ಅಧಿಕೃತ ಗೋ ಶಾಲೆ ಸ್ಥಾಪಿಸಲಿ
ಮಂಗಳೂರು: ರಾಜ್ಯ ಸರಕಾರ ಗೋಹತ್ಯಾ ನಿಷೇಧ ಕಾಯ್ದೆ ಜಾರಿಗೆ ಪೂರಕವೆಂಬಂತೆ ರಾಜ್ಯ ಸರಕಾರ ಪಶು ಸಂಗೋಪನೆ ಇಲಾಖೆ, ಅರಣ್ಯ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಯ ಜಂಟಿ ಯೋಜನೆಯಲ್ಲಿ ಅಧಿಕೃತ ಗೋಶಾಲೆ ಸ್ಥಾಪಿಸಲಿ ಎಂದು ಕೆ. ಅಶ್ರಫ್ ಆಗ್ರಹಿಸಿದ್ದಾರೆ.
ಗೋಹತ್ಯಾ ನಿಷೇಧ ಕಾಯ್ದೆಯ ಪರಿಣಾಮವಾಗಿ ಮುಸ್ಲಿಮರು ಪೌಷ್ಟಿಕ ಆಹಾರವಾದ ಪಶು ಮಾಂಸವನ್ನು ಭಕ್ಷಿಸಲು ಅಸಾಧ್ಯವಾಗಿದೆ, ರಾಜ್ಯದ ರೈತರು ತಮ್ಮ ಜಾನುವಾರುಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವಂತಿಲ್ಲ, ಮುಸಲ್ಮಾನರು ಖರೀದಿಸುವಂತೆಯೂ ಇಲ್ಲ. ರೈತರಿಗೆ ನಿರುಪಯುಕ್ತ ಗೋವುಗಳನ್ನು ಸಾಕಲು ಖರ್ಚು ಅಧಿಕವಾಗಿದೆ ಎಂದು ತಿಳಿಸಿದ್ದಾರೆ.
ಆದುದರಿಂದ, ರಾಜ್ಯ ಸರ್ಕಾರ ರೈತರ ಮತ್ತು ಈ ದೇಶದ ನಂಬಿಕೆಗೆ ಪೂರಕವಾಗಿ ಅಧಿಕೃತ ಗೋಶಾಲೆ ಸ್ಥಾಪಿಸಿ, ಹಾಲಿ ರೈತರು ಮಾರಾಟ ಮಾಡಲು ಅಸಾಧ್ಯವಾದ ಗೋವುಗಳನ್ನು ಸರಕಾರದ ಬೊಕ್ಕಸದಿಂದ ಹಣ ವ್ಯಯ ಮಾಡಿ ಬೆಂಬಲ ಬೆಲೆ ಘೋಷಿಸಿ ರೈತರಿಂದ ಖರೀದಿ ಮಾಡಲಿ ಎಂದು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಗೋ ಸಮಸ್ಯೆಗಳನ್ನು ಅಧ್ಯಯನ ಮಾಡಿದ ವಿವಿಧ ತಜ್ಞ ಸಂಘಟನೆಗಳ ಸಲಹೆ ಕೂಡ ಪಡೆಯುವುದು ಸೂಕ್ತ. ಸಾಧ್ಯವಾದರೆ ರಾಜ್ಯ ಸರಕಾರ ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಲು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಲಿ ಎಂದಿದ್ದಾರೆ.
ರಸ್ತೆ ಸಂಚಾರಕ್ಕೆ ತಡೆ ಒಡ್ಡುವ ಗೋವುಗಳನ್ನು ಕಂಡಲ್ಲಿ, ಸಾರ್ವಜನಿಕರು ಪೊಲೀಸ್ ಇಲಾಖೆಗೆ ಪೂರ್ವ ಮಾಹಿತಿ ನೀಡಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕಟ್ಟಿ ಹಾಕಬೇಕಾಗಿ ಪ್ರಕಟನೆಯಲ್ಲಿ ವಿನಂತಿಸಿದ್ದಾರೆ.