾಗ, ವಿದ್ಯಾರ್ಥಿಗಳ ವೈಯಕ್ತಿಕ ನಂಬಿಕೆಗಳ ಮೇಲೆ ದಾಳಿ ಮಾಡುವುದು ಅವರಲ್ಲಿ ಆಳವಾದ ಮಾನಸಿಕ ಆಘಾತವನ್ನು ಉಂಟುಮಾಡುತ್ತದೆ. ಸಾಮಾಜಿಕ ವಿಷಯಗಳಲ್ಲಿ ಧರ್ಮವನ್ನು ಗುರುತಿಸದಿರುವುದು ಅಥವಾ ಪ್ರೋತ್ಸಾಹಿಸದಿರುವುದೇ ನಿಜವಾದ ಧರ್ಮನಿರಪೇಕ್ಷ ರಾಷ್ಟ್ರದ ಲಕ್ಷಣವಾಗಿದೆ.
ಮಹಾನ್ ವಿವೇಕಾನಂದರು ಕೂಡ ಇದನ್ನೇ ಹೇಳಿದ್ದರು. ಆದರೂ ಶಿಕ್ಷಣ ಕ್ಷೇತ್ರ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಇದು ಎಗ್ಗಿಲ್ಲದೆ ನಡೆಯುತ್ತಿದೆ ಮತ್ತು ವೈಯಕ್ತಿಕವಾಗಿ ವಿದ್ಯಾರ್ಥಿಗಳನ್ನು ಗುರಿಪಡಿಸಲಾಗುತ್ತಿದೆ. ಇದೆಲ್ಲವೂ ಹಿಜಾಬ್ ವಿವಾದದೊಂದಿಗೆ ಪ್ರಾರಂಭವಾಯಿತು. ನಾಲ್ಕು ವರ್ಷಗಳ ಹಿಂದೆ ಯುವತಿಯರನ್ನು ಹಿಜಾಬ್ ಧರಿಸಿದ್ದಕ್ಕಾಗಿ ಗುರಿಪಡಿಸಲಾಯಿತು ಮತ್ತು ಅವರ ಶಿಕ್ಷಣದ ಹಕ್ಕನ್ನು ಮೊಟಕುಗೊಳಿಸಲಾಯಿತು. ಆ ಘಟನೆಯನ್ನು ನೈಜ ಧರ್ಮ ನಿರಪೇಕ್ಷ ತತ್ವಗಳೊಂದಿಗೆ ನಿರ್ವಹಿಸದ ಕಾರಣ, ಅದರ ಪರಿಣಾಮವು ಇಂದು ಇತರ ಧರ್ಮಗಳ ವಿದ್ಯಾರ್ಥಿಗಳ ವಿಷಯದಲ್ಲೂ ಮರುಕಳಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ.
ವೈಯಕ್ತಿಕ ನಂಬಿಕೆಗಳ ಮೇಲೆ ದಾಳಿ ಮಾಡುವುದಲ್ಲ, ಬದಲಾಗಿ ಸರ್ಕಾರವು ಯಾವುದೇ ಧರ್ಮಕ್ಕೆ ಆಶ್ರಯ ನೀಡದಿರುವುದೇ ನಿಜವಾದ ಧರ್ಮನಿರಪೇಕ್ಷತೆ ಎಂದು ಎಐಡಿಎಸ್ಒ ನಂಬುತ್ತದೆ. ಧಾರ್ಮಿಕ ಚಿಹ್ನೆಗಳ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ಗುರಿಪಡಿಸುವುದು ಧರ್ಮನಿರಪೇಕ್ಷಾ ತತ್ವದ ಆಶಯಗಳಿಗೆ ತದ್ವಿರುದ್ಧವಾಗಿದೆ.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಾಜ್ಯ ಸರ್ಕಾರವು ಮಧ್ಯಪ್ರವೇಶಿಸಿ, ಯುವ ವಿದ್ಯಾರ್ಥಿಗಳ ಮನಸ್ಸನ್ನು ಘಾಸಿ ಗೊಳಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಎಐಡಿಎಸ್ಓ ಮನವಿ ಮಾಡುತ್ತದೆ. ಶಿಕ್ಷಣ ಸಂಸ್ಥೆಗಳಲ್ಲಿ ನೈಜ ಧರ್ಮ ನಿರಪೇಕ್ಷತೆಯನ್ನು ಬಲಪಡಿಸಲು ಸರ್ಕಾರವು ದೃಢವಾದ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಎಐಡಿಎಸ್ಓ ಕರ್ನಾಟಕ ರಾಜ್ಯ ಸಮಿತಿಯು ಆಗ್ರಹಿಸುತ್ತದೆ ಎಂದು ವಿನಯ್ಚಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.