ಶಂಕರರ ಆದರ್ಶ, ತತ್ವಗಳು ಸಾರ್ವಕಾಲಿಕ: ಐವನ್ ಡಿ’ಸೋಜಾ

ಶಂಕರರ ಆದರ್ಶ, ತತ್ವಗಳು ಸಾರ್ವಕಾಲಿಕ: ಐವನ್ ಡಿ’ಸೋಜಾ


ಮಂಗಳೂರು: ಶ್ರೀ ಶಂಕರಾಚಾರ್ಯರು ಪ್ರಪಂಚಕ್ಕೇ ಶ್ರೇಷ್ಠರು. ಅವರ ಆದರ್ಶ, ತತ್ವಗಳು ಸಾರ್ವಕಾಲಿಕವಾಗಿದೆ. ಜಾತಿ, ಮತ, ಬೇಧವಿಲ್ಲದೇ ಸರ್ವರನ್ನೂ ಒಂದುಗೂಡಿಸಿದ ಮಹಾತ್ಮರು. ಅವರನ್ನು ನೆನಪಿಸಿಕೊಂಡು, ಅನುಸರಿಸುವುದು ಅತ್ಯಂತ ಅವಶ್ಯ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಹೇಳಿದರು.

ಅವರು ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಮಂಗಳೂರು ಹವ್ಯಕ ಮಂಡಲ ಸಹಯೋಗದೊಂದಿಗೆ ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯ ಶಂಕರಶ್ರೀ ಸಭಾಭವನದಲ್ಲಿ ನಡೆದ ಶ್ರೀ ಶಂಕರಾಚಾರ್ಯ ಜಯಂತಿ ಸಮಾರಂಭ ಉದ್ಘಾಟಿಸಿ, ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಶಾಲೆಟ್ ಲವೀನಾ ಪಿಂಟೊ ಮಾತನಾಡಿ, ಶ್ರೀ ಶಂಕರಾಚಾರ್ಯರ ಸಾಧನೆ, ಆದರ್ಶ, ಮಾಹಿತಿ ತಲುಪಲು ಅರ್ಹವಾದ ಶಿಕ್ಷಣ ಸಂಸ್ಥೆಯಲ್ಲಿ ಸರಕಾರದಿಂದ ಶ್ರೀ ಶಂಕರಾಚಾರ್ಯ ಜಯಂತಿ ಆಚರಿಸುವುದು ಸೂಕ್ತವಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ ಮಾತನಾಡಿ, ಗುರುಕುಲ ಮಾದರಿಯಲ್ಲಿ ವೇದಾಧ್ಯಯನ ನಡೆಯುತ್ತಿರುವ ಸ್ಥಳದಲ್ಲಿ ಶ್ರೀ ಶಂಕರಾಚಾರ್ಯರ ಮಹತ್ವವನ್ನು ಸಾರಲಾಗಿದೆ. ಅವರ ಆದರ್ಶ, ತತ್ವಗಳನ್ನು ಅನುಸರಿಸಲು ಮಕ್ಕಳಿಗೆ ಯೋಗ್ಯ ಮಾಹಿತಿ ಲಭ್ಯವಾಯಿತು ಎಂದು ಹೇಳಿದರು.

ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯ ಕಾರ್ಯಾಧ್ಯಕ್ಷ ಗಣೇಶ ಮೋಹನ ಕಾಶಿಮಠ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ, ಮಂಗಳೂರು ಮಧ್ಯ ಹವ್ಯಕ ವಲಯಾಧ್ಯಕ್ಷ ಅನಂತಸುಬ್ರಹ್ಮಣ್ಯ ಶರ್ಮ ಉಪನ್ಯಾಸ ನೀಡಿದರು.

ಮಂಗಳೂರು ಹವ್ಯಕ ಮಂಡಲ ಪ್ರಧಾನ ಕಾರ್ಯದರ್ಶಿ ಉಮೇಶ್ ಭಟ್ ಕೋಣೆಮ್ಮೆ, ಶಂಕರಶ್ರೀ ವೇದಪಾಠಶಾಲೆ ಮುಖ್ಯ ಗುರು ವೇ.ಮೂ. ಅಮೈ ಶಿವಪ್ರಸಾದ ಭಟ್, ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯ ಕಾರ್ಯದರ್ಶಿ ಶ್ರೀಕೃಷ್ಣ ನೀರಮೂಲೆ ಮತ್ತಿತರರು ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ. ಸ್ವಾಗತಿಸಿದರು. ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯ ಪ್ರಾಂಶುಪಾಲ ಸಂದೀಪ್ ಆಚಾರ್ಯ ವಂದಿಸಿದರು. ನಿವೃತ್ತ ಮುಖ್ಯೋಪಾಧ್ಯಾಯ ಭಾಸ್ಕರ ಹೊಸಮನೆ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article