ನೆನಪಿನ ದೋಣಿಯಲ್ಲಿ 50 ವರ್ಷ: 1976ರ ಬಿ.ಎ. ಫೈನಲ್ ಬ್ಯಾಚ್ನ ಸುವರ್ಣ ಸಂಭ್ರಮದ ಪುನರ್ಮಿಲನ
Friday, April 3, 2026
ಪುತ್ತೂರು: ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜಿನ 1976ರ ಬಿ.ಎ. ಫೈನಲ್ ಬ್ಯಾಚ್ನ ಹಿರಿಯ ವಿದ್ಯಾರ್ಥಿಗಳು ತಮ್ಮ ಪದವಿ ಶಿಕ್ಷಣ ಮುಗಿಸಿ 50 ವರ್ಷಗಳು ಪೂರೈಸಿದ ಸವಿನೆನಪಿಗಾಗಿ ಹಮ್ಮಿಕೊಂಡಿದ್ದ ‘ಸುವರ್ಣ ಸಂಭ್ರಮ-ಪುನರ್ಮಿಲನ’ ಕಾರ್ಯಕ್ರಮವು ಮಾರ್ಚ್ 28ರಂದು ಕಾಲೇಜು ಆವರಣದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು.
ಅರ್ಧ ಶತಮಾನದ ಹಿಂದಿನ ಕಾಲೇಜು ಜೀವನದ ಸವಿನೆನಪುಗಳನ್ನು ಹಂಚಿಕೊಂಡ ಹಿರಿಯ ವಿದ್ಯಾರ್ಥಿಗಳು, ಅಂದಿನ ಪ್ರಾಂಶುಪಾಲರಾದ ವಂ. ಫಾ. ಸೆರಾವೊ, ವಂ. ಫಾ. ಹೆನ್ರಿ ಕಾಸ್ಟಲೀನೊ ಹಾಗೂ ಅಂದಿನ ಹಾಸ್ಟೆಲ್ ವಾರ್ಡನ್ ವಂ. ಫಾ. ಲಾರೆನ್ಸ್ ಮೆಂಡೋನ್ಸಾ ಅವರ ಶಿಸ್ತುಬದ್ಧ ಮಾರ್ಗದರ್ಶನವನ್ನು ಹೆಮ್ಮೆಯಿಂದ ಸ್ಮರಿಸಿದರು.
ಇದೇ ಸಂದರ್ಭದಲ್ಲಿ ಕಾಲೇಜಿನ ನಿವೃತ್ತ ಹಿಂದಿ ಪ್ರಾಧ್ಯಾಪಕಿ ವಾಸಂತಿ ಸೀತಾರಾಮ ಗೌಡ ಹಾಗೂ ಅಂದು ಗ್ರಂಥಾಲಯದಲ್ಲಿ ಸೇವೆ ಸಲ್ಲಿಸಿದ್ದ ನಿವೃತ್ತ ಸಿಬ್ಬಂದಿ ನಾರ್ಬರ್ಟ್ ಕೊರ್ರೇಯಾ ಅವರನ್ನು ಹಿರಿಯ ವಿದ್ಯಾರ್ಥಿಗಳು ಗೌರವಪೂರ್ಣವಾಗಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕಾಲೇಜಿನ ಸಂಚಾಲಕರಾದ ಅತಿ ವಂ. ಲಾರೆನ್ಸ್ ಮಸ್ಕರೇನ್ಹಸ್ ಅವರು ಮಾತನಾಡಿ, ಹಳೆಯ ವಿದ್ಯಾರ್ಥಿಗಳು 50 ವರ್ಷಗಳ ನಂತರವೂ ತಮ್ಮ ವಿದ್ಯಾಸಂಸ್ಥೆಯನ್ನು ನೆನಪಿಟ್ಟುಕೊಂಡು ಒಂದೆಡೆ ಸೇರಿರುವುದು ಶ್ಲಾಘನೀಯ ಎಂದರು.
ಪ್ರಾಂಶುಪಾಲರಾದ ವಂ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಮತ್ತು ಉಪ ಪ್ರಾಂಶುಪಾಲರಾದ ಡಾ. ವಿಜಯ ಕುಮಾರ್ ಎಂ ಅವರು ಉಪಸ್ಥಿತರಿದ್ದು ಶುಭ ಹಾರೈಸಿದರು.
ಕಾರ್ಯಕ್ರಮದ ಯಶಸ್ಸಿನ ಹಿಂದೆ ಚಿದಾನಂದ ನಾಯಕ್ ಮತ್ತು ವಾಮನ್ ಉಬಾರ್ ಅವರ ಪರಿಶ್ರಮವಿದ್ದು, ಹಿರಿಯ ವಿದ್ಯಾರ್ಥಿಗಳಾದ ಡಾ. ಕೆ.ಎನ್. ಅಡಿಗ ಮತ್ತು ರೀಟಾ ಮೆನೆಜಸ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.
ಮೇರಿ ಲೋಬೊ, ವಿನ್ನಿ ಡಿಮೆಲ್ಲೊ ಹಾಗೂ ರೀಟಾ ಮೆನೆಜಸ್ ಪ್ರಾರ್ಥಿಸಿದರು ಮತ್ತು ಅಡ್ವೊ. ಕೇಶವ ಭಟ್ ಸ್ವಾಗತಿಸಿ, ಚಿದಾನಂದ ನಾಯಕ್ ಪ್ರಸ್ತಾವನೆಗೈದರು. ಶಾಂತ ಕುಮಾರಿ ಅವರು ಅಗಲಿದ ಸಹಪಾಠಿಗಳು ಹಾಗೂ ಗುರುಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಸಂಪತ್ ಕುಮಾರ್ ವಂದಿಸಿದರು. ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದು ಸಹಕರಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಕಾಲೇಜಿನ ಚೆಂಡೆ ಮೇಳದ ವಿದ್ಯಾರ್ಥಿಗಳು ಅತಿಥಿಗಳನ್ನು ಹಾಗೂ ಹಿರಿಯ ವಿದ್ಯಾರ್ಥಿಗಳನ್ನು ವಾದ್ಯ ಘೋಷಗಳೊಂದಿಗೆ ಭವ್ಯವಾಗಿ ಸಭಾಂಗಣಕ್ಕೆ ಬರಮಾಡಿಕೊಂಡರು.
ಈ ಸುವರ್ಣ ಸಂಭ್ರಮವು ಹಳೆಯ ಗೆಳೆಯರ ಮಿಲನಕ್ಕೆ ಸಾಕ್ಷಿಯಾಗಿದ್ದಲ್ಲದೆ, ಗುರು-ಶಿಷ್ಯರ ಸಂಬಂಧದ ಪಾವಿತ್ರ್ಯತೆಯನ್ನು ಎತ್ತಿ ಹಿಡಿಯುವಂತಿತ್ತು.



