ಮಹಿಳಾ ಕಾಂಗ್ರೆಸ್ ವಿರುದ್ಧ ಬಿಜೆಪಿ‌ ಮಹಿಳಾ ಮೋರ್ಚಾದಿಂದ ಜನಾಕ್ರೋಶ ಪ್ರತಿಭಟನಾ ಪಾದಯಾತ್ರೆ

ಮಹಿಳಾ ಕಾಂಗ್ರೆಸ್ ವಿರುದ್ಧ ಬಿಜೆಪಿ‌ ಮಹಿಳಾ ಮೋರ್ಚಾದಿಂದ ಜನಾಕ್ರೋಶ ಪ್ರತಿಭಟನಾ ಪಾದಯಾತ್ರೆ


ಮಂಗಳೂರು: ಕೇಂದ್ರ ಸರ್ಕಾರ ಮಹಿಳೆಯರಿಗೆ ಶೇ.33 ಮೀಸಲಾತಿ ನೀಡುವುದನ್ನು ವಿರೋಧಿಸಿ ಪ್ರಜಾಪ್ರಭುತ್ವದ ಆಶಯಕ್ಕೆ ಅಡ್ಡಿಯುಂಟುಮಾಡಿದ ಮಹಿಳಾ ವಿರೋಧಿ ಕಾಂಗ್ರೆಸ್ ವಿರುದ್ಧ ಮಂಗಳೂರು ನಗರ ದಕ್ಷಿಣ ಮಂಡಲದ ಮಹಿಳಾ ಮೋರ್ಚಾ ನೇತೃತ್ವದಲ್ಲಿ "ಜನಾಕ್ರೋಶ ಪ್ರತಿಭಟನಾ ಪಾದಯಾತ್ರೆ"ಯು ನಡೆಯಿತು.


ಈ ವೇಳೆ ಶಾಸಕ ವೇದವ್ಯಾಸ ಕಾಮತ್ ರವರು ಮಾತನಾಡಿ, ಮೋದಿ ಸರ್ಕಾರದ ಮಹತ್ವಾಕಾಂಕ್ಷಿಯ ಮಹಿಳಾ ಮಸೂದೆಯನ್ನು ಬಲಿಕೊಟ್ಟ ಕಾಂಗ್ರೆಸ್ ಹಾಗೂ ಇತರ ಪಕ್ಷಗಳಿಗೆ ಭವಿಷ್ಯತ್ತಿನಲ್ಲಿ ದೇಶದ ಮಹಿಳೆಯರು ಪಾಠ ಕಲಿಸಲಿದ್ದಾರೆ. ಎಪ್ಪತ್ತು ಕೋಟಿ ಮಹಿಳೆಯರ ಮೀಸಲಾತಿ ಹಕ್ಕನ್ನು ಕಸಿದುಕೊಂಡವರನ್ನು ಇತಿಹಾಸ ಎಂದಿಗೂ ಮರೆಯುವುದಿಲ್ಲ ಎಂದರು.


ತೊಟ್ಟಿಲು ತೂಗುವ ಕೈಗಳು ದೇಶವನ್ನು ಸಹ ಆಳಬಲ್ಲವು ಎಂಬುದನ್ನು ಮೋದೀಜಿಯವರು ಅರ್ಥೈಸಿಕೊಂಡಿದ್ದಾರೆ. ಆದರೆ ಕಾಂಗ್ರೆಸ್ ಗೆ ಇನ್ನೂ ಅರ್ಥವಾಗಿಲ್ಲ. ಮಹಿಳಾ ಮೀಸಲಾತಿ ಮಸೂದೆಯನ್ನು ಕಡೆಗಣಿಸಿ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ಸಂಭ್ರಮಿಸಿದ್ದನ್ನು ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ಮಹಿಳಾ ಮೋರ್ಚಾವು ತೀವ್ರವಾಗಿ ಖಂಡಿಸುತ್ತದೆ ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪೂರ್ಣಿಮಾ ಹೇಳಿದರು.

ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಮಾತನಾಡಿ ದೇಶದ ರಾಷ್ಟ್ರಪತಿಯಂತಹ ಸ್ಥಾನದಲ್ಲಿ ಮಹಿಳೆಯರು ಇದ್ದಾರೆ. ಅವರು ದೇಶವನ್ನು ಮುನ್ನಡೆಸಲು ಸಮರ್ಥರು. ಹಾಗಿದ್ದೂ ಕಾಂಗ್ರೆಸ್ ಮಹಿಳೆಯರಿಗೆ ಅವಮಾನಿಸುವ ಕೆಲಸ ಮಾಡುತ್ತಿದೆ ಎಂದರು.

ದೇಶಕ್ಕೆ ಅಗತ್ಯವಿರುವ ಪ್ರತೀ ಸುಧಾರಣೆಗಳಿಗೂ ಅಡ್ಡಿಪಡಿಸುವುದೇ ಕಾಂಗ್ರೆಸ್ಸಿನ ಹುಟ್ಟುಗುಣ. ಡಿಜಿಟಲ್ ಪೇಮೆಂಟ್, ತ್ರಿವಳಿ ತಲಾಕ್ ನಿಷೇಧ, ಸಮಾನ ನಾಗರಿಕ ಸಂಹಿತೆ, ಅಕ್ರಮ ವಲಸಿಗರನ್ನು ಹೊರಹಾಕುವುದು, ಸೇರಿದಂತೆ ಈಗ ೩೩% ಮಹಿಳಾ ಮೀಸಲಾತಿಗೂ ಅಡ್ಡಗಾಲು ಹಾಕಿ ತಾವು ಎಂದಿಗೂ ಮಹಿಳಾ ವಿರೋಧಿಗಳು ಎಂಬುದನ್ನು ಸಾಬೀತು ಪಡಿಸಿದ್ದಾರೆ ಎಂದು ಮಂಡಲದ ಮಹಿಳಾ ಮೋರ್ಚಾ ಅಧ್ಯಕ್ಷೆ ಪೂರ್ಣಿಮಾ ರಾವ್ ಹೇಳಿದರು.

ಈ ಸಂದರ್ಭದಲ್ಲಿ ಮಂಡಲದ ಅಧ್ಯಕ್ಷರಾದ ರಮೇಶ್ ಕಂಡೆಟ್ಟು, ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ಹೆಗ್ಡೆ, ಲಲೇಶ್ ಕುಮಾರ್, ಮಂಡಲದ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಕಮಲಾಕ್ಷಿ, ಶಬರಿ ಶೆಟ್ಟಿ, ಪ್ರಮುಖರಾದ ಸಂಧ್ಯಾ ವೆಂಕಟೇಶ್, ನಿಕಟಪೂರ್ವ ಮನಪಾ ಸದಸ್ಯರುಗಳು, ಸೇರಿದಂತೆ ಮಂಡಲದ ಮಹಿಳಾ ಮೋರ್ಚಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article